Apr 18, 2026 Languages : ಕನ್ನಡ | English

"ನನಗೂ ಹೀಗೆ ಮಾಡಿದ್ರು, ಈಗ ವಿನಯ್ ಸರದಿ" - ದೆಹಲಿಯಿಂದ ಡಿಕೆಶಿ ನೀಡಿದ ಸ್ಪೋಟಕ ಹೇಳಿಕೆ!!

ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟವಾದ ಬೆನ್ನಲ್ಲೇ, ರಾಜ್ಯ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಶುರುವಾಗಿದೆ. ಈ ಬಗ್ಗೆ ದೆಹಲಿಯ ಕರ್ನಾಟಕ ಭವನದಲ್ಲಿ ಮಾತನಾಡಿದ ಡಿ.ಸಿ.ಎಂ ಡಿ.ಕೆ. ಶಿವಕುಮಾರ್ ಅವರು ವಿನಯ್ ಕುಲಕರ್ಣಿ ಬೆನ್ನಿಗೆ ನಿಂತಿದ್ದಾರೆ. "ಇದು ಬಿಜೆಪಿಯವರು ಮಾಡಿದ ದೊಡ್ಡ ಪ್ಲ್ಯಾನ್" ಎಂದು ಗುಡುಗಿದ್ದಾರೆ.

ಜೀವಾವಧಿ ಶಿಕ್ಷೆ ಬೆನ್ನಲ್ಲೇ ವಿನಯ್ ಕುಲಕರ್ಣಿ ಬೆನ್ನಿಗೆ ನಿಂತ ಕಾಂಗ್ರೆಸ್ ಹೈಕಮಾಂಡ್
ಜೀವಾವಧಿ ಶಿಕ್ಷೆ ಬೆನ್ನಲ್ಲೇ ವಿನಯ್ ಕುಲಕರ್ಣಿ ಬೆನ್ನಿಗೆ ನಿಂತ ಕಾಂಗ್ರೆಸ್ ಹೈಕಮಾಂಡ್

"ಸತ್ಯಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ"

ಡಿ.ಕೆ. ಶಿವಕುಮಾರ್ ಅವರು ವಿನಯ್ ಕುಲಕರ್ಣಿ ಅವರ ಪರವಾಗಿ ಬ್ಯಾಟ್ ಮಾಡುತ್ತಾ, "ನನಗೆ ನ್ಯಾಯಾಲಯದ ಮೇಲೆ ಗೌರವ ಇದೆ. ಆದರೆ ಈ ಇಡೀ ಪ್ರಕರಣದ ಹಿಂದೆ ದೊಡ್ಡ ಸಂಚು ನಡೆದಿದೆ. ಉತ್ತರ ಕರ್ನಾಟಕದಲ್ಲಿ ಒಬ್ಬ ನಾಯಕ ಶಕ್ತಿಯಾಗಿ ಬೆಳೆಯುತ್ತಿರೋದನ್ನು ಸಹಿಸದ ಬಿಜೆಪಿಯವರು, ಒಳಸಂಚು ಮಾಡಿ ವಿನಯ್ ಕುಲಕರ್ಣಿಯವರನ್ನು ಬಲಿಪಶು ಮಾಡಿದ್ದಾರೆ" ಎಂದು ನೇರವಾಗಿ ಕಿಡಿಕಾರಿದರು.

ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಡಿಕೆಶಿ, "ನನ್ನ ವಿರುದ್ಧವೂ ಕೂಡ ಇಂಥದ್ದೇ ಅದೆಷ್ಟೋ ಸಂಚುಗಳು ನಡೆದವು. ನಾನು ಸಾಕಷ್ಟು ಅನುಭವಿಸಿದೆ. ಆದರೆ ಕೊನೆಗೆ ನನಗೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಕ್ಕಿತು. ಹಾಗೆಯೇ ವಿನಯ್ ಕುಲಕರ್ಣಿ ಅವರಿಗೂ ಮೇಲಿನ ಕೋರ್ಟ್‌ನಲ್ಲಿ ಖಂಡಿತ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ನನಗಿದೆ" ಎಂದು ಧೈರ್ಯ ತುಂಬಿದರು.

ಸಿಬಿಐ ತನಿಖೆ ಬಗ್ಗೆ ಡಿಕೆಶಿ ಪ್ರಶ್ನೆ

ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ ರೀತಿಗೆ ಡಿ.ಕೆ. ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಪೊಲೀಸರು ಈ ಕೇಸ್‌ನಲ್ಲಿ ಬಿ-ರಿಪೋರ್ಟ್ (ಅಂದ್ರೆ ಕೇಸ್ ಕ್ಲೋಸ್ ಮಾಡೋದು) ಸಲ್ಲಿಸಲು ತಯಾರಿ ನಡೆಸಿದ್ದರು. ಆ ಸಮಯದಲ್ಲಿ ಬೇಕಂತಲೇ ಸಿಬಿಐಗೆ ಕೇಸ್ ಕೊಡಲಾಯಿತು. ಇದು ಕೇವಲ ರಾಜಕೀಯ ಕಿರುಕುಳ ನೀಡಲು ಮಾಡಿದ ತಂತ್ರವಲ್ಲದೆ ಬೇರೇನೂ ಅಲ್ಲ" ಎಂದು ಅವರು ಹೇಳಿದರು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗಳ ಬಗ್ಗೆ ಟಾಂಗ್ ನೀಡಿದ ಡಿಕೆಶಿ, "ನಾನು ಅವತ್ತೇ ಹೇಳಿದ್ದೆ ಎಂದು ಯಡಿಯೂರಪ್ಪ ಅವರು ಹೇಳುತ್ತಿದ್ದಾರಲ್ಲಾ, ಅಷ್ಟೊಂದು ಮುಂಚಿತವಾಗಿ ಅವರಿಗೆ ಈ ವಿಷಯ ಹೇಗೆ ಗೊತ್ತಾಯಿತು? ಇದರಲ್ಲೇ ಗೊತ್ತಾಗುತ್ತೆ ಇದು ಬಿಜೆಪಿಯ ಒಳಸಂಚು ಅಂತ. ಸಮಯ ಬಂದಾಗ ಯಾರ್ಯಾರು ಇದರಲ್ಲಿದ್ದಾರೆ ಅನ್ನೋದನ್ನು ನಾನೇ ಹೇಳ್ತೀನಿ" ಎಂದು ಎಚ್ಚರಿಕೆ ನೀಡಿದರು.

ಕಾರ್ಯಕರ್ತರಿಗೆ ಕಿವಿಮಾತು

"ನಾನು ವಿನಯ್ ಕುಲಕರ್ಣಿ ಅವರ ಕುಟುಂಬದವರ ಜೊತೆ ಮಾತನಾಡಿದ್ದೇನೆ. ಅವರು ದೇವರ ಮೇಲೆ ಆಣೆ ಮಾಡಿ ತಾವು ನಿರ್ದೋಷಿ ಎಂದು ಹೇಳಿದ್ದಾರೆ. ಅವರ ಮೇಲೆ ನನಗೆ ಪೂರ್ಣ ನಂಬಿಕೆ ಇದೆ" ಎಂದು ಹೇಳಿದ ಡಿಕೆಶಿ, ಕಾಂಗ್ರೆಸ್ ಕಾರ್ಯಕರ್ತರು ಈ ತೀರ್ಪಿನಿಂದ ಧೈರ್ಯ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು.

ಕೆಳ ನ್ಯಾಯಾಲಯದ ತೀರ್ಪು ವಿನಯ್ ಕುಲಕರ್ಣಿ ಅವರಿಗೆ ಶಾಕ್ ನೀಡಿದ್ದರೂ, ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರು ಅವರ ಪರವಾಗಿ ನಿಂತಿದ್ದಾರೆ. ಕಾನೂನುಬದ್ಧವಾಗಿ ಮೇಲ್ಮನವಿ ಸಲ್ಲಿಸಲು ಎಲ್ಲಾ ರೀತಿಯ ಅವಕಾಶಗಳಿದ್ದು, ಮುಂದಿನ ಹೋರಾಟ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ ಎನ್ನುವುದು ಡಿಕೆಶಿ ಮಾತಿನ ಅರ್ಥ.

Latest News