Feb 16, 2026 Languages : ಕನ್ನಡ | English

ಷರತ್ತುಗಳೊಂದಿಗೆ ಮತ್ತೆ ಚಿನ್ನಸ್ವಾಮಿಯಲ್ಲಿ ಗರ್ಜಿಸಲಿರುವ ವಿರಾಟ್ ಪಡೆ - ಐಪಿಎಲ್ ಹವಾ ಶುರು!!

ಬೆಂಗಳೂರು ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ಮತ್ತೆ ನಡೆಯಲಿವೆ ಎಂದು ಕರ್ನಾಟಕ ಕಾಂಗ್ರೆಸ್ ಘೋಷಿಸಿದೆ. ಈ ನಿರ್ಧಾರವು ಜಸ್ಟಿಸ್ ಜಾನ್ ಮೈಕೆಲ್ ಡಿ’ಕುನಾ ವರದಿ ಹಾಗೂ ಮಹೇಶ್ವರ ರಾವ್ ತಜ್ಞ ಸಮಿತಿ ಶಿಫಾರಸುಗಳ ಆಧಾರದ ಮೇಲೆ ಕೈಗೊಳ್ಳಲಾಗಿದೆ.

ಆರ್‌ಸಿಬಿ ಅಭಿಮಾನಿಗಳಿಗೆ ಸಂತಸದ ಸುದ್ದಿ: ಐಪಿಎಲ್ ಬೆಂಗಳೂರಿನಲ್ಲಿ ಆರಂಭ!! | Photo Credit: X@Karnataka Congress
ಆರ್‌ಸಿಬಿ ಅಭಿಮಾನಿಗಳಿಗೆ ಸಂತಸದ ಸುದ್ದಿ: ಐಪಿಎಲ್ ಬೆಂಗಳೂರಿನಲ್ಲಿ ಆರಂಭ!! | Photo Credit: X@Karnataka Congress

ಹೌದು, ಕಳೆದ ವರ್ಷ ಆರ್‌ಸಿಬಿ ಜಯೋತ್ಸವದ ವೇಳೆ ನಡೆದ ದುರಂತದ ನಂತರ ಸರ್ಕಾರ ತನಿಖಾ ಆಯೋಗಗಳನ್ನು ರಚಿಸಿತ್ತು. ಡಿ’ಕುನಾ ಆಯೋಗ ಹಾಗೂ ಮಹೇಶ್ವರ ರಾವ್ ಸಮಿತಿ ಸುರಕ್ಷತಾ ಕ್ರಮಗಳ ಕೊರತೆ, ಮೂಲಸೌಕರ್ಯ ಸಮಸ್ಯೆಗಳನ್ನು ಸೂಚಿಸಿತ್ತು. ಈ ವರದಿಗಳನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರವು ಪಂದ್ಯಗಳನ್ನು ಅನುಮತಿಸಲು ನಿರ್ಧರಿಸಿದೆ.

ರಾಜ್ಯ ಸಚಿವ ಸಂಪುಟವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿದೆ. ಆದರೆ, ಗೃಹ ಇಲಾಖೆಯು ನಿಗದಿಪಡಿಸುವ ಷರತ್ತುಗಳನ್ನು ಪಾಲಿಸಬೇಕಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು, ವರದಿ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಕ್ರೀಡಾಂಗಣದ ಗೇಟ್‌ಗಳನ್ನು ಅಗಲಗೊಳಿಸುವುದು, ಸುರಕ್ಷತಾ ವ್ಯವಸ್ಥೆಗಳನ್ನು ಬಲಪಡಿಸುವುದು, ಅಭಿಮಾನಿಗಳ ಪ್ರವೇಶ ಮತ್ತು ನಿರ್ಗಮನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು, ಅಗ್ನಿ ಸುರಕ್ಷತಾ ಕ್ರಮಗಳು ಹಾಗೂ ತುರ್ತು ನಿರ್ಗಮನ ಮಾರ್ಗಗಳನ್ನು ಸುಧಾರಿಸುವುದು, ಈ ಎಲ್ಲವೂಗಳನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಗೃಹ ಸಚಿವ ಜಿ. ಪರಮೇಶ್ವರ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಹಾಗೂ ಆರ್‌ಸಿಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ವರದಿ ಶಿಫಾರಸುಗಳನ್ನು ಪಾಲಿಸುವಂತೆ ಸೂಚಿಸಿದರು. ಆರ್‌ಸಿಬಿ ತಂಡವು 2026ರ ಐಪಿಎಲ್ ಮೊದಲ ಪಂದ್ಯವನ್ನು ಬೆಂಗಳೂರಿನಲ್ಲಿ ಆಯೋಜಿಸಲು ಅನುಮತಿ ಕೇಳಿದೆ. ಆರ್‌ಸಿಬಿ ಈಗಿನ ಚಾಂಪಿಯನ್ ಆಗಿರುವುದರಿಂದ, ಮೊದಲ ಪಂದ್ಯವನ್ನು ಬೆಂಗಳೂರಿನಲ್ಲಿ ನಡೆಸಲು ಬಯಸಿದೆ. ಅಭಿಮಾನಿಗಳಿಗೆ ಇದು ದೊಡ್ಡ ಉತ್ಸಾಹದ ವಿಷಯ. ಸುರಕ್ಷತಾ ಕ್ರಮಗಳನ್ನು ಪಾಲಿಸಿದರೆ, ಪಂದ್ಯಗಳು ಯಾವುದೇ ಅಡಚಣೆ ಇಲ್ಲದೆ ನಡೆಯಲಿವೆ.

ಅಂತಿಮ ಆದೇಶವನ್ನು ಸರ್ಕಾರ ಮುಂದಿನ ಕೆಲವು ದಿನಗಳಲ್ಲಿ ಹೊರಡಿಸಲಿದೆ. ಅದರಲ್ಲಿ ಎಲ್ಲಾ ಷರತ್ತುಗಳು ಹಾಗೂ ನಿಯಮಗಳು ಸ್ಪಷ್ಟವಾಗಿ ಉಲ್ಲೇಖವಾಗಲಿವೆ ಎನ್ನಲಾಗುತ್ತಿದೆ. ಕ್ರೀಡಾಂಗಣ ನಿರ್ವಹಣೆ, ಕ್ರಿಕೆಟ್ ಸಂಘ ಹಾಗೂ ತಂಡಗಳು ಸರ್ಕಾರದ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ. 

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ಮತ್ತೆ ನಡೆಯಲಿವೆ ಎಂಬುದು ಅಭಿಮಾನಿಗಳಿಗೆ ಸಂತಸದ ಸುದ್ದಿ. ಆದರೆ, ಸರ್ಕಾರವು ಸುರಕ್ಷತೆ ಮತ್ತು ಮೂಲಸೌಕರ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ವರದಿ ಶಿಫಾರಸುಗಳನ್ನು ಪಾಲಿಸಿದರೆ, ಅಭಿಮಾನಿಗಳು ಸುರಕ್ಷಿತವಾಗಿ ಪಂದ್ಯಗಳನ್ನು ಆನಂದಿಸಬಹುದು.

Latest News