Dec 12, 2025 Languages : ಕನ್ನಡ | English

ದೀರ್ಘಕಾಲದ ತೆರಿಗೆ ವಿವಾದಕ್ಕೆ ತೆರೆ!! ಯಶ್ ವಿರುದ್ಧದ ಐಟಿ ನೋಟಿಸ್ ರದ್ದು

ಕನ್ನಡ ಸೂಪರ್‌ಸ್ಟಾರ್ ಯಶ್ ಅವರಿಗೆ ಆದಾಯ ತೆರಿಗೆ (ಐಟಿ) ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಮಹತ್ವದ ನಿರಾಳತೆ ದೊರೆತಿದೆ. ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಅಧ್ಯಕ್ಷತೆಯಲ್ಲಿದ್ದ ಹೈಕೋರ್ಟ್ ಪೀಠವು, 2013-14ರಿಂದ 2018-19ರವರೆಗಿನ ಮೌಲ್ಯಮಾಪನ ವರ್ಷಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ನಟನಿಗೆ ನೀಡಿದ್ದ ನೋಟಿಸ್ ಅನ್ನು ಇಂದು ರದ್ದುಪಡಿಸುವ ಆದೇಶ ಹೊರಡಿಸಿದೆ. ಈ ಪ್ರಕರಣವು ಹೊಂಬಾಳೆ ಕನ್‌ಸ್ಟ್ರಕ್ಷನ್‌ಸ್‌ಗೆ ಸಂಬಂಧಿಸಿದಂತೆ ಐಟಿ ಇಲಾಖೆಯು ನಡೆಸಿದ ತನಿಖೆಗೆ ಸಂಬಂಧಿಸಿದೆ.

ಯಶ್ ವಿರುದ್ಧದ ಐಟಿ ನೋಟಿಸ್ ರದ್ದು
ಯಶ್ ವಿರುದ್ಧದ ಐಟಿ ನೋಟಿಸ್ ರದ್ದು

ಐಟಿ ತನಿಖೆಯ ವಿವರಗಳು 

ಆದಾಯ ತೆರಿಗೆ ಇಲಾಖೆಯ ತನಿಖೆ ಹಲವು ತಿಂಗಳುಗಳ ಕಾಲ ಮುಂದುವರಿಯಿತು. ಈ ಅವಧಿಯಲ್ಲಿ ನಟ ಯಶ್ ಅವರ ನಿವಾಸವಾದ ಹೊಸಕೆರೆಹಳ್ಳಿಯ ಮನೆಯಲ್ಲಿ ಹಾಗೂ ಅವರು ಬಾಡಿಗೆಗೆ ತೆಗೆದುಕೊಂಡು ತಂಗಿದ್ದ ಪ್ರಸಿದ್ಧ ತಾಜ್ ವೆಸ್ಟ್ ಎಂಡ್ ಹೋಟೆಲ್‌ನ ಕೊಠಡಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಶೋಧ ಕಾರ್ಯಾಚರಣೆ ಬಳಿಕ, 2021ರಲ್ಲಿ ಐಟಿ ಇಲಾಖೆ 2013-14ರಿಂದ 2018-19ರವರೆಗಿನ ಆರು ವರ್ಷಗಳ ಆದಾಯಕ್ಕೆ ಸಂಬಂಧಿಸಿದಂತೆ ಯಶ್ ಅವರಿಗೆ ನೋಟಿಸ್ ನೀಡಿತ್ತು.

ಹೈಕೋರ್ಟ್ ನೋಟಿಸ್ ರದ್ದುಪಡಿಸಿದ ತೀರ್ಪು 

ಯಶ್ ಅವರು ಈ ನೋಟಿಸ್‌ನ ಮಾನ್ಯತೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನಟನ ಪರ ವಕೀಲರ ತಂಡ ಹಾಗೂ ಐಟಿ ಇಲಾಖೆಯ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ, ಹೈಕೋರ್ಟ್ ಪೀಠವು ತೀರ್ಪು ನೀಡಿತು. ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಪೀಠವು ನೋಟಿಸ್ ರದ್ದುಪಡಿಸಲು ಕಾರಣಗಳನ್ನು ಕಂಡುಹಿಡಿದು, ನಟನಿಗೆ ಜಯ ತಂದು ಕೊಟ್ಟಿದ್ದಾರೆ ಎಂದು ಕೇಳಿ ಬಂದಿದೆ. ಇದರಿಂದ ಆ ಅವಧಿಗೆ ಸಂಬಂಧಿಸಿದ ದೀರ್ಘಕಾಲದ ತೆರಿಗೆ ವಿವಾದಕ್ಕೆ ತೆರೆ ಬಿದ್ದಿದೆ.

Latest News