ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ನೀಟ್ (NEET) ಮತ್ತು ಸಿಬಿಎಸ್ಇ (CBSE) ಪರೀಕ್ಷಾ ಅಕ್ರಮಗಳ ವಿವಾದ ದಿನದಿಂದ ದಿನಕ್ಕೆ ದೊಡ್ಡ ರಾಜಕೀಯ ಯುದ್ಧವಾಗಿ ಬದಲಾಗುತ್ತಿದೆ. ಈ ವಿಷಯವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವೆ ಜಟಾಪಟಿ ತಾರಕಕ್ಕೇರಿದೆ.
"ನನ್ನ ಮೇಲೆ ನೀವು ಎಷ್ಟು ಬೇಕಾದರೂ ವೈಯಕ್ತಿಕ ದಾಳಿ ಮಾಡಿ, ಆದರೆ ಅದರಿಂದ ನಿಮ್ಮ ತಪ್ಪುಗಳು ಮುಚ್ಚಿಹೋಗುವುದಿಲ್ಲ. 18.5 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಾನು ಪ್ರಶ್ನೆ ಕೇಳುವುದನ್ನು ನಿಲ್ಲಿಸಲ್ಲ" ಎಂದು ರಾಹುಲ್ ಗಾಂಧಿ ಅವರು ಶಿಕ್ಷಣ ಸಚಿವರಿಗೆ ಖಡಕ್ ಟಾಂಗ್ ನೀಡಿದ್ದಾರೆ.
ವಿವಾದಕ್ಕೆ ಕಾರಣವಾದ ಆ 'ಸಿಬಿಎಸ್ಇ' ಕಾಂಟ್ರಾಕ್ಟ್ ಏನು?
ರಾಹುಲ್ ಗಾಂಧಿ ಅವರು ಸಿಬಿಎಸ್ಇ ಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನ ಅಂದರೆ 'ಆನ್-ಸ್ಕ್ರೀನ್ ಮಾರ್ಕಿಂಗ್' (OSM) ಸಿಸ್ಟಮ್ನ ಕಾಂಟ್ರಾಕ್ಟ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ತೆಲಂಗಾಣದಲ್ಲಿ ಈಗಾಗಲೇ ವಿವಾದಕ್ಕೆ ಸಿಲುಕಿದ್ದ 'ಗ್ಲೋಬರೇನಾ' ಎಂಬ ಕಂಪನಿಯೇ ಈಗ ಹೆಸರು ಬದಲಾಯಿಸಿಕೊಂಡು 'ಕೋಯೆಂಪ್ಟ್' (COEMPT) ಆಗಿದೆ. ಇಂತಹ ವಿವಾದಾತ್ಮಕ ಹಿನ್ನೆಲೆಯುಳ್ಳ ಕಂಪನಿಗೆ ಸಿಬಿಎಸ್ಇ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಜವಾಬ್ದಾರಿಯನ್ನು ಏಕೆ ನೀಡಲಾಯಿತು? ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಸೋಶಿಯಲ್ ಮೀಡಿಯಾ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರಕ್ಕೆ ಕೆಲವು ನೇರ ಪ್ರಶ್ನೆಗಳನ್ನು ಹಾಕಿದ್ದಾರೆ:
- ಯಾರ ಆದೇಶದ ಮೇರೆಗೆ ಈ ಕಂಪನಿಗೆ ಕಾಂಟ್ರಾಕ್ಟ್ ನೀಡಲಾಗಿದೆ?
- ಟೆಂಡರ್ ಕೊಡುವ ಮುನ್ನ ಕಂಪನಿಯ ಹಿನ್ನೆಲೆ ಪರಿಶೀಲನೆ (Background Check) ಏಕೆ ಮಾಡಲಿಲ್ಲ?
- ಈ ಕಂಪನಿಯ ಮ್ಯಾನೇಜ್ಮೆಂಟ್ಗೂ ಮತ್ತು ಮೋದಿ ಸರ್ಕಾರಕ್ಕೂ ಏನು ಸಂಬಂಧ?
"ನೀವು ಕಂಪನಿಯ ಹಿನ್ನೆಲೆ ತಿಳಿದೂ ಕಾಂಟ್ರಾಕ್ಟ್ ಕೊಟ್ಟಿದ್ದೀರಾ ಅಥವಾ ಏನೂ ಪರಿಶೀಲಿಸದೆ ಕೊಟ್ಟಿದ್ದೀರಾ? ಹೇಗೆ ನೋಡಿದರೂ ಈ ಹಗರಣದಲ್ಲಿ ನಿಮ್ಮ ಪಾತ್ರ ಇದ್ದೇ ಇದೆ" ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಧಾನಿ ಮೋದಿಯವರಿಗೆ ನಿಜವಾಗಿಯೂ ವಿದ್ಯಾರ್ಥಿಗಳ ಮೇಲೆ ಕಾಳಜಿ ಇದ್ದಿದ್ದರೆ, ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ ಧರ್ಮೇಂದ್ರ ಪ್ರಧಾನ್ ಅವರನ್ನು ಎಂದೋ ಸಂಪುಟದಿಂದ ವಜಾ ಮಾಡುತ್ತಿದ್ದರು ಎಂದಿದ್ದಾರೆ.
ಕಾಂಗ್ರೆಸ್ ನಾಯಕರ ತೀವ್ರ ವಾಗ್ದಾಳಿ
ರಾಹುಲ್ ಗಾಂಧಿ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಕೂಡ ಶಿಕ್ಷಣ ಸಚಿವರ ವಿರುದ್ಧ ಫುಲ್ ಗರಂ ಆಗಿದ್ದಾರೆ. "ಲಕ್ಷಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಗೊಂದಲ ಸೃಷ್ಟಿಸಿರುವ ಸಚಿವರು, ತಮ್ಮ ಅಹಂಕಾರ ಮತ್ತು ರಾಜಕೀಯ ಡ್ರಾಮಾಗಳನ್ನು ಪ್ರದರ್ಶಿಸುತ್ತಿದ್ದಾರೆ. ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತು ಕೆಟ್ಟ ಆಡಳಿತ ತುಂಬಿ ತುಳುಕುತ್ತಿದ್ದರೂ ಸಚಿವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ" ಎಂದು ಜೈರಾಮ್ ರಮೇಶ್ ಆಕ್ರೋಶ ಹೊರಹಾಕಿದ್ದಾರೆ.
Dharmendra Pradhan ji, you can attack me all you want but it won’t absolve you of your crimes. Nor will it stop me from demanding answers for 18.5 lakh children.
— Rahul Gandhi (@RahulGandhi) May 28, 2026
Why was the CBSE OSM contract handed to COEMPT - a company already mired in controversy under its old name,… https://t.co/Xy8MbBTnTL
ರಾಹುಲ್ಗೆ ತಿರುಗೇಟು ನೀಡಿದ ಶಿಕ್ಷಣ ಸಚಿವ ಪ್ರಧಾನ್!
ಕಾಂಗ್ರೆಸ್ನ ಈ ಸರಣಿ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಸಿಬಿಎಸ್ಇ ಕಾಂಟ್ರಾಕ್ಟ್ ಅನ್ನು ಸರ್ಕಾರದ ನಿಯಮಾವಳಿಗಳ ಪ್ರಕಾರವೇ ನೀಡಲಾಗಿದೆ. ಒಂದು ವೇಳೆ ಇದರಲ್ಲಿ ಏನಾದರೂ ತಪ್ಪು ನಡೆದಿರುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, "ಚುನಾವಣೆಗಳಲ್ಲಿ ಸರಣಿ ಸೋಲು ಕಂಡು ರಾಹುಲ್ ಗಾಂಧಿ ಹತಾಶರಾಗಿದ್ದಾರೆ. ಅವರಿಗೆ ದೇಶದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯನ್ನು ಸಹಿಸಲು ಆಗುತ್ತಿಲ್ಲ. ಅವರು ಮೊದಲಿನಿಂದಲೂ ಡಿಜಿಟಲ್ ಇಂಡಿಯಾ ಹಾಗೂ ಇವಿಎಂ (EVM)ಗಳನ್ನು ವಿರೋಧಿಸುತ್ತಾ ಬಂದಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.
ವಿದ್ಯಾರ್ಥಿಗಳಿಗೆ ಸಚಿವರ ಮನವಿ: ಪರೀಕ್ಷಾ ಗೊಂದಲಗಳಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವುದನ್ನು ಸಚಿವರು ಒಪ್ಪಿಕೊಂಡಿದ್ದಾರೆ ಹಾಗೂ ಸರ್ಕಾರದ ಪರವಾಗಿ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಆದರೆ, ರಾಜಕೀಯ ನಾಯಕರು ಇಂತಹ ಸೂಕ್ಷ್ಮ ವಿಷಯದಲ್ಲಿ ಹೇಳಿಕೆಗಳನ್ನು ನೀಡಿ ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಇನ್ನಷ್ಟು ಹೆಚ್ಚು ಮಾಡಬಾರದು ಎಂದು ಪ್ರಧಾನ್ ಮನವಿ ಮಾಡಿದ್ದಾರೆ.
Arrogance and political dramabaazi is the best the Mantri Pradhan can come up with, even amidst the chaos he has created for lakhs of India’s students and the absolute incompetence he has shown as Minister.
— Jairam Ramesh (@Jairam_Ramesh) May 28, 2026
Not content with slandering the Parliamentary Standing Committee on… https://t.co/xmd9D96BO0
ಪರೀಕ್ಷಾ ಅಕ್ರಮದ ತನಿಖೆಗಾಗಿ ಸ್ವತಂತ್ರ ನ್ಯಾಯಾಂಗ ತನಿಖೆ ಮತ್ತು ವಿಶೇಷ ತನಿಖಾ ದಳ (SIT) ರಚನೆಗೆ ಕಾಂಗ್ರೆಸ್ ಪಟ್ಟು ಹಿಡಿದಿದ್ದು, ಈ ವಿವಾದ ಸದ್ಯಕ್ಕಂತೂ ತಣ್ಣಗಾಗುವಂತೆ ಕಾಣುತ್ತಿಲ್ಲ.