ಸುಪ್ರಭಾತ ಹಾಡಿನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಘಟನೆ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ. ಶನಿಮಹಾತ್ಮ ದೇವಸ್ಥಾನದಲ್ಲಿ ಬೆಳಗ್ಗೆ ಸುಪ್ರಭಾತ ಹಾಡು ಹಾಕಲಾಗುತ್ತಿದ್ದ ವೇಳೆ, ಅಲ್ಲಿಗೆ ಬಂದ ಕೆಲ ಮುಸ್ಲಿಂ ಯುವಕರು “ಮನೆಯಲ್ಲಿ ತಾಯಿ ಮಲಗಿದ್ದಾರೆ, ಸೌಂಡ್ ಕಡಿಮೆ ಮಾಡಿ” ಎಂದು ಹೇಳಿದರೆ, ಸ್ಥಳೀಯರು “ಮಸೀದಿಯಲ್ಲಿ ಅಲ್ಲಾ ಕೂಗಿದರೆ ನಾವು ಹೀಗೆ ಕೇಳ್ತಿವಾ?” ಎಂದು ಪ್ರಶ್ನೆ ಮಾಡಿದ್ದಾರೆ.
ಈ ಮಾತುಕತೆ ತೀವ್ರಗೊಂಡು, ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದಿದೆ. ದೇವಸ್ಥಾನದ ಪೂಜಾರಿ ಈ ಕುರಿತು ದೂರನ್ನು ನೀಡಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಯುವಕರ ವಿರುದ್ಧ ದೂರು ನೀಡಿದ್ದು ಬಳಿಕ NCR (Non-Cognizable Report) ದಾಖಲಾಗಿದೆ.
ಸ್ಥಳೀಯರು ಈ ಘಟನೆಗೆ ಬೇಸರ ವ್ಯಕ್ತಪಡಿಸಿದ್ದು, “ಧಾರ್ಮಿಕ ಸ್ಥಳಗಳಲ್ಲಿ ಶಾಂತಿ ಕಾಪಾಡುವುದು ಎಲ್ಲರ ಜವಾಬ್ದಾರಿ. ಇಂತಹ ಸಣ್ಣ ವಿಷಯಗಳಿಂದ ದೊಡ್ಡ ವಿವಾದಗಳು ಉಂಟಾಗಬಾರದು” ಎಂದು ಅಭಿಪ್ರಾಯಪಟ್ಟಿದ್ದಾರೆ. ಶನಿಮಹಾತ್ಮ ದೇವಸ್ಥಾನದಲ್ಲಿ ಪ್ರತಿದಿನ ಬೆಳಗ್ಗೆ ಸುಪ್ರಭಾತ ಹಾಡು ಹಾಕುವುದು ಒಂದು ಸಂಪ್ರದಾಯವಾಗಿದ್ದು, ಸ್ಥಳೀಯರು ಅದನ್ನು ಧಾರ್ಮಿಕ ಆಚರಣೆಯ ಭಾಗವೆಂದು ಪರಿಗಣಿಸುತ್ತಾರೆ. ಆದರೆ, ಶಬ್ದದ ಪ್ರಮಾಣ ಹೆಚ್ಚಾದರೆ ನಾಗರಿಕರಿಗೆ ತೊಂದರೆ ಉಂಟಾಗಬಹುದು ಎಂಬ ಅಸಮಾಧಾನವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. “ಎರಡೂ ಗುಂಪುಗಳು ಶಾಂತಿ ಕಾಪಾಡಬೇಕು. ಧಾರ್ಮಿಕ ಸ್ಥಳಗಳಲ್ಲಿ ಶಬ್ದ ನಿಯಂತ್ರಣದ ನಿಯಮಗಳನ್ನು ಪಾಲಿಸಬೇಕು” ಎಂದು ಪೊಲೀಸರು ಎಚ್ಚರಿಸಿದ್ದಾರೆ. ಈ ಘಟನೆ ಕೇವಲ ಒಂದು ಧಾರ್ಮಿಕ ವಿವಾದವಲ್ಲ, ಸಮಾಜದಲ್ಲಿ ಪರಸ್ಪರ ಗೌರವ ಮತ್ತು ಸಹಿಷ್ಣುತೆಯ ಅಗತ್ಯವನ್ನು ನೆನಪಿಸಿದೆ. ಸ್ಥಳೀಯರು ಶಾಂತಿ ಮತ್ತು ಸಮಾಧಾನ ಕಾಪಾಡಿಕೊಳ್ಳುವಂತೆ ಕರೆ ನೀಡಿದ್ದಾರೆ.