ಜುಲೈ 3 ರಿಂದ ಅಧಿಕೃತವಾಗಿ ಆರಂಭವಾಗಲಿದೆ ಅಮರನಾಥ ಯಾತ್ರೆ - ಜಮ್ಮುವಿನ ಬೇಸ್ ಕ್ಯಾಂಪ್‌ಗೆ ಬಂದಿಳಿದ ಆ ವಿಶಿಷ್ಟ ಸಂತ ಯಾರು ಗೊತ್ತಾ?

ಹಿಮಾಲಯದ ಮಡಿಕೆಗಳಲ್ಲಿ ನೈಸರ್ಗಿಕವಾಗಿ ರೂಪುಗೊಳ್ಳುವ ಪವಿತ್ರ ‘ಹಿಮಲಿಂಗ’ದ ದರ್ಶನ ಪಡೆಯಲು ಕೋಟ್ಯಂತರ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. 2026ರ ಜುಲೈ 3 ರಿಂದ ಈ ವರ್ಷದ ವಾರ್ಷಿಕ ಅಮರನಾಥ ಯಾತ್ರೆ ಅಧಿಕೃತವಾಗಿ ಆರಂಭವಾಗಲಿದ್ದು, ಲಕ್ಷಾಂತರ ಭಕ್ತರು ಕಾಶ್ಮೀರ ಹಿಮಾಲಯಕ್ಕೆ ಹರಿದುಬರುವ ನಿರೀಕ್ಷೆಯಿದೆ. ಈ ಪವಿತ್ರ ಯಾತ್ರೆಗೆ ಪ್ರತಿ ವರ್ಷವೂ ಭೇಟಿ ನೀಡುವ ಮತ್ತು ದಶಕಗಳಿಂದ ಬಾಬಾ ಬರ್ಫಾನಿ ಸೇವೆಯಲ್ಲಿ ನಿರತರಾಗಿರುವ ಸಾಧು-ಸಂತರು ಹಾಗೂ ಭಕ್ತರು, ಕಳೆದ ಕೆಲವು ವರ್ಷಗಳಿಂದ ಸರ್ಕಾರ ಮತ್ತು ಶ್ರೀ ಅಮರನಾಥ ಜಿ ಶ್ರೈನ್ ಬೋರ್ಡ್ (SASB) ಮಾಡಿರುವ ಸುರಕ್ಷತೆ ಹಾಗೂ ಮೂಲಸೌಕರ್ಯ ವ್ಯವಸ್ಥೆಗಳು ಅತ್ಯಂತ ಪರಿಪೂರ್ಣವಾಗಿವೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಜುಲೈ 2 ಕ್ಕೆ ಹೊರಡಲಿದೆ ಭಕ್ತರ ಮೊದಲ ಬ್ಯಾಚ್ | Photo Credit: www.indiatodayne.in
ಜುಲೈ 2 ಕ್ಕೆ ಹೊರಡಲಿದೆ ಭಕ್ತರ ಮೊದಲ ಬ್ಯಾಚ್ | Photo Credit: www.indiatodayne.in

ಯಾತ್ರೆಯ ಹಿನ್ನೆಲೆಯಲ್ಲಿ ಜಮ್ಮುವಿನ ಬೇಸ್ ಕ್ಯಾಂಪ್‌ಗಳಿಗೆ ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಮತ್ತು ವಿವಿಧ ಅಖಾಡಗಳ ಸನ್ಯಾಸಿಗಳು ಬರಲಾರಂಭಿಸಿದ್ದು, ಇಡೀ ಜಮ್ಮು ಮತ್ತು ಕಾಶ್ಮೀರದಲ್ಲಿ ಭಕ್ತಿ ಭಾವದ ವಾತಾವರಣ ಮನೆಮಾಡಿದೆ.

ದಶಕಗಳ ಯಾತ್ರಾರ್ಥಿಗಳ ಅನುಭವ: ವರ್ಷದಿಂದ ವರ್ಷಕ್ಕೆ ಸುಧಾರಿಸಿದ ವ್ಯವಸ್ಥೆ

ಮಧ್ಯಪ್ರದೇಶದ ದತಿಯಾ ಮೂಲದ 54 ವರ್ಷದ ಸಣ್ಣ ಉದ್ಯಮಿ ದೀಪಕ್ ಕಾಕೋರಿಯಾ ಅವರಿಗೆ ಇದು ಕೇವಲ ಪ್ರವಾಸವಲ್ಲ, ಜೀವನದ ಭಾಗ. ಈ ಬಾರಿಯ ಯಾತ್ರೆಯ ಬಗ್ಗೆ ಉತ್ಸಾಹ ಹಂಚಿಕೊಂಡ ಅವರು, "ಈ ಬಾರಿ ನಾನು ಅಮರನಾಥ ಜಿ ಯಾತ್ರೆಗೆ ಸಿದ್ಧತೆ ನಡೆಸುತ್ತಿದ್ದು, ಇದು ಪರಮಶಿವನ ಪವಿತ್ರ ಸನ್ನಿಧಿಗೆ ನನ್ನ 36ನೇ ಯಾತ್ರೆಯಾಗಿದೆ" ಎನ್ನುತ್ತಾರೆ. ಕಳೆದ 35 ವರ್ಷಗಳಿಂದ ನಿರಂತರವಾಗಿ ಭೇಟಿ ನೀಡುತ್ತಿರುವ ದೀಪಕ್, ವರ್ಷಗಳು ಕಳೆದಂತೆ ಯಾತ್ರಾರ್ಥಿಗಳಿಗೆ ಕಲ್ಪಿಸಲಾಗಿರುವ ರಸ್ತೆ, ವೈದ್ಯಕೀಯ ಸೇವೆ, ಶೌಚಾಲಯ ಮತ್ತು ವಸತಿ ಸೌಲಭ್ಯಗಳು ಗಮನಾರ್ಹವಾಗಿ ಉತ್ತಮಗೊಂಡಿವೆ ಮತ್ತು ಯಾವುದೇ ಲೋಪದೋಷಗಳಿಲ್ಲ ಎಂದು ಸಾಕ್ಷಿ ನುಡಿಯುತ್ತಾರೆ.

ಅದೇ ರೀತಿ, ಬಿಹಾರದ ನವಾಡದಲ್ಲಿ ಪೀಠೋಪಕರಣಗಳ ವ್ಯಾಪಾರ ಮಾಡುತ್ತಿರುವ 45 ವರ್ಷದ ಮುನೀಶ್ ಕುಮಾರ್ ಕಳೆದ ವರ್ಷವಷ್ಟೇ ಮೊದಲ ಬಾರಿಗೆ ಯಾತ್ರೆ ಮಾಡಿದ್ದರು. ಕಳೆದ ವರ್ಷದ ಅತ್ಯುತ್ತಮ ವ್ಯವಸ್ಥೆಯಿಂದ ಪ್ರೇರಿತರಾಗಿ ಈ ವರ್ಷವೂ ಅವರು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಬರಲು ಸಜ್ಜಾಗಿದ್ದಾರೆ. "ಕಳೆದ ಬಾರಿ ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿದ್ದವು, ಈ ವರ್ಷವೂ ಅದಕ್ಕಿಂತ ಉತ್ತಮ ವ್ಯವಸ್ಥೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೇತ್ಮಲ್ ಅವರ ಆಧ್ಯಾತ್ಮಿಕ ನುಡಿ

ರಾಜಸ್ಥಾನದ ಬಿಕಾನೇರ್‌ನ 70 ವರ್ಷದ ಅರ್ಚಕ ಪಂಡಿತ್ ಜೇತ್ಮಲ್ ಅವರು ಕಳೆದ ವರ್ಷದ ವ್ಯವಸ್ಥೆಯನ್ನು ನೆನೆದು, "ನಾವು ಆಧ್ಯಾತ್ಮಿಕ ಸ್ನಾನ ಮಾಡಬೇಕಾದರೆ ಹರಿದ್ವಾರಕ್ಕೆ ಹೋಗಬೇಕು, ಆದರೆ ನಿಜವಾದ ಕಠಿಣ ಜೀವನದ ಪವಿತ್ರ ಯಾತ್ರೆ ಮಾಡಬೇಕಾದರೆ ಅಮರನಾಥಕ್ಕೆ ಹೋಗಬೇಕು. ಕಳೆದ ಬಾರಿ ಯಾವುದೇ ರೀತಿಯ ಸಣ್ಣ ಸಮಸ್ಯೆಯೂ ನಮಗೆ ಎದುರಾಗಿಲ್ಲ" ಎಂದು ಹೇಳಿದ್ದಾರೆ.

‘ದೇವಸ್ಥಾನಗಳ ನಗರಿ’ ಜಮ್ಮುವಿನಲ್ಲಿ ಸಾಧುಗಳ ದಂಡು

ವಾರ್ಷಿಕ ಯಾತ್ರೆಗೆ ಮುನ್ನ ದೇಶದ ನಾನಾ ಭಾಗಗಳಿಂದ ಆಗಮಿಸುವ ನೂರಾರು ಸಾಧು-ಸಂತರು ಜಮ್ಮುವಿನ ಹಳೆಯ ನಗರ ಪ್ರದೇಶವಾದ ಪುರಾನಿ ಮಂಡಿಯಲ್ಲಿರುವ ಐತಿಹಾಸಿಕ ರಾಮ ಮಂದಿರದಲ್ಲಿ ತಂಗುತ್ತಿದ್ದಾರೆ. ಈ ಪ್ರಾಚೀನ ದೇವಾಲಯ ಸಂಕೀರ್ಣವು ಕಾಶ್ಮೀರ ಕಣಿವೆಯ ಉನ್ನತ ಹಿಮಾಲಯ ಶ್ರೇಣಿಗಳಿಗೆ ತೆರಳುವ ಸಾಧುಗಳಿಗೆ ಪ್ರಮುಖ ಬೇಸ್ ಕ್ಯಾಂಪ್ (ಮೂಲ ಶಿಬಿರ) ಆಗಿ ಕಾರ್ಯನಿರ್ವಹಿಸುತ್ತಿದೆ.

ಉತ್ತರ ಪ್ರದೇಶದ ಆಗ್ರಾದಿಂದ ಬಂದಿರುವ ಜೂನಾ ಅಖಾಡಕ್ಕೆ ಸೇರಿದ 54 ವರ್ಷದ ಸಾಧು ರಾಮ್ ಭಜನ್ ಅವರಿಗೆ ಇದು 6ನೇ ಯಾತ್ರೆಯಾಗಿದೆ. "ಅಮರನಾಥ ಯಾತ್ರೆಯು ಮನುಷ್ಯನನ್ನು ಜೀವನದ ಎಲ್ಲಾ ಕಷ್ಟಗಳು ಮತ್ತು ಜಂಜಾಟಗಳಿಂದ ಮುಕ್ತಿಗೊಳಿಸುತ್ತದೆ. ಜುಲೈ 3 ರಂದು ನಮ್ಮ ಬ್ಯಾಚ್ ಜಮ್ಮುವಿನಿಂದ ಹೊರಡಲಿದೆ" ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ದಕ್ಷಿಣ ಭಾರತದ ತಮಿಳುನಾಡಿನಿಂದ ಬಂದಿರುವ 55 ವರ್ಷದ ಶ್ವೇತವಸ್ತ್ರಧಾರಿ ಸಂತ ಶಿವ ರುದ್ರ ಅವರಿಗೆ ಇದು ಬರೋಬ್ಬರಿ 24ನೇ ಯಾತ್ರೆಯಾಗಿದೆ. ಕಾಶ್ಮೀರದ ಕಠಿಣ ಹವಾಮಾನದ ನಡುವೆಯೂ ಪ್ರತಿ ಬಾರಿ ತಮಗೆ ಭದ್ರತಾ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ನೀಡುವ ಸಹಕಾರ ಅನನ್ಯವಾದದ್ದು ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಇದೇ ತಮಿಳುನಾಡಿನ ಕೃಷ್ಣಗಿರಿ ಅಖಾಡದ ಭೈರವ್ ಸ್ವಾಮಿ (50) ಅವರಿಗೆ ಇದು 5ನೇ ಯಾತ್ರೆಯಾಗಿದ್ದು, "ನಾವು ಭೋಲೆ ಬಾಬಾನನ್ನು ಪ್ರೀತಿಸುತ್ತೇವೆ, ಹಾಗಾಗಿ ದಾರಿಯ ಕಷ್ಟಗಳ ಬಗ್ಗೆ ಯೋಚಿಸದೆ ಹೊರಟಿದ್ದೇವೆ" ಎಂದು ಎಲ್ಲರಿಗೂ ಪ್ರೀತಿಯ ಸಂದೇಶ ನೀಡಿದ್ದಾರೆ.

ಹರಿದ್ವಾರದ ಪಂಚ್ ದಶ್ನಾಮಿ ಜೂನಾ ಅಖಾಡಕ್ಕೆ ಸೇರಿದ 67 ವರ್ಷದ ದೇವ್ ಗಿರಿ ಅವರು 33ನೇ ಬಾರಿಗೆ ಪವಿತ್ರ ಗುಹೆಯತ್ತ ಹೆಜ್ಜೆ ಇಡುತ್ತಿದ್ದಾರೆ. ಅವರು ಸಾರ್ವಜನಿಕರಿಗೆ ಸಂದೇಶ ನೀಡುತ್ತಾ, "ಪ್ರತಿಯೊಬ್ಬರೂ ಶಾಂತಿಯಿಂದ ಬಾಳಬೇಕು ಮತ್ತು ಆಡಳಿತ ಮಂಡಳಿ ವಿಧಿಸಿರುವ ಎಲ್ಲಾ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು" ಎಂದು ಮನವಿ ಮಾಡಿದ್ದಾರೆ. ಇವರ ನಡುವೆ ಉತ್ತರಾಖಂಡದ ಬದರಿನಾಥದಿಂದ ಬಂದಿರುವ ವಿಶಿಷ್ಟ ಶೈಲಿಯ ಸಂಚಾರಿ ಸಂತ ಶಿವ ನಿವಾಸ್ ತಾಂತ್ರಿಕ್ ಶಂಶಾನಿ ಎಂಬುವವರು, "ನಾನು ಇಲ್ಲಿಗೆ ಬಂದಿರುವುದು ಬೋಲೆ ಬಾಬಾ ನನ್ನನ್ನು ಕರೆದಿದ್ದಕ್ಕಾಗಿ" ಎಂದು ಭಾವುಕರಾಗಿ ನುಡಿದಿದ್ದಾರೆ.

ಪುರಾನಿ ಮಂಡಿ ರಾಮ ಮಂದಿರದ ಸಿದ್ಧತೆಗಳು

ಸಾಧುಗಳ ವಾಸ್ತವ್ಯದ ಬಗ್ಗೆ ಮಾಹಿತಿ ನೀಡಿರುವ ಪುರಾನಿ ಮಂಡಿ ರಾಮ ಮಂದಿರದ ಮಹಂತ್ ರಮೇಶ್ವರ್ ದಾಸ್ ಅವರು, "ನಮ್ಮ ದೇವಾಲಯವು ಏಕಕಾಲದಲ್ಲಿ 2000 ಕ್ಕೂ ಹೆಚ್ಚು ಸಾಧು-ಸಂತರಿಗೆ ಉಚಿತ ವಸತಿ ಮತ್ತು ಅನ್ನದಾಸೋಹದ ವ್ಯವಸ್ಥೆ ಮಾಡುವ ಸಾಮರ್ಥ್ಯ ಹೊಂದಿದೆ. 2007 ರಿಂದಲೂ ಈ ದೇವಾಲಯವು ಸಂತರಿಗೆ ಅಧಿಕೃತ ಬೇಸ್ ಕ್ಯಾಂಪ್ ಆಗಿ ಸೇವೆ ಸಲ್ಲಿಸುತ್ತಿದೆ" ಎಂದು ತಿಳಿಸಿದ್ದಾರೆ. ಇಲ್ಲಿ ತಂಗುವ ಸಾಧುಗಳು ನಿರಂತರವಾಗಿ ಭಜನೆ, ಕೀರ್ತನೆ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ.

ಮಹಂತರ ಮಾಹಿತಿ ಪ್ರಕಾರ, ಅಮರನಾಥ ಯಾತ್ರೆಯ ಮೊದಲ ಅಧಿಕೃತ ಭಕ್ತರ ಬ್ಯಾಚ್ ಜುಲೈ 2 ರಂದು ಜಮ್ಮುವಿನಿಂದ ಕಾಶ್ಮೀರದ ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳತ್ತ ಪ್ರಯಾಣ ಬೆಳೆಸಲಿದೆ. ಭಾರತೀಯ ಸೇವೆ, ಸಿಆರ್‌ಪಿಎಫ್ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಯಾತ್ರಾರ್ಥಿಗಳ ಸುರಕ್ಷತೆಗೆ ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಭಕ್ತರ ದಶಕಗಳ ಈ ಸಕಾರಾತ್ಮಕ ಅನುಭವಗಳು ಭಾರತದ ಅತ್ಯಂತ ಕಠಿಣ ಧಾರ್ಮಿಕ ಪ್ರವಾಸವೊಂದು ಎಷ್ಟು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

Latest News