ಹಿಂದೂ ಮಹಾಸಾಗರದಲ್ಲಿ ನಡೆದ ಇರಾನ್ ಯುದ್ಧನೌಕೆಯ ಮೇಲಿನ ದಾಳಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ದಾಳಿಯಲ್ಲಿ ಅಮೆರಿಕಕ್ಕೆ ಭಾರತೀಯ ನೌಕಾಪಡೆ ಸಹಾಯ ಮಾಡಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಭಾರತ ಸರ್ಕಾರವು ಈ ಎಲ್ಲಾ ಆರೋಪಗಳನ್ನು ಆಧಾರವಿಲ್ಲದ ಹಾಗೂ ತಮಾಷೆ ಎಂದು ಕರೆಯುವ ಮೂಲಕ ಸಂಪೂರ್ಣವಾಗಿ ತಳ್ಳಿಹಾಕಿದೆ.
ಮಾರ್ಚ್ 4 ರಂದು ಶ್ರೀಲಂಕಾ ಕರಾವಳಿಯ ಬಳಿ ಇರಾನ್ನ ಐರಿಸ್ ದೇನಾ ಎಂಬ ಯುದ್ಧನೌಕೆಯ ಮೇಲೆ ಅಮೆರಿಕದ ಜಲಂತರಾಮಿ ನೌಕೆಯು ಟಾರ್ಪಿಡೊ ದಾಳಿ ನಡೆಸಿತ್ತು. ಈ ಭೀಕರ ದಾಳಿಯಲ್ಲಿ ನೌಕೆಯಲ್ಲಿದ್ದ 87 ನಾವಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ವಿಶೇಷವೆಂದರೆ, ಈ ಇರಾನ್ ಹಡಗು ಭಾರತವು ಆಯೋಜಿಸಿದ್ದ 'ಇಂಟರ್ನ್ಯಾಷನಲ್ ಫ್ಲೀಟ್ ರಿವ್ಯೂ' ಮತ್ತು 'ಮಿಲನ್' ನೌಕಾ ವ್ಯಾಯಾಮದಲ್ಲಿ ಪಾಲ್ಗೊಂಡು ವಾಪಸ್ ಇರಾನ್ಗೆ ಮರಳುತ್ತಿತ್ತು.
ದಾಳಿಯ ಸಂದರ್ಭದಲ್ಲಿ ಈ ಹಡಗು ಯಾವುದೇ ಆಯುಧಗಳನ್ನು ಹೊಂದಿರಲಿಲ್ಲ. ಏಕೆಂದರೆ ಅಂತರಾಷ್ಟ್ರೀಯ ನಿಯಮಗಳ ಪ್ರಕಾರ ಮಿಲಿಟರಿ ವ್ಯಾಯಾಮಗಳಲ್ಲಿ ಪಾಲ್ಗೊಳ್ಳುವಾಗ ಹಡಗುಗಳು ಯುದ್ಧಕ್ಕೆ ಸಿದ್ಧವಾಗಿರುವುದಿಲ್ಲ. ಹೀಗಿದ್ದರೂ ಅಮೆರಿಕ ಈ ದಾಳಿ ಮಾಡಿರುವುದು ಯುದ್ಧದ ತೀವ್ರತೆಯನ್ನು ಹೆಚ್ಚಿಸಿದೆ.
ಅಮೆರಿಕವು ಇರಾನ್ ಹಡಗನ್ನು ಹೊಡೆದುರುಳಿಸಲು ಭಾರತೀಯ ನೌಕಾಪಡೆಯು ಗುಪ್ತಚರ ಮಾಹಿತಿ ನೀಡಿದೆ ಎಂಬ ವದಂತಿಗಳು ಹರಡಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ಉನ್ನತ ಮೂಲಗಳು, 'ಅಮೆರಿಕಕ್ಕೆ ಯಾವುದೇ ರೀತಿಯ ಮಾಹಿತಿ ನೀಡುವ ಪ್ರಶ್ನೆಯೇ ಇಲ್ಲ. ಅಂತಾರಾಷ್ಟ್ರೀಯ ನೀರಿನಲ್ಲಿ ಇರಾನ್ ಅನ್ನು ಗುರಿಯಾಗಿಸಿಕೊಂಡು ಅಮೆರಿಕ ಮಾಡುತ್ತಿರುವ ಕೃತ್ಯಗಳಿಗೂ ನಮಗೂ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿವೆ. ಭಾರತವು ಯಾವಾಗಲೂ ಶಾಂತಿಯನ್ನು ಬಯಸುವ ದೇಶವಾಗಿದ್ದು, ಈ ದಾಳಿಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿವೆ.
ಹಡಗಿನ ಮೇಲೆ ದಾಳಿಯಾದ ತಕ್ಷಣ ಭಾರತೀಯ ನೌಕಾಪಡೆಗೆ ತುರ್ತು ಕರೆ ಬಂದಿತ್ತು. ತಕ್ಷಣವೇ ಮಾನವೀಯ ನೆಲೆಯಲ್ಲಿ ಸ್ಪಂದಿಸಿದ ಭಾರತ, ಶ್ರೀಲಂಕಾ ನೌಕಾಪಡೆಯೊಂದಿಗೆ ಸೇರಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ಭಾರತದ ಐಎನ್ಎಸ್ ತರಂಗಿಣಿ ಮತ್ತು ದೀರ್ಘ ವ್ಯಾಪ್ತಿಯ P8I ವಿಮಾನಗಳನ್ನು ಕಾಣೆಯಾದ ನಾವಿಕರನ್ನು ಹುಡುಕಲು ನಿಯೋಜಿಸಲಾಯಿತು. ಅಲ್ಲದೆ, ಕೊಚ್ಚಿಯಿಂದ ಐಎನ್ಎಸ್ ಇಕ್ಷಕ್ ಹಡಗನ್ನು ಕೂಡ ಈ ಕಾರ್ಯಾಚರಣೆಗೆ ಕಳುಹಿಸಲಾಯಿತು. ಮಾರ್ಚ್ 5 ರವರೆಗೆ ಸುಮಾರು 32 ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ.
ಈ ಘಟನೆಯನ್ನು ಇರಾನ್ನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಅವರು "ಘೋರ ದೌರ್ಜನ್ಯ" ಎಂದು ಕರೆದಿದ್ದಾರೆ. ಅಮೆರಿಕವು ಈಗ ಹಾಕಿಕೊಟ್ಟಿರುವ ಈ ಕೆಟ್ಟ ಸಂಪ್ರದಾಯಕ್ಕಾಗಿ ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ ಮತ್ತು ಈ ಕೃತ್ಯದ ಬಗ್ಗೆ ಅವರು ಪಶ್ಚಾತ್ತಾಪ ಪಡುತ್ತಾರೆ ಎಂದು ಕಟುವಾಗಿ ಎಚ್ಚರಿಸಿದ್ದಾರೆ.