Apr 29, 2026 Languages : ಕನ್ನಡ | English

‘ಪಾಕಿಸ್ತಾನ ಜಿಂದಾಬಾದ್’ ವಿಡಿಯೋ ಮತ್ತೆ ವೈರಲ್ - ಚೇತನ್ ವಿರುದ್ಧ ಆಕ್ರೋಶ ಜ್ವಾಲೆ!!

ಸ್ಯಾಂಡಲ್‌ವುಡ್‌ನ ನಟ ಮತ್ತು ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಈ ಬಾರಿ ಅವರು ಕರ್ನಾಟಕದ ಆರಾಧ್ಯ ದೈವ, ವರನಟ ಡಾ. ರಾಜ್‌ಕುಮಾರ್ ಅವರ ಸ್ಮಾರಕದ ಬಗ್ಗೆ ನೀಡಿರುವ ಹೇಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ಅವರ ಹಳೆಯ 'ಪಾಕಿಸ್ತಾನ ಜಿಂದಾಬಾದ್' ಹೇಳಿಕೆಯೂ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

‘ಪಾಕಿಸ್ತಾನ ಜಿಂದಾಬಾದ್’ ವಿಡಿಯೋ ಮತ್ತೆ ವೈರಲ್ | Photo Credit: masth maga | chetan ahimsa
‘ಪಾಕಿಸ್ತಾನ ಜಿಂದಾಬಾದ್’ ವಿಡಿಯೋ ಮತ್ತೆ ವೈರಲ್ | Photo Credit: masth maga | chetan ahimsa

ಅಣ್ಣಾವ್ರ ಪುಣ್ಯಭೂಮಿ ಬಗ್ಗೆ ಚೇತನ್ ಹೇಳಿದ್ದೇನು?

ಡಾ. ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲೇ ಪೋಸ್ಟ್ ಮಾಡಿದ್ದ ಚೇತನ್, "ರಾಜ್‌ಕುಮಾರ್ ಶ್ರೇಷ್ಠ ನಟ ನಿಜ, ಆದರೆ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಅವರ ಸ್ಮಾರಕಕ್ಕಾಗಿ 2.5 ಎಕರೆ ಭೂಮಿ ನೀಡಿರುವುದು ಸರಿಯಾದ ನಿರ್ಧಾರವೇ? ಸರ್ಕಾರ ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕೇ ಹೊರತು, ಮತ ಬ್ಯಾಂಕ್ ರಾಜಕಾರಣಕ್ಕಲ್ಲ" ಎಂಬರ್ಥದಲ್ಲಿ ಬರೆದುಕೊಂಡಿದ್ದರು.

ಅಣ್ಣಾವ್ರ ಅಭಿಮಾನಿಗಳು ಮತ್ತು ಕನ್ನಡಪರ ಸಂಘಟನೆಗಳು ಈ ಮಾತಿನಿಂದ ಕೆಂಡಾಮಂಡಲವಾಗಿದ್ದಾರೆ. ಸಾರಾ ಗೋವಿಂದು ಸೇರಿದಂತೆ ಅನೇಕರು ಚೇತನ್ ವಿರುದ್ಧ ಪ್ರತಿಭಟನೆ ನಡೆಸಿ, ಕೂಡಲೇ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ.

ವೈರಲ್ ಆಯ್ತು 'ಪಾಕಿಸ್ತಾನ ಜಿಂದಾಬಾದ್' ವಿವಾದದ ವಿಡಿಯೋ

ಚೇತನ್ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ, ಎರಡು ವರ್ಷಗಳ ಹಿಂದೆ ಅವರು ನೀಡಿದ್ದ ಸಂದರ್ಶನವೊಂದು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಆ ವಿಡಿಯೋದಲ್ಲಿ ಚೇತನ್ ಪಾಕಿಸ್ತಾನದ ಬಗ್ಗೆ ಅಚ್ಚರಿಯ ಮಾತುಗಳನ್ನು ಆಡಿದ್ದಾರೆ:

ಪಾಕಿಸ್ತಾನ ಶತ್ರು ರಾಷ್ಟ್ರ ಅಲ್ಲ: "ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರ ಅಲ್ಲ, ಅದು ನಮ್ಮ ಪಕ್ಕದ ರಾಷ್ಟ್ರ ಅಷ್ಟೇ. ಪಾಕಿಸ್ತಾನ ಜಿಂದಾಬಾದ್ ಅಂದರೆ ಅದು ದೇಶದ್ರೋಹ ಅಲ್ಲ" ಎಂದು ಚೇತನ್ ಹೇಳಿದ್ದರು.

ಅಮೆರಿಕಾ-ಇಸ್ರೇಲ್ ನಿಜವಾದ ಶತ್ರುಗಳು: "ನಮಗೆ ನಿಜವಾದ ಶತ್ರುಗಳು ಅಮೆರಿಕಾ ಮತ್ತು ಇಸ್ರೇಲ್. ಆದರೆ ಜನ ಪಾಸ್‌ಪೋರ್ಟ್ ಹಿಡಿದು ಅಮೆರಿಕಾಗೆ ಹೋಗ್ತಾರೆ. ಅಮೆರಿಕಾ ಜಿಂದಾಬಾದ್ ಅಂದ್ರೆ ಯಾರೂ ವಿರೋಧಿಸಲ್ಲ, ಪಾಕಿಸ್ತಾನ ಜಿಂದಾಬಾದ್ ಅಂದ್ರೆ ಮಾತ್ರ ಯಾಕೆ ವಿರೋಧ ಮಾಡಬೇಕು?" ಎನ್ನುವುದು ಚೇತನ್ ವಾದ.

ಈ ಹೇಳಿಕೆಯನ್ನು ಖಂಡಿಸಿರುವ ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ, "ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಕ್ಷಮೆಯಿಲ್ಲ. ಅಣ್ಣಾವ್ರ ಸ್ಮಾರಕದ ಬಗ್ಗೆ ಹಗುರವಾಗಿ ಮಾತನಾಡಿದ ಚೇತನ್ ಕೂಡಲೇ ಕ್ಷಮೆ ಕೇಳಲೇಬೇಕು" ಎಂದು ಗುಡುಗಿದ್ದಾರೆ.

ಏನಿದು ಚೇತನ್ ಅಹಿಂಸಾ ತರ್ಕ?

ಚೇತನ್ ಅವರ ಪ್ರಕಾರ, 21ನೇ ಶತಮಾನದಲ್ಲಿ ಭೂಮಿಗಾಗಿ ದೊಡ್ಡ ಹೋರಾಟ ನಡೆಯುತ್ತಿದೆ. ಅಂತಹ ಕಾಲದಲ್ಲಿ ಒಬ್ಬ ನಟನ ಸ್ಮಾರಕಕ್ಕೆ ಅಷ್ಟು ದೊಡ್ಡ ಜಾಗ ನೀಡುವುದು ತಪ್ಪು ಎನ್ನುವುದು ಅವರ ಅಭಿಪ್ರಾಯ. ಆದರೆ, ಕೋಟ್ಯಂತರ ಕನ್ನಡಿಗರ ಭಾವನೆಗೆ ಧಕ್ಕೆ ತಂದಿರುವ ಈ ವಿಚಾರ ಈಗ ದೊಡ್ಡ ಮಟ್ಟದ ಪ್ರತಿಭಟನೆಗೆ ದಾರಿಯಾಗಿದೆ.

ಸದಾ ಯಾವುದಾದರೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಚೇತನ್, ಈ ಬಾರಿ ಅಣ್ಣಾವ್ರ ವಿಷಯಕ್ಕೆ ಕೈ ಹಾಕಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಕ್ಷಮೆ ಕೇಳದಿದ್ದರೆ ಚೇತನ್ ಸಿನಿಮಾಗಳನ್ನು ಮತ್ತು ಅವರ ಚಟುವಟಿಕೆಗಳನ್ನು ಬಹಿಷ್ಕರಿಸುವ ಎಚ್ಚರಿಕೆಯನ್ನೂ ಸಂಘಟನೆಗಳು ನೀಡಿವೆ.

Latest News