ಐಪಿಎಲ್ ಅಂದ್ರೆನೆ ಹಾಗೆ, ಇಲ್ಲಿ ಪ್ರತಿಭೆ ಇದ್ರೆ ಮಾತ್ರ ಬದುಕು. ಹೊಸಬರ ಅಬ್ಬರ ಶುರುವಾದ್ರೆ ಹಳಬರು ಜಾಗ ಬಿಟ್ಟುಕೊಡಲೇಬೇಕು. ಸದ್ಯದ ಪರಿಸ್ಥಿತಿ ನೋಡಿದ್ರೆ, ಭಾರತದ ಮೂವರು ಅನುಭವಿ ಆಟಗಾರರಿಗೆ 2026 ರ ಐಪಿಎಲ್ ಸೀಸನ್ ಕೊನೆಯದಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಕ್ರೀಡಾ ವಿಶ್ಲೇಷಕರ ಪ್ರಕಾರ, ಈ ಬಾರಿ ಕಳಪೆ ಫಾರ್ಮ್ ಮತ್ತು ವಯಸ್ಸಿನ ಕಾರಣದಿಂದ ಈ ಮೂವರು ಆಟಗಾರರು ಮುಂದಿನ ಹರಾಜಿನಲ್ಲಿ ಯಾರಿಗೂ ಬೇಡವಾಗಬಹುದು. ಆ ಲಿಸ್ಟ್ನಲ್ಲಿ ಯಾರಿದ್ದಾರೆ ಅಂತ ನೀವೇ ನೋಡಿ:
ಮನೀಷ್ ಪಾಂಡೆ (Manish Pandey)
ಭಾರತದ ಪರ ಶತಕ ಬಾರಿಸಿದ ಮೊದಲ ಐಪಿಎಲ್ ಆಟಗಾರ ಎಂಬ ಖ್ಯಾತಿ ಹೊಂದಿರೋ ಮನೀಷ್ ಪಾಂಡೆ ಅವರ ಕೆರಿಯರ್ ಈಗ 'ಸಂಧ್ಯಾಕಾಲ'ಕ್ಕೆ ಬಂದಂತಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಇವರನ್ನ ₹75 ಲಕ್ಷಕ್ಕೆ ಉಳಿಸಿಕೊಂಡಿದ್ದರೂ, ಪ್ಲೇಯಿಂಗ್ XI ನಲ್ಲಿ ಒಂದು ಚಾನ್ಸ್ ಕೂಡ ಕೊಡ್ತಿಲ್ಲ. ಮನೀಷ್ ಅವರಿಗೆ ಈಗ 36 ವರ್ಷ, ಮುಂದಿನ ಸೀಸನ್ ಬರೋ ಹೊತ್ತಿಗೆ 37 ಆಗಿರುತ್ತೆ. ಯುವ ಬ್ಯಾಟರ್ಗಳು ಪೈಪೋಟಿ ಕೊಡ್ತಿರೋದ್ರಿಂದ, 174 ಪಂದ್ಯಗಳ ಅನುಭವ ಇರೋ ಪಾಂಡೆಗೆ 2027 ರ ಹರಾಜಿನಲ್ಲಿ ಯಾವ ತಂಡವೂ ಕೈ ಹಾಕುವ ಸಾಧ್ಯತೆ ತುಂಬಾನೇ ಕಡಿಮೆ ಇದೆ.
ಇಶಾಂತ್ ಶರ್ಮಾ (Ishant Sharma)
ಟೀಮ್ ಇಂಡಿಯಾದ ಸೀನಿಯರ್ ವೇಗಿ ಇಶಾಂತ್ ಶರ್ಮಾ ಅವರ ಪರಿಸ್ಥಿತಿ ಕೂಡ ಮನೀಷ್ ಪಾಂಡೆ ತರಹವೇ ಆಗಿದೆ. ಗುಜರಾತ್ ಟೈಟಾನ್ಸ್ (GT) ತಂಡ ಇವರನ್ನ ₹75 ಲಕ್ಷಕ್ಕೆ ರಿಟೈನ್ ಮಾಡಿಕೊಂಡಿದೆ. ಆದ್ರೆ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರಂತಹ ಫಾಸ್ಟ್ ಬೌಲರ್ಗಳ ಮಧ್ಯೆ ಇಶಾಂತ್ ಅವರಿಗೆ ಮೈದಾನಕ್ಕೆ ಇಳಿಯೋ ಅವಕಾಶವೇ ಸಿಕ್ತಿಲ್ಲ. ಈಗಾಗ್ಲೇ 37 ದಾಟಿರೋ ಇಶಾಂತ್, ಮುಂದಿನ ವರ್ಷಕ್ಕೆ 38 ವರ್ಷದವರಾಗುತ್ತಾರೆ. ಹೀಗಿರುವಾಗ ತಂಡಗಳು ಅನುಭವಕ್ಕಿಂತ ವೇಗ ಮತ್ತು ಫಿಟ್ನೆಸ್ಗೆ ಆದ್ಯತೆ ನೀಡುವುದರಿಂದ ಇಶಾಂತ್ ಅವರ ಐಪಿಎಲ್ ಜರ್ನಿ ಇಲ್ಲಿಗೆ ಮುಕ್ತಾಯವಾಗಬಹುದು.
ಅಜಿಂಕ್ಯ ರಹಾನೆ (Ajinkya Rahane)
ಎಲ್ಲಕ್ಕಿಂತ ದೊಡ್ಡ ಆಶ್ಚರ್ಯ ಅಂದ್ರೆ ಅದು ಅಜಿಂಕ್ಯ ರಹಾನೆ ಅವರದ್ದು. ₹1.5 ಕೋಟಿ ಕೊಟ್ಟು KKR ಇವರನ್ನ ಉಳಿಸಿಕೊಂಡು, ತಂಡದ ಕ್ಯಾಪ್ಟನ್ ಪಟ್ಟವನ್ನೂ ಕಟ್ಟಿದೆ. ಆದ್ರೆ ಬ್ಯಾಟ್ಸ್ಮನ್ ಆಗಿ ರಹಾನೆ ಪ್ಲಾಪ್ ಆಗ್ತಿದ್ದಾರೆ. 2026 ರ ಸೀಸನ್ನಲ್ಲಿ ಇದುವರೆಗೆ ಆಡಿರೋ 6 ಪಂದ್ಯಗಳಲ್ಲಿ ಅವರು ಗಳಿಸಿದ್ದು ಬರೀ 152 ರನ್! ಕೆಕೆಆರ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಇವರ ನಾಯಕತ್ವದ ಬಗ್ಗೆಯೂ ಟೀಕೆಗಳು ಕೇಳಿಬರುತ್ತಿವೆ. ಸುನಿಲ್ ನರೈನ್ ಅವರನ್ನೇ ಕ್ಯಾಪ್ಟನ್ ಮಾಡಿ ಅಂತ ಮಾಜಿ ಕ್ರಿಕೆಟಿಗರು ಹೇಳ್ತಿರೋದ್ರಿಂದ, ರಹಾನೆ ಅವರಿಗೂ ಇದು ಕೊನೆಯ ಐಪಿಎಲ್ ಆಗುವ ಸಾಧ್ಯತೆ ದಟ್ಟವಾಗಿದೆ.
ಬರೀ ಮನೀಷ್, ಇಶಾಂತ್ ಅಥವಾ ರಹಾನೆ ಮಾತ್ರವಲ್ಲ, ಈ ಪಟ್ಟಿಗೆ ಎಂ.ಎಸ್. ಧೋನಿ ಕೂಡ ಸೇರಬಹುದು ಅನ್ನೋ ಮಾತುಗಳು ಕೇಳಿಬರುತ್ತಿವೆ. ಧೋನಿ ಅವರಿಗೆ 2026 ಕೊನೆಯ ಸೀಸನ್ ಆಗಬಹುದು ಎಂದು ಅವರ ಅಭಿಮಾನಿಗಳು ಈಗಲೇ ಭಾವುಕರಾಗುತ್ತಿದ್ದಾರೆ.ಕ್ರಿಕೆಟ್ನಲ್ಲಿ ಫಾರ್ಮ್ ಈಸ್ ಟೆಂಪರರಿ, ಕ್ಲಾಸ್ ಈಸ್ ಪರ್ಮನೆಂಟ್ ಅಂದರೂ, ಐಪಿಎಲ್ನಂತಹ ಕಾಂಪಿಟೇಶನ್ ಇರೋ ಕಡೆ ಫಾರ್ಮ್ ಇಲ್ಲದಿದ್ದರೆ ಕ್ಲಾಸ್ಗೆ ಬೆಲೆ ಸಿಗಲ್ಲ. ಈ ಮೂವರು ಆಟಗಾರರು ಭಾರತೀಯ ಕ್ರಿಕೆಟ್ಗೆ ನೀಡಿದ ಕೊಡುಗೆ ದೊಡ್ಡದು, ಆದ್ರೆ ಕಾಲ ಯಾರಿಗೂ ಕಾಯಲ್ಲ ಅಲ್ವಾ?