ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 96 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮೂರನೇ ಬಾರಿಗೆ ಟಿ20 ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತು. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಐತಿಹಾಸಿಕ ಗೆಲುವಿನ ನಂತರ, ತಂಡದ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗೌತಮ್ ಗಂಭೀರ್ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಅವರು ವಿಶ್ವಕಪ್ ಟ್ರೋಫಿಯನ್ನು ಅಹಮದಾಬಾದ್ನ ಹನುಮಾನ್ ಟೆಕ್ರಿ ದೇವಸ್ಥಾನಕ್ಕೆ ಕೊಂಡೊಯ್ದರು. ಈ ಕ್ರಮವು ಈಗ ದೇಶದಾದ್ಯಂತ ದೊಡ್ಡ ಚರ್ಚೆಗೆ ಮತ್ತು ವಿವಾದಕ್ಕೆ ಕಾರಣವಾಗಿದೆ.
ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿರುವ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಕೀರ್ತಿ ಆಝಾದ್, ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. "ಇದು ನಾಚಿಕೆಗೇಡಿನ ಸಂಗತಿ" ಎಂದು ಕರೆದಿರುವ ಅವರು, ಕ್ರೀಡಾ ಸಾಧನೆಯನ್ನು ಧಾರ್ಮಿಕ ಬಣ್ಣದಲ್ಲಿ ನೋಡುವುದನ್ನು ವಿರೋಧಿಸಿದ್ದಾರೆ.
ತಮ್ಮ ವಾದವನ್ನು ಮಂಡಿಸುವಾಗ ಕೀರ್ತಿ ಆಝಾದ್ ಅವರು, "1983ರಲ್ಲಿ ನಾವು ವಿಶ್ವಕಪ್ ಗೆದ್ದಾಗ ನಮ್ಮ ತಂಡದಲ್ಲಿ ಎಲ್ಲಾ ಧರ್ಮದ ಆಟಗಾರರಿದ್ದೆವು. ನಾವು ಟ್ರೋಫಿಯನ್ನು ಇಡೀ ಭಾರತೀಯರಿಗೆ ಸೇರಿದ್ದು ಎಂದು ಭಾವಿಸಿದ್ದೆವು. ಈಗ ಈ ಟ್ರೋಫಿಯನ್ನು ಕೇವಲ ಒಂದು ನಿರ್ದಿಷ್ಟ ಧರ್ಮದ ದೇವಸ್ಥಾನಕ್ಕೆ ಏಕೆ ಕೊಂಡೊಯ್ಯಲಾಗಿದೆ? ಇದನ್ನು ಮಸೀದಿ, ಚರ್ಚ್ ಅಥವಾ ಗುರುದ್ವಾರಗಳಿಗೆ ಏಕೆ ಕೊಂಡೊಯ್ಯಲಿಲ್ಲ?" ಎಂದು ಪ್ರಶ್ನಿಸಿದ್ದಾರೆ.
ರಾಷ್ಟ್ರದ ಸ್ವತ್ತು vs ಧಾರ್ಮಿಕ ಆಚರಣೆ
ಕೀರ್ತಿ ಆಝಾದ್ ಅವರ ಪ್ರಕಾರ, ಈ ಟ್ರೋಫಿಯು ಸುಮಾರು 1.4 ಬಿಲಿಯನ್ ಭಾರತೀಯರ ಶ್ರಮ ಮತ್ತು ಪ್ರೀತಿಯ ಸಂಕೇತವಾಗಿದೆ. ಯಾವುದೇ ಒಬ್ಬ ವ್ಯಕ್ತಿಯ ಅಥವಾ ಒಂದು ಧರ್ಮದ ಸಾಧನೆಯಲ್ಲ. ಆ ತಂಡದಲ್ಲಿ ಆಡಿದ ಮೊಹಮ್ಮದ್ ಸಿರಾಜ್ ಅಥವಾ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದ ಸಂಜು ಸ್ಯಾಮ್ಸನ್ ಅವರಂತಹ ಆಟಗಾರರು ತಮ್ಮ ವೈಯಕ್ತಿಕ ಧಾರ್ಮಿಕ ಸ್ಥಳಗಳಿಗೆ ಟ್ರೋಫಿಯನ್ನು ಕೊಂಡೊಯ್ಯಲು ಮುಂದಾಗಲಿಲ್ಲ, ಹಾಗಿದ್ದಾಗ, ಅಧಿಕೃತವಾಗಿ ಇಡೀ ತಂಡದ ಪ್ರತಿನಿಧಿಗಳು ದೇವಸ್ಥಾನಕ್ಕೆ ಹೋಗಿದ್ದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸೂರ್ಯಕುಮಾರ್ ಯಾದವ್ ಗೌತಮ್ ಗಂಭೀರ್ ಮತ್ತು ಜಯ್ ಶಾ ಅವರ ಈ ನಡೆ ಈಗ ಕ್ರೀಡಾ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಕೀರ್ತಿ ಆಝಾದ್ ಅವರಂತಹ ಹಿರಿಯ ಆಟಗಾರರು ಈ ವಿಷಯವನ್ನು ಪ್ರಸ್ತಾಪಿಸಿರುವುದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ನೀಡುವಂತಿದೆ. ಭಾರತ ತಂಡದ ಈ ಐತಿಹಾಸಿಕ ಸಾಧನೆಯು ಎಲ್ಲರನ್ನೂ ಒಗ್ಗೂಡಿಸುವಂತಿರಬೇಕೇ ಹೊರತು, ಧರ್ಮದ ಹೆಸರಿನಲ್ಲಿ ವಿಭಜಿಸುವಂತಾಗಬಾರದು ಎಂಬುದು ಈ ವಿವಾದದ ತಿರುಳಾಗಿದೆ.