Dec 16, 2025 Languages : ಕನ್ನಡ | English

ಬೆಂಗಳೂರಿನಲ್ಲಿ ಹಗಲು ದರೋಡೆ!! ಬಂಗಾರ ಬೆಳ್ಳಿ ಸೇರಿ 19.30 ಲಕ್ಷ ರೂ. ಕನ್ನ ಹಾಕಿದ್ದವನ ಬಂಧನ!

ಹಗಲು ಮನೆ ಕಳವು ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯ ಬಂಧನ.  ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಗಲು ಮನೆ ಕಳವು ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಪಟ್ಟಂದೂರು ಅಗ್ರಹಾರದಲ್ಲಿ ವಾಸವಿರುವ ಫಿರಾದುದಾರರು 14/11/2025 ರಂದು ದೂರನ್ನು ಸಲ್ಲಿಸಿದ್ದು, ಮಧ್ಯಾಹ್ನ ಕೆಲಸಕ್ಕೆ ತೆರಳಿದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗೂ ನಗದನ್ನು ಕಳವು ಮಾಡಲಾಗಿದೆ. ಪ್ರಕರಣ ದಾಖಲಾದ ನಂತರ, ಪೊಲೀಸರು ತಕ್ಷಣವೇ ತನಿಖೆ ಕೈಗೊಂಡು, ಒಂದು ಗಂಟೆಯೊಳಗೆ ಪಟ್ಟಂದೂರು ಅಗ್ರಹಾರದಲ್ಲಿರುವ ಬೇಕರಿಯ ಬಳಿ ಆರೋಪಿಯನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ ಆತನು ಕಳವು ಮಾಡಿದ ವಸ್ತುಗಳನ್ನು ಪಕ್ಕದ ಮನೆಯ 2ನೇ ಮಹಡಿಯ ಪ್ಯಾಸೇಜ್‌ನಲ್ಲಿ ಮುಚ್ಚಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬೆಂಗಳೂರಿನಲ್ಲಿ ಹಗಲು ದರೋಡೆ. Image courtesy: AI Image
ಬೆಂಗಳೂರಿನಲ್ಲಿ ಹಗಲು ದರೋಡೆ. Image courtesy: AI Image

ಆರೋಪಿಯ ಮಾಹಿತಿಯ ಮೇರೆಗೆ, 15/11/2025 ರಂದು ಪೊಲೀಸರು 72 ಗ್ರಾಂ ಚಿನ್ನಾಭರಣ, 175 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ ₹11.03 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ವಶಪಡಿಸಿಕೊಂಡ ಆಸ್ತಿಯ ಮೌಲ್ಯ ₹19.30 ಲಕ್ಷ ರೂಪಾಯಿಗಳಷ್ಟಾಗಿದೆ.

ಬಂಧಿತನನ್ನು 15/11/2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಈ ಪ್ರಕರಣವು ನಗರದಲ್ಲಿ ಹಗಲು ಮನೆ ಕಳವು ಪ್ರಕರಣಗಳ ವಿರುದ್ಧ ಪೊಲೀಸರ ತ್ವರಿತ ಕಾರ್ಯಾಚರಣೆಯ ಉದಾಹರಣೆಯಾಗಿದೆ.

ಈ ಕಾರ್ಯಾಚರಣೆಯನ್ನು ವೈಟ್‌ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀ ಕೆ. ಪರಶುರಾಮ್, ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತ ಶ್ರೀಮತಿ ರೀನಾ ಸುವರ್ಣ ಹಾಗೂ ಇನ್ಸ್ಪೆಕ್ಟರ್ ಶ್ರೀ ಗುರುಪ್ರಸಾದ್ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ತಂಡವು ಯಶಸ್ವಿಯಾಗಿ ಪ್ರಕರಣವನ್ನು ಭೇಧಿಸಿದೆ ಎಂದು ಕೇಳಿಬಂದಿದೆ. 

Latest News