ಬೆಂಗಳೂರು ಮೂಲದ ಪ್ರಸಿದ್ಧ ಹೋಟೆಲ್ ಉದ್ಯಮವಾದ 'ರಾಮೇಶ್ವರಂ ಕೆಫೆ' ಇತ್ತೀಚೆಗಷ್ಟೇ ಮಹಾರಾಷ್ಟ್ರದ ಪುಣೆಯಲ್ಲಿ ತನ್ನ ಹೊಸ ಶಾಖೆಯನ್ನು ಆರಂಭಿಸಿತ್ತು. ಆದರೆ, ಆರಂಭವಾದ ಕೆಲವೇ ದಿನಗಳಲ್ಲಿ ಈ ಕೆಫೆಯು ಮಹಾನಗರ ಪಾಲಿಕೆಯ ಕ್ರಮವನ್ನು ಎದುರಿಸಬೇಕಾಗಿ ಬಂದಿದೆ. ಪುಣೆಯ ವಿಮಾನ ನಗರದಲ್ಲಿರುವ ಈ ಕೆಫೆಯ ಮುಂಭಾಗದ ಅಕ್ರಮ ನಿರ್ಮಾಣವನ್ನು ಪುಣೆ ಮಹಾನಗರ ಪಾಲಿಕೆ ಬುಧವಾರ ನೆಲಸಮ ಮಾಡಿದೆ.
ನಗರದ ನಿಯಮದಂತೆ ವಾಣಿಜ್ಯ ಸಂಕೀರ್ಣಗಳು ಮುಂಭಾಗದಲ್ಲಿ ಕಡ್ಡಾಯವಾಗಿ ಬಿಡಬೇಕಾದ 'ಫ್ರಂಟ್ ಮಾರ್ಜಿನ್' ಜಾಗವನ್ನು ರಾಮೇಶ್ವರಂ ಕೆಫೆ ಉಲ್ಲಂಘಿಸಿದೆ ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಅಕ್ರಮವಾಗಿ ಶಾಶ್ವತ ಮತ್ತು ತಾತ್ಕಾಲಿಕ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಇದರಿಂದ ಸಾರ್ವಜನಿಕರ ಓಡಾಟ ಹಾಗೂ ರಸ್ತೆ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಪುಣೆ ನಗರದಾದ್ಯಂತ ಅನಧಿಕೃತ ಕಟ್ಟಡಗಳ ವಿರುದ್ಧ ಪಾಲಿಕೆ ಈಗ ಸಮರ ಸಾರಿದೆ. ನಗರದ ಸೌಂದರ್ಯ ಮತ್ತು ಸಂಚಾರ ವ್ಯವಸ್ಥೆಯ ಹದಗೆಡಿಸುವ ಯಾವುದೇ ಅಕ್ರಮ ನಿರ್ಮಾಣಗಳನ್ನ ಸಹಿಸುವುದಿಲ್ಲ ಎಂದು ನಾಗರಿಕ ಸಂಸ್ಥೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ವಿಮಾನ ನಗರದ ಹೋಟೆಲ್ ಮೇಲೆ ನಡೆದ ಈ ದಾಳಿಯು ನಗರದ ಇತರೆ ಉದ್ಯಮಿಗಳಿಗೂ ಒಂದು ಎಚ್ಚರಿಕೆಯ ಸಂದೇಶವಾಗಿದೆ. ಪಾಲಿಕೆಯ ಜಾರಿ ವಿಭಾಗದ ತಂಡವು ಜೆಸಿಬಿ ಯಂತ್ರಗಳೊಂದಿಗೆ ಸ್ಥಳಕ್ಕೆ ಆಗಮಿಸಿ, ನಿಯಮಬಾಹಿರವಾಗಿ ನಿರ್ಮಿಸಲಾಗಿದ್ದ ಶೆಡ್ಗಳು ಮತ್ತು ಗೋಡೆಗಳನ್ನು ತೆರವುಗೊಳಿಸಿತು.
ರಾಮೇಶ್ವರಂ ಕೆಫೆ ತನ್ನ ರುಚಿಕರವಾದ ದಕ್ಷಿಣ ಭಾರತದ ಆಹಾರಕ್ಕಾಗಿ ಬಹಳ ಕಡಿಮೆ ಅವಧಿಯಲ್ಲಿ ಪುಣೆಯಲ್ಲಿ ಹೆಸರು ಮಾಡಿತ್ತು. ಹೀಗಾಗಿ, ಪಾಲಿಕೆಯ ಈ ದಿಢೀರ್ ಕ್ರಮವು ಗ್ರಾಹಕರಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೆಲವರು ಪಾಲಿಕೆಯ ಕ್ರಮವನ್ನು ಸ್ವಾಗತಿಸಿದ್ದರೆ, ಇನ್ನು ಕೆಲವರು ಹೋಟೆಲ್ ಆರಂಭವಾಗುವ ಮೊದಲೇ ಈ ಬಗ್ಗೆ ಗಮನ ಹರಿಸಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ಅಕ್ರಮ ಭಾಗವನ್ನು ಮಾತ್ರ ತೆರವುಗೊಳಿಸಲಾಗಿದ್ದು, ಹೋಟೆಲ್ನ ಉಳಿದ ಭಾಗಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ, ಇನ್ನು ಮುಂದೆ ಕಟ್ಟಡ ನಿರ್ಮಾಣದ ನಿಯಮಗಳನ್ನ ಪಾಲಿಸದಿದ್ದರೆ ಪರವಾನಗಿ ರದ್ದುಗೊಳಿಸುವ ಸಾಧ್ಯತೆಯೂ ಇದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ. ರಾಮೇಶ್ವರಂ ಕೆಫೆ ಆಡಳಿತ ಮಂಡಳಿಯು ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
The Pune Municipal Corporation (PMC) carried out a demolition drive at the newly opened Rameshwaram Cafe in Viman Nagar, citing illegal construction in the mandatory front margin area. Civic officials said the action was taken as part of an enforcement drive against unauthorised… pic.twitter.com/9lFhGU3o2h
— Punekar News (@punekarnews) March 4, 2026
ನಗರದ ವ್ಯವಸ್ಥಿತ ಬೆಳವಣಿಗೆಗೆ ಕಟ್ಟಡ ನಿಯಮಗಳ ಪಾಲನೆ ಅತ್ಯಗತ್ಯ. ಎಷ್ಟೇ ದೊಡ್ಡ ಬ್ರ್ಯಾಂಡ್ ಆಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.