Mar 25, 2026 Languages : ಕನ್ನಡ | English

ಉಪಚುನಾವಣೆ ಕಣಕ್ಕೆ ಸಜ್ಜಾದ ದಳಪತಿಗಳು - ಹೆಚ್‌ಡಿಕೆ ಎಂಟ್ರಿ ಬಗ್ಗೆ ನಿಖಿಲ್ ಕೊಟ್ಟ ಬಿಗ್ ಅಪ್‌ಡೇಟ್!!

ರಾಮನಗರದ ಚಿಕ್ಕೇಗೌಡನದೊಡ್ಡಿ ಗ್ರಾಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಖ್ಯವಾಗಿ ಕೇರಳಕ್ಕೆ ರಾಜ್ಯ ಸರ್ಕಾರ 10 ಕೋಟಿ ರೂಪಾಯಿ ಅನುದಾನ ನೀಡಿರುವುದನ್ನು ಪ್ರಶ್ನಿಸಿರುವ ಅವರು, ಸಿಎಂ ಸಿದ್ದರಾಮಯ್ಯ ಅವರ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ರಾಜ್ಯದ ಹಣ ಬೇರೆ ಕಡೆಗೆ 'ದಾನ' ಮಾಡ್ತಿದ್ದೀರಾ?: ಸಿದ್ದರಾಮಯ್ಯ ಸರ್ಕಾರಕ್ಕೆ ನಿಖಿಲ್ ಹಾಕಿದ ಚುರುಕಾದ ಟಾಂಗ್!
ರಾಜ್ಯದ ಹಣ ಬೇರೆ ಕಡೆಗೆ 'ದಾನ' ಮಾಡ್ತಿದ್ದೀರಾ?: ಸಿದ್ದರಾಮಯ್ಯ ಸರ್ಕಾರಕ್ಕೆ ನಿಖಿಲ್ ಹಾಕಿದ ಚುರುಕಾದ ಟಾಂಗ್!

ಕೇರಳದಲ್ಲಿ ಸಂಭವಿಸಿದ ಭೂಕುಸಿತದ ಸಂತ್ರಸ್ತರಿಗೆ ಕರ್ನಾಟಕ ಸರ್ಕಾರ 10 ಕೋಟಿ ರೂಪಾಯಿ ಸಹಾಯಧನ ಘೋಷಿಸಿರುವುದಕ್ಕೆ ನಿಖಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಕೇರಳದ ಮುಖ್ಯಮಂತ್ರಿಯೋ? ಎಂಬ ಸಂಶಯ ಬರುತ್ತಿದೆ" ಎಂದು ಅವರು ವ್ಯಂಗ್ಯವಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ರೈತರು ಕಣ್ಣೀರು ಹಾಕುತ್ತಿದ್ದಾಗ ಸರ್ಕಾರಕ್ಕೆ ಅವರ ಕೂಗು ಕೇಳಿಸಲಿಲ್ಲವೇ? ನಮ್ಮ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾಗ ನೆರವಿಗೆ ಬಾರದ ಸರ್ಕಾರ, ಬೇರೆ ರಾಜ್ಯಕ್ಕೆ ಹಣ ನೀಡುತ್ತಿರುವುದು ಕೇವಲ ರಾಜಕೀಯ ಲಾಭಕ್ಕಾಗಿ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಯ ಬಗ್ಗೆ ಮಾತನಾಡಿದ ನಿಖಿಲ್, ಜೆಡಿಎಸ್ ಈಗಾಗಲೇ ಉತ್ತಮ ಅಂತರ ಕಾಯ್ದುಕೊಂಡಿದೆ ಎಂದರು. ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ನಾಯಕರು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಸದ್ಯಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಪಾರ್ಲಿಮೆಂಟ್ ಅಧಿವೇಶನದಲ್ಲಿ ಬ್ಯುಸಿಯಾಗಿದ್ದಾರೆ. ಅದು ಮುಗಿದ ತಕ್ಷಣ ಅವರು ಕೂಡ ನೇರವಾಗಿ ಉಪಚುನಾವಣೆಯ ಪ್ರಚಾರ ಕಣಕ್ಕೆ ಇಳಿಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ ನಿಖಿಲ್, ಡಿ ಕೆ ಶಿವಕುಮಾರ್ ಅವರಿಗೆ ನೇರ ಸವಾಲು ಹಾಕಿದರು. "ಮೇಕೆದಾಟು ಯೋಜನೆ ಜಾರಿಯಾಗಬೇಕಾದರೆ ಮೊದಲು ತಮಿಳುನಾಡು ಸಿಎಂ ಸ್ಟಾಲಿನ್ ಅವರಿಂದ ಅಡ್ಡಿ ಇಲ್ಲದ ಪತ್ರ (NOC) ಪಡೆದುಕೊಂಡು ಬನ್ನಿ. ನಿಮ್ಮಿಬ್ಬರ ನಡುವೆ ಅಷ್ಟೊಂದು ಆತ್ಮೀಯತೆ ಇದೆಯಲ್ಲವೇ?" ಎಂದು ಕಾಲೆಳೆದರು. ಕೇಂದ್ರದಿಂದ ಅನುಮತಿ ಕೊಡಿಸಲು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಬದ್ಧರಾಗಿದ್ದಾರೆ, ಆದರೆ ರಾಜ್ಯ ಸರ್ಕಾರ ಮೊದಲು ತಮಿಳುನಾಡಿನ ಒಪ್ಪಿಗೆ ತರಲಿ ಎಂದು ಅವರು ಹೇಳಿದರು. ಎತ್ತಿನಹೊಳೆ ಯೋಜನೆಗೆ ದೇವೇಗೌಡರ ಮನವಿಯ ಮೇರೆಗೆ ಕೇಂದ್ರದಿಂದ ಸ್ಪಂದನೆ ಸಿಕ್ಕಿರುವುದನ್ನು ಅವರು ಇದೇ ವೇಳೆ ನೆನಪಿಸಿದರು.

ಜಿ.ಟಿ. ದೇವೇಗೌಡರು ಜೆಡಿಎಸ್‌ನಿಂದಲೇ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಕೇಳಿದ ಪ್ರಶ್ನೆಗೆ, "ಅವರು ಕಳೆದ ಬಾರಿ ನಮ್ಮ ಚಿಹ್ನೆಯಲ್ಲೇ ಗೆದ್ದಿದ್ದಾರೆ. ಮುಂದಿನ ನಿರ್ಧಾರವನ್ನು ಪಕ್ಷದ ವರಿಷ್ಠರು ತೆಗೆದುಕೊಳ್ಳುತ್ತಾರೆ" ಎಂದು ಸಂಕ್ಷಿಪ್ತವಾಗಿ ಉತ್ತರಿಸಿದರು. ಇನ್ನು ಹೆಚ್.ಡಿ. ದೇವೇಗೌಡರನ್ನು ಎನ್‌ಡಿಎ ಮೈತ್ರಿಕೂಟದ ಪರವಾಗಿ ನೇರವಾಗಿ ರಾಜ್ಯಸಭೆಗೆ ಆಯ್ಕೆ ಮಾಡುವ ವಿಚಾರದ ಬಗ್ಗೆ ತಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಮತ್ತು ಪಕ್ಷದೊಳಗೆ ಈ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ನಿಖಿಲ್ ಕುಮಾರಸ್ವಾಮಿ ಅವರ ಈ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ, ಅದರಲ್ಲೂ ವಿಶೇಷವಾಗಿ ಮೇಕೆದಾಟು ಮತ್ತು ಅನುದಾನದ ವಿಚಾರದಲ್ಲಿ ಹೊಸ ಸಂಚಲನ ಮೂಡಿಸಿವೆ.

Latest News