Apr 22, 2026 Languages : ಕನ್ನಡ | English

ಟ್ರಾಫಿಕ್ ಜಾಮ್‌ನಿಂದ ಕೆರಳಿದ ಮಹಿಳೆ: ಬಿಜೆಪಿ ಸಚಿವರಿಗೆ ನಡುರಸ್ತೆಯಲ್ಲೇ ಕ್ಲಾಸ್! ವಿಡಿಯೋ ವೈರಲ್;

ಮುಂಬೈ ಅಂದ್ರೆ ನೆನಪಾಗೋದು ಅಲ್ಲಿನ ಮ್ಯಾರಥಾನ್ ಟ್ರಾಫಿಕ್. ಇಂತಹ ಟ್ರಾಫಿಕ್‌ನಲ್ಲಿ ಸಿಲುಕಿ ಸಾಮಾನ್ಯ ಜನರು ಸುಸ್ತಾಗಿ ಹೋಗೋದು ಮಾಮೂಲಿ. ಆದರೆ, ರಾಜಕಾರಣಿಗಳು ತಮ್ಮ ರ್ಯಾಲಿಗಳಿಗಾಗಿ ರಸ್ತೆ ಬಂದ್ ಮಾಡಿದ್ರೆ ಜನರ ಸಿಟ್ಟು ನೆತ್ತಿಗೇರೋದು ಸಹಜ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಘಟನೆಯೂ ಅದೇ. ಬಿಜೆಪಿಯ ಸಚಿವ ಗಿರೀಶ್ ಮಹಾಜನ್ ಅವರ ಎದುರೇ ಮಹಿಳೆಯೊಬ್ಬರು ಕೆಂಡಾಮಂಡಲವಾಗಿ ಕಿರುಚಾಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಟ್ರಾಫಿಕ್ ಜಾಮ್‌ನಲ್ಲಿ ಸಚಿವರಿಗೆ ಬೆರಳು ಮಾಡಿದ ಮುಂಬೈ ಮಹಿಳೆ; | Photo Credit: https://x.com/theskindoctor13
ಟ್ರಾಫಿಕ್ ಜಾಮ್‌ನಲ್ಲಿ ಸಚಿವರಿಗೆ ಬೆರಳು ಮಾಡಿದ ಮುಂಬೈ ಮಹಿಳೆ; | Photo Credit: https://x.com/theskindoctor13

ಮುಂಬೈನ ಜಾಂಬೋರಿ ಮೈದಾನದ ಹತ್ತಿರ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸೇರಿ 'ಮಹಿಳಾ ಜನ ಆಕ್ರೋಶ ರ್ಯಾಲಿ' ಹಮ್ಮಿಕೊಂಡಿದ್ದವು. 2023ರ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ವಿಳಂಬ ಮಾಡುತ್ತಿರುವುದನ್ನು ಪ್ರತಿಭಟಿಸಿ ಈ ರ್ಯಾಲಿ ನಡೆಸಲಾಗುತ್ತಿತ್ತು. ಆದರೆ, ಈ ಪ್ರತಿಭಟನೆ ನಡೆದಿದ್ದು ಸಂಜೆ ವೇಳೆ, ಅಂದರೆ ಆಫೀಸ್ ಮುಗಿಸಿ ಎಲ್ಲರೂ ಮನೆಗೆ ಹೋಗುವ ಸಾಯಂಕಾಲ ವೇಳೆ ಎಂದು ಕೇಳಿಬಂದಿದೆ. ರಸ್ತೆಯಲ್ಲೇ ಪ್ರತಿಭಟನಾಕಾರರು ಜಮಾಯಿಸಿದ್ದರಿಂದ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜನರು ವಾಹನಗಳಲ್ಲಿ ಸಿಲುಕಿ ನಲುಗಿ ಹೋಗಿದ್ದರು.

ಸಚಿವರಿಗೆ ಬೆರಳು ಮಾಡಿ ಎಚ್ಚರಿಕೆ ಕೊಟ್ಟ ಮಹಿಳೆ

ಟ್ರಾಫಿಕ್‌ನಲ್ಲಿ ಸಿಲುಕಿ ತಾಳ್ಮೆ ಕಳೆದುಕೊಂಡ ಮಹಿಳೆಯೊಬ್ಬರು ಕಾರಿನಿಂದ ಇಳಿದು ನೇರವಾಗಿ ಸಚಿವ ಗಿರೀಶ್ ಮಹಾಜನ್ ಅವರ ಹತ್ತಿರ ಹೋದರು. ಸಚಿವರನ್ನು ಬೆರಳು ಮಾಡಿ ತೋರಿಸುತ್ತಾ, "ಯಾಕೆ ರಸ್ತೆ ಬ್ಲಾಕ್ ಮಾಡಿದ್ದೀರಾ? ಜನರಿಗೆ ತೊಂದರೆ ಕೊಟ್ಟು ಪ್ರತಿಭಟನೆ ಮಾಡಬೇಕಾ? ಮೈದಾನ ಖಾಲಿ ಇದೆಯಲ್ಲ, ಅಲ್ಲಿಗೆ ಹೋಗಿ ಪ್ರತಿಭಟನೆ ಮಾಡಿ, ನಮಗೆ ದಾರಿ ಬಿಡಿ" ಅಂತ ಜೋರಾಗಿ ಕೂಗಾಡಿದರು.

ಆಕೆಯ ಆಕ್ರೋಶ ಎಷ್ಟು ಜೋರಾಗಿತ್ತು ಅಂದ್ರೆ, ಅಲ್ಲಿ ಸೇರಿದ್ದ ಪೊಲೀಸರು ಮತ್ತು ಕಾರ್ಯಕರ್ತರು ಒಂದು ಕ್ಷಣ ಸುಮ್ಮನಾಗಿಬಿಟ್ಟರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮುಂಬೈ ಜನರು ಆ ಮಹಿಳೆಯ ಧೈರ್ಯಕ್ಕೆ ಜೈ ಎಂದಿದ್ದಾರೆ.

ವಿರೋಧ ಪಕ್ಷಗಳಿಂದ ಪ್ರಶಂಸೆ, ಬೆಂಬಲಿಗರಿಂದ ಸಮರ್ಥನೆ!

ಈ ವಿಡಿಯೋ ಹೊರಬಂದಿದ್ದೇ ತಡ, ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕರು ಆ ಮಹಿಳೆಯ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. "ಸಾಮಾನ್ಯ ಜನರ ಕಷ್ಟ ರಾಜಕಾರಣಿಗಳಿಗೆ ಅರ್ಥವಾಗಲ್ಲ, ಆ ಮಹಿಳೆ ಸರಿಯಾಗಿಯೇ ಕೇಳಿದ್ದಾರೆ" ಎಂದು ಪ್ರಶಂಸಿಸಿದ್ದಾರೆ. ಆದರೆ, ಬಿಜೆಪಿ ಬೆಂಬಲಿಗರು ಮಾತ್ರ "ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಹಕ್ಕು, ಇದಕ್ಕೆ ಅಡ್ಡಿಪಡಿಸಬಾರದು" ಎಂದು ತಮ್ಮ ಪಾರ್ಟಿಯನ್ನು ಸಮರ್ಥಿಸಿಕೊಂಡಿದ್ದಾರೆ.

ರಾಜಕೀಯ ರ್ಯಾಲಿಗಳು ಜನರಿಗೆ ಅನಿವಾರ್ಯವೇ?

ನೋಡಿ, ಯಾವುದೇ ಪಕ್ಷ ಇರಲಿ, ಪ್ರತಿಭಟನೆ ಮಾಡುವುದು ಅವರ ಹಕ್ಕು ನಿಜ. ಆದರೆ, ಅಮಾಯಕ ಜನರು ಆಫೀಸ್ ಮುಗಿಸಿ ಸುಸ್ತಾಗಿ ಮನೆಗೆ ಹೋಗುವಾಗ ರಸ್ತೆಗಳನ್ನು ಬಂದ್ ಮಾಡುವುದು ಎಷ್ಟು ಸರಿ? ಪ್ರತಿಭಟನೆಗೆ ಅಂತಾನೇ ಮೈದಾನಗಳಿರುವಾಗ ರಸ್ತೆಗಳನ್ನೇ ಯಾಕೆ ಆರಿಸಿಕೊಳ್ಳುತ್ತಾರೆ? ಈ ಮಹಿಳೆ ಒಬ್ಬರೇ ಧ್ವನಿ ಎತ್ತಿರಬಹುದು, ಆದರೆ ಆಕೆಯ ಆಕ್ರೋಶ ಆ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಸಾವಿರಾರು ಜನರ ಪರವಾಗಿತ್ತು.

ರಾಜಕಾರಣಿಗಳು ಮೈದಾನಕ್ಕೆ ಹೋಗಿ, ನಮಗೆ ದಾರಿ ಬಿಡಿ ಎನ್ನುವ ಮುಂಬೈ ಮಹಿಳೆಯ ಈ ಮಾತು ಈಗ ದೇಶಾದ್ಯಂತ ಟ್ರಾಫಿಕ್‌ನಲ್ಲಿ ಸಿಲುಕುವ ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಧ್ವನಿಯಾಗಿದೆ.

Latest News