ಕೋಪದ ಕೈಗೆ ಬುದ್ಧಿ ಕೊಟ್ಟರೆ ಹೆತ್ತ ಕರುಳನ್ನೇ ಕತ್ತರಿಸಲು ಹಿಂಜರಿಯುವುದಿಲ್ಲ ಎಂಬುದಕ್ಕೆ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ನಡೆದಿರುವ ಈ ರಕ್ತಚರಿತ್ರೆಯೇ ಸಾಕ್ಷಿ. "ಸೊಸೆ ಎದುರು ನನಗೆ ಅವಮಾನ ಮಾಡ್ತೀರಾ?" ಎಂದು ಸಿಟ್ಟಿಗೆದ್ದ ನರಹಂತಕ ಮಗನೊಬ್ಬ, ತನ್ನ ಹೆತ್ತ ತಂದೆ-ತಾಯಿಯ ತಲೆಗೆ ಒನಕೆಯಿಂದ ಭೀಕರವಾಗಿ ಜಜ್ಜಿ ಕೊ*ಲೆ ಮಾಡಿದ್ದಾನೆ. ಶಿರ್ಪುರದ ಮಹಾವೀರ್ ಸೊಸೈಟಿಯಲ್ಲಿ ನಡೆದಿರುವ ಈ ಭೀಕರ ಘಟನೆ ಇಡೀ ಮಾನವಕುಲವೇ ತಲೆ ತಗ್ಗಿಸುವಂತೆ ಮಾಡಿದೆ.
ಕೊ*ಲೆಯಾದ ದುರ್ದೈವಿಗಳನ್ನು ಇಂದುರಾಮ್ ಮಹತೋ ಮತ್ತು ರಂಜುದೇವಿ ಮಹತೋ ಎಂದು ಗುರುತಿಸಲಾಗಿದೆ. ಈ ದಂಪತಿಗಳು ತಮ್ಮ ಮಗಳ ಮದುವೆಯನ್ನು ಅತ್ಯಂತ ಸಡಗರದಿಂದ ಮುಗಿಸಿ, ಅದೇ ದಿನ ಸಾಯಂಕಾಲ ತಾವಿದ್ದ ಮನೆಗೆ ವಾಪಸ್ ಬಂದಿದ್ದರು. ಮಗಳನ್ನ ಗಂಡನ ಮನೆಗೆ ಕಳುಹಿಸಿದ ನೆಮ್ಮದಿಯಲ್ಲಿದ್ದ ಪೋಷಕರಿಗೆ, ಸ್ವಂತ ಮಗನೇ ಯಮನಾಗುತ್ತಾನೆ ಎಂದು ಸ್ವಲ್ಪವೂ ತಿಳಿದಿರಲಿಲ್ಲ.
ಮನೆಗೆ ಬಂದ ತಂದೆ-ತಾಯಿ, ಮಗ ಚಂದನ್ ಇಂದುರಾಮ್ ಮಹತೋನಿಗೆ ಯಾವುದೋ ಹಳೆಯ ವಿಷಯವನ್ನು ತೆಗೆದು ಬುದ್ಧಿ ಹೇಳಲು ಶುರು ಮಾಡಿದ್ದಾರೆ. ಈ ವೇಳೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ಚಂದನ್ನ ಪತ್ನಿಯ ಮುಂದೆಯೇ ತಂದೆ-ತಾಯಿ ಆತನಿಗೆ ತೀವ್ರವಾಗಿ ತರಾಟೆಗೆ ತಗೆದುಕೊಂಡು, ಗದರಿಸಿದ್ದಾರೆ ಎನ್ನಲಾಗಿದೆ.
"ಮದುವೆಯಾಗಿ ಬಂದಿರುವ ಹೆಂಡತಿಯ ಮುಂದೆಯೇ ನನಗೆ ಇಷ್ಟೊಂದು ಇನ್ಸಲ್ಟ್ ಮಾಡ್ತೀರಾ?" ಎಂಬ ಅಹಂ ಮತ್ತು ಕೋಪ ಮಗ ಚಂದನ್ನ ತಲೆಗೆ ಹತ್ತಿದೆ. ವಿವೇಚನೆ ಕಳೆದುಕೊಂಡ ಆತ, ಮನೆಯಲ್ಲಿದ್ದ ಭಾರವಾದ ಒನಕೆಯನ್ನು ಕೈಗೆತ್ತಿಕೊಂಡು ರಾಕ್ಷಸನಂತೆ ವರ್ತಿಸಿದ್ದಾನೆ.
ಹೆಂಡತಿ ಕಣ್ಣೆದುರೇ ತಂದೆ ಇಂದುರಾಮ್ ಹಾಗೂ ತಾಯಿ ರಂಜುದೇವಿ ಅವರ ತಲೆಯ ಭಾಗಕ್ಕೆ ಒನಕೆಯಿಂದ ಕಟುಕನಂತೆ ಸರಣಿ ಪ್ರಹಾರ ನಡೆಸಿದ್ದಾನೆ. ಪೆಟ್ಟು ತಲೆಯ ಮರ್ಮಸ್ಥಾನಕ್ಕೆ ಬಿದ್ದಿದ್ದರಿಂದ ದಂಪತಿಗಳು ಕಿರುಚಾಡುತ್ತಾ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಕೊನೆಯುಸಿರೆಳೆದಿದ್ದಾರೆ. ಕಣ್ಣೆದುರೇ ನಡೆದ ಈ ಭೀಕರ ದೃಶ್ಯವನ್ನು ನೋಡಿ ಪತ್ನಿ ದಿಕ್ಕುತೋಚದೆ ಆಘಾತಕ್ಕೊಳಗಾಗಿದ್ದಾಳೆ.
ಹೆತ್ತವರ ಪ್ರಾಣ ಪಕ್ಷಿ ಹಾರುತ್ತಿದ್ದಂತೆ ಹೆದರಿದ ಆರೋಪಿ ಚಂದನ್, ಮನೆಯಿಂದ ಕಾಲ್ಕಿತ್ತು ಓಡಿ ಹೋಗಲು ಪ್ಲಾನ್ ಮಾಡಿದ್ದಾನೆ. ಆದರೆ ಮನೆಯೊಳಗೆ ಕೇಳಿಬಂದ ಜೋರಾದ ಕಿರುಚಾಟ ಹಾಗೂ ಗಲಾಟೆಯ ಸದ್ದಿನಿಂದ ಅಲರ್ಟ್ ಆಗಿದ್ದ ನೆರೆಹೊರೆಯವರು, ರಕ್ತಸಿಕ್ತ ಬಟ್ಟೆಯೊಂದಿಗೆ ಓಡುತ್ತಿದ್ದ ಚಂದನ್ನನ್ನು ಸುತ್ತುವರಿದು ಹಿಡಿದಿದ್ದಾರೆ. ಸ್ಥಳದಲ್ಲೇ ಆತನಿಗೆ ಧರ್ಮದೇಟು ನೀಡಿ, ತಕ್ಷಣವೇ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಶಿರ್ಪುರ ಪೊಲೀಸರು ರಕ್ತದ ಮಡುವಿನಲ್ಲಿದ್ದ ವೃದ್ಧ ದಂಪತಿಗಳ ಶ*ವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಆರೋಪಿ ಚಂದನ್ನನ್ನು ಕಸ್ಟಡಿಗೆ ತಗೆದುಕೊಂಡಿದ್ದಾರೆ.
ಒಟ್ಟಾರೆಯಾಗಿ, ಕ್ಷಣಿಕ ಕೋಪ ಹಾಗೂ ಹೆಂಡತಿಯ ಮುಂದೆ ಅಹಂಗೆ ಬಿದ್ದ ಮಗ ಹೆತ್ತವರನ್ನೇ ಮುಗಿಸಿ ಜೈಲು ಸೇರಿದ್ದಾನೆ. ಮಾತು ಮತ್ತು ಕೋಪದ ಮೇಲೆ ನಿಯಂತ್ರಣ ಇಲ್ಲದಿದ್ದರೆ, ಎಂತಹ ಸುಂದರ ಸಂಸಾರವೂ ಕ್ಷಣಾರ್ಧದಲ್ಲಿ ಹೆಣಗಳ ರಾಶಿಯಾಗುತ್ತೆ ಎಂಬುದಕ್ಕೆ ಈ ಘಟನೆಯೇ ಕಹಿ ಉದಾಹರಣೆ.