May 7, 2026 Languages : ಕನ್ನಡ | English

ಕೊಪ್ಪಳದಲ್ಲಿ ಪ್ರೀತಿಗಾಗಿ ಯುವಕನ ಮೇಲೆ ಭೀಕರ ಹಲ್ಲೆ - 30 ಜನರ ಗುಂಪಿನಿಂದ ಅಟ್ಟಹಾಸ, ಸಿಸಿಟಿವಿಯಲ್ಲಿ ದೃಶ್ಯ ಸೆರೆ!!

ಪ್ರೀತಿ ಎಂಬುದು ಪ್ರಾಣಕ್ಕೆ ಕುತ್ತು ತಂದಿರುವ ಘಟನೆಯೊಂದು ಕೊಪ್ಪಳ ನಗರದಲ್ಲಿ ನಡೆದಿದೆ. ಅನ್ಯ ಧರ್ಮದ ಯುವತಿಯನ್ನು ಪ್ರೀತಿಸಿದ ಎಂಬ ಒಂದೇ ಕಾರಣಕ್ಕೆ ಯುವಕನೊಬ್ಬನ ಮೇಲೆ 30ಕ್ಕೂ ಹೆಚ್ಚು ಜನರ ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಕೊಪ್ಪಳದಲ್ಲಿ ಪ್ರೀತಿಗೆ ಕುತ್ತು – 30 ಜನರ ದಾಳಿ!
ಕೊಪ್ಪಳದಲ್ಲಿ ಪ್ರೀತಿಗೆ ಕುತ್ತು – 30 ಜನರ ದಾಳಿ!

ಕೊಪ್ಪಳದ ಸಮೀರ್ ಎಂಬ ಯುವಕ ಅನ್ಯ ಧರ್ಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದು ಯುವತಿಯ ಮನೆಯವರಿಗೆ, ವಿಶೇಷವಾಗಿ ಆಕೆಯ ಅಣ್ಣಂದಿರಿಗೆ ತೀವ್ರ ಅಸಮಾಧಾನ ತಂದಿತ್ತು. ಇದೇ ಸಿಟ್ಟಿನಲ್ಲಿ ನಿನ್ನೆ ರಾತ್ರಿ ಸುಮಾರು 9 ಗಂಟೆಯ ವೇಳೆಗೆ, ನಗರದ ಹರ್ಷಾ ಹೋಟೆಲ್ ಬಳಿ ಸಮೀರ್ ಬಂದಿದ್ದಾಗ ಈ ಭೀಕರ ದಾಳಿ ನಡೆದಿದೆ.

ಸಿನಿಮಾ ಶೈಲಿಯಲ್ಲಿ ಅಟ್ಯಾಕ್!

ದಾಳಿ ನಡೆದ ರೀತಿನೇ ಭಯಾನಕವಾಗಿದೆ. ಆಟೋ, ಕಾರು ಮತ್ತು ಬೈಕ್‌ಗಳಲ್ಲಿ ಬಂದ ಸುಮಾರು 30ಕ್ಕೂ ಹೆಚ್ಚು ಯುವಕರ ಗ್ಯಾಂಗ್ ಏಕಾಏಕಿ ಸಮೀರ್ ಮೇಲೆ ಮುಗಿಬಿದ್ದಿದೆ. ಯುವತಿಯ ಕಡೆಯ ಅಣ್ಣಂದಿರೇ ಈ ಕೃತ್ಯದ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದೆ. ಕೇವಲ ಕೈಯಿಂದ ಹೊಡೆಯುವುದಷ್ಟೇ ಅಲ್ಲದೆ, ಕಬ್ಬಿಣದ ರಾಡ್ ಹಾಗೂ ಚಾಕುಗಳಿಂದ ಮನಬಂದಂತೆ ಇರಿದು ಕೊ*ಲೆ ಮಾಡಲು ಯತ್ನಿಸಿದ್ದಾರೆ ಎಂದು ಸಮೀರ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಕಿರಾತಕರ ಅಟ್ಟಹಾಸ

ಹರ್ಷಾ ಹೋಟೆಲ್ ಬಳಿ ನಡೆದ ಈ ಇಡೀ ಘಟನೆ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗುಂಪೊಂದು ಒಬ್ಬನೇ ಯುವಕನ ಮೇಲೆ ಕ್ರೂರವಾಗಿ ಹಲ್ಲೆ ಮಾಡುತ್ತಿರುವ ದೃಶ್ಯಗಳು ಎದೆ ನಡುಗಿಸುವಂತಿವೆ. ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಮೀರ್‌ನನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಆತ ಪಾರಾಗಿದ್ದಾನೆ ಎನ್ನಲಾಗಿದೆ.

ಪೊಲೀಸರ ಬಿಗಿ ಕ್ರಮ:

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಮೀರ್‌ನಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂಬಂಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಆರೋಪಿಗಳು - ಯುವತಿಯ ಇಬ್ಬರು ಅಣ್ಣಂದಿರು ಹಾಗೂ ದಾಳಿಯಲ್ಲಿ ಭಾಗಿಯಾದ 30ಕ್ಕೂ ಹೆಚ್ಚು ಯುವಕರ ಮೇಲೆ ಕೇಸ್ ದಾಖಲಿಸಿಕೊಳ್ಳಲಾಗಿದೆ.

ಎಸ್ಪಿ ಮಾಹಿತಿ - ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ರಾಮ್ ಎಲ್ ಅರಸಿದ್ದಿ ಅವರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ನಗರದಲ್ಲಿ ಆತಂಕದ ವಾತಾವರಣ

ಸಾರ್ವಜನಿಕ ಪ್ರದೇಶದಲ್ಲೇ ಇಷ್ಟೊಂದು ದೊಡ್ಡ ಗುಂಪು ಸೇರಿ ಯುವಕನ ಮೇಲೆ ದಾಳಿ ಮಾಡಿರುವುದು ನಗರದ ಜನರಲ್ಲಿ ಆತಂಕ ಮೂಡಿಸಿದೆ. ಪ್ರೀತಿ-ಪ್ರೇಮದ ವಿಚಾರಕ್ಕೆ ಈ ರೀತಿ ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಕೊಪ್ಪಳದಲ್ಲಿ ನಡೆದ ಈ ಘಟನೆಯಿಂದಾಗಿ ಈಗ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಶಾಂತಿ ಕಾಪಾಡಲು ಸಾರ್ವಜನಿಕರಲ್ಲಿ ಎಸ್ಪಿ ಮನವಿ ಮಾಡಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. 

Latest News