ಬೆಂಗಳೂರಿಗರಿಗೆ ಬಿಗ್ ಅಲರ್ಟ್ - ಮುಂದಿನ 7 ದಿನ ಸಿಲಿಕಾನ್ ಸಿಟಿಯಲ್ಲಿ ನೆಕ್ಸ್ಟ್ ಲೆವೆಲ್‌ನಲ್ಲಿ ಇರಲಿದೆಯಾ ವರುಣನ ಆರ್ಭಟ?

ಬೇಸಿಗೆಯ ಉರಿ ಸೆಖೆಯಿಂದ ಕಂಗೆಟ್ಟಿರೋ ಜನರಿಗೆ ಹವಾಮಾನ ಇಲಾಖೆ ಒಂದು ಕೂಲ್ ಕೂಲ್ ಸುದ್ದಿ ಕೊಟ್ಟಿದೆ. ರಾಜ್ಯದಲ್ಲಿ ಪ್ರೀ-ಮಾನ್ಸೂನ್ ಅಂದರೆ ಮುಂಗಾರು ಪೂರ್ವ ಮಾರುತಗಳು ಸಖತ್ ಆಕ್ಟಿವ್ ಆಗಿದ್ದು, ಇಂದಿನಿಂದ (ಮೇ 22) ಮೇ 28ರ ವರೆಗೆ ಅಂದರೆ ಮುಂದಿನ ಒಂದು ವಾರ ಇಡೀ ಕರ್ನಾಟಕದಾದ್ಯಂತ ವರುಣದೇವ ಅಬ್ಬರಿಸಲಿದ್ದಾನೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ನೈಋತ್ಯ ಮುಂಗಾರು ಈಗಾಗಲೇ ಮಾಲ್ಡೀವ್ಸ್ ಮತ್ತು ಬಂಗಾಳ ಕೊಲ್ಲಿಯ ಕೆಲವು ಭಾಗಗಳಿಗೆ ಎಂಟ್ರಿ ಕೊಡೋಕೆ ರೆಡಿಯಾಗ್ತಿದ್ದು, ಇದರ ಎಫೆಕ್ಟ್‌ನಿಂದಾಗಿ ನಮ್ಮ ರಾಜ್ಯದ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ, ಗುಡುಗು, ಸಿಡಿಲು ಹಾಗೂ ಬಿರುಗಾಳಿ ಎದ್ದೇಳಲಿದೆ.

ಇಂದಿನಿಂದ ಒಂದು ವಾರ ಇಡೀ ಕರ್ನಾಟಕದಲ್ಲಿ ವರುಣನ ಅಬ್ಬರ! | Photo Credit: AI
ಇಂದಿನಿಂದ ಒಂದು ವಾರ ಇಡೀ ಕರ್ನಾಟಕದಲ್ಲಿ ವರುಣನ ಅಬ್ಬರ! | Photo Credit: AI

ನಿಮ್ಮ ಊರಿನಲ್ಲಿ ಮುಂದಿನ ಒಂದು ವಾರ ವೆದರ್ ಹೇಗಿರಲಿದೆ?

ಜಿಲ್ಲಾವಾರು ಮಳೆ ಲೆಕ್ಕಾಚಾರ: ಎಲ್ಲೆಲ್ಲಿ ಯಾವಾಗ ಮಳೆ?

ದಿನದಿಂದ ದಿನಕ್ಕೆ ಮಳೆಯ ತೀವ್ರತೆ ಬದಲಾಗಲಿದ್ದು, ಹವಾಮಾನ ಇಲಾಖೆ ನೀಡಿರೋ ಶೆಡ್ಯೂಲ್ ಹೀಗಿದೆ:

ಮೇ 23 (ಶನಿವಾರ): ಬಾಗಲಕೋಟೆ, ಕೊಪ್ಪಳ, ವಿಜಯಪುರ, ತುಮಕೂರು, ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರಿಯಲಿದೆ.

ಮೇ 24 (ಭಾನುವಾರ): ವೀಕೆಂಡ್‌ನಲ್ಲಿ ತುಮಕೂರು, ಹಾಸನ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಿರಲಿದೆ. ಈ ವೇಳೆ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

ಮೇ 25 ಮತ್ತು 26: ಈ ಎರಡು ದಿನ ಮಳೆಯ ತೀವ್ರತೆ ಕೊಂಚ ಕಮ್ಮಿ ಇರಲಿದ್ದರೂ, ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಂತೂ ಖಂಡಿತಾ ಆಗಲಿದೆ.

ಮೇ 27 ಮತ್ತು 28: ಮುಂಗಾರು ಪೂರ್ವ ಮಳೆ ಕೊನೆಯ ಎರಡು ದಿನ ಮತ್ತೆ ಪಿಕ್‌ಅಪ್ ಆಗಲಿದ್ದು, ಕರಾವಳಿಯ ಎಲ್ಲ ಜಿಲ್ಲೆಗಳು ಹಾಗೂ ಒಳನಾಡಿನ ಹಲವೆಡೆ ವ್ಯಾಪಕವಾಗಿ ಮಳೆ ಸುರಿಯಲಿದೆ.

ಇಷ್ಟೆಲ್ಲಾ ಮಳೆಯಾದರೂ ರಾಜ್ಯದ ಗರಿಷ್ಠ ತಾಪಮಾನದಲ್ಲೇನೂ ಸದ್ಯಕ್ಕೆ ದೊಡ್ಡ ಬದಲಾವಣೆ ಇರಲ್ಲ. ಉರಿ ಸೆಖೆಯ ವಾತಾವರಣ ಹಾಗೇ ಇರಲಿದ್ದು, ಮಳೆ ಬಂದಾಗ ಮಾತ್ರ ಕೊಂಚ ತಂಪು ವಾತಾವರಣ ಇರಲಿದೆ ಎಂದು IMD ಹೇಳಿದೆ.

ಬೆಂಗಳೂರಿಗರಿಗೆ ಬಿಗ್ ಅಲರ್ಟ್!

ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಈ ವಾರ ವರುಣನ ಅಬ್ಬರ ನೆಕ್ಸ್ಟ್ ಲೆವೆಲ್‌ನಲ್ಲಿ ಇರಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಬರೀ ಮಳೆಯಷ್ಟೇ ಅಲ್ಲ, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಸಿಡಿಲು ಮತ್ತು ಆಲಿಕಲ್ಲು ಸಹಿತ ಮಳೆ ಬರುವ ಸಾಧ್ಯತೆ ಇರುವುದರಿಂದ ಜನರು ಜಾಗರೂಕರಾಗಿರಲು ಹವಾಮಾನ ಇಲಾಖೆ ಸೂಚಿಸಿದೆ. ಆಫೀಸ್ ಮುಗಿಸಿ ಮನೆಗೆ ಹೋಗುವಾಗ ಕೊಡೆ ತರೋದನ್ನ ಮಾತ್ರ ಮರಿಬೇಡಿ!

ಉತ್ತರ ಒಳನಾಡಿನಲ್ಲಿ ಆಲಿಕಲ್ಲು ಮಳೆ ಶಾಕ್!

ಉತ್ತರ ಕರ್ನಾಟಕದ ಭಾಗದಲ್ಲೂ ಮಳೆರಾಯ ಆರ್ಭಟಿಸಲಿದ್ದಾನೆ. ಬೆಳಗಾವಿ, ಬಾಗಲಕೋಟೆ, ಗದಗ ಮತ್ತು ಧಾರವಾಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯ ಜೊತೆಗೆ ಆಲಿಕಲ್ಲು ಮಳೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಈ ಸಮಯದಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಸಖತ್ ಬಿರುಗಾಳಿ ಬೀಸಲಿದ್ದು, ಜಾಗ್ರತೆಯಿಂದ ಇರಬೇಕಾಗಿದೆ. ಇನ್ನು ವಿಜಯಪುರ, ರಾಯಚೂರು, ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಗಳ ಕೆಲವು ಕಡೆ ಸಾಧಾರಣ ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಎಂದಿನಂತೆ ಒಣ ಹವೆ ಮುಂದುವರಿಯಲಿದೆ.

ಕರಾವಳಿ ಮತ್ತು ಮಲೆನಾಡಿನ ಕಥೆ ಏನು?

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಭಾಗ ಹಾಗೂ ಮಲೆನಾಡಿನ ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳ ಹಲವು ಕಡೆಗಳಲ್ಲಿ ಮುಂದಿನ ದಿನಗಳಲ್ಲಿ ಚದುರಿದಂತೆ ಸಾಧಾರಣದಿಂದ ಭಾರಿ ಮಳೆಯಾಗುವ ಲಕ್ಷಣಗಳಿವೆ. ಮಳೆ ಬಿದ್ದರೂ ಸಹ ಈ ಭಾಗಗಳಲ್ಲಿ ಸದ್ಯಕ್ಕೆ ಸೆಖೆ ಮಾತ್ರ ಕಮ್ಮಿ ಆಗಲ್ಲ, ಗರಿಷ್ಠ ತಾಪಮಾನ ಹೀಗೆಯೇ ಮುಂದುವರಿಯಲಿದೆ.

ಸಾರ್ವಜನಿಕರಿಗೆ ಸೂಚನೆ: ಮಳೆ ಬರುವಾಗ ಸಿಡಿಲು ಮತ್ತು ಬಿರುಗಾಳಿಯ ತೀವ್ರತೆ ಹೆಚ್ಚಿರುವುದರಿಂದ, ಮರದ ಕೆಳಗೆ ಅಥವಾ ಹಳೇ ಕಟ್ಟಡಗಳ ಕೆಳಗೆ ನಿಲ್ಲಬೇಡಿ. ಗಾಳಿ ಜೋರಾಗಿ ಬೀಸುವಾಗ ವಾಹನ ಸವಾರರು ಎಚ್ಚರಿಕೆಯಿಂದ ಇರಿ.

Latest News