Apr 7, 2026 Languages : ಕನ್ನಡ | English

ನಡೀತಾ ನಡೀತಾ ಗುಂಡಿಗೆ ಬಿದ್ದ ಮೊಬೈಲ್ ಶಾಪ್ ಮಾಲೀಕ - ಈ ಘಟನೆ ನಿಮ್ಮನ್ನೂ ಬೆಚ್ಚಿಬೀಳಿಸುತ್ತೆ!! ವಿಡಿಯೋ ವೈರಲ್;

ದಾರಿಯಲ್ಲಿ ಹೋಗುವಾಗ ನಮಗೆ ಯಾವ ಕಡೆಯಿಂದ ಕಂಟಕ ಬರುತ್ತೆ ಅಂತ ಹೇಳೋಕೆ ಆಗಲ್ಲ. ಗುಜರಾತಿನ ದಕ್ಷಿಣ ಭಾಗದ ಪಾರ್ದಿ ಎಂಬಲ್ಲಿ ಮೊಬೈಲ್ ಶಾಪ್ ಇಟ್ಟುಕೊಂಡಿರೋ ನಿಖಿಲ್ ಭಾಯ್ ಎಂಬುವವರಿಗೆ ಇತ್ತೀಚೆಗೆ ಇಂತಹದ್ದೇ ಒಂದು ಘಟನೆ ನಡೆದಿದೆ. ಪಾಪ, ಅವರು ತಮ್ಮ ಪಾಡಿಗೆ ತಾವು ಕೆಲಸ ಮುಗಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರೋ ಪಾರ್ದಿ ಚಾರ್ ರಸ್ತಾ ಬಳಿ ನಡೆಯುತ್ತಾ ಬರ್ತಿದ್ರು. ಆದ್ರೆ ಮುಂದಿನ ಕ್ಷಣದಲ್ಲಿ ಏನಾಗುತ್ತೆ ಅನ್ನೋ ಅಂದಾಜು ಕೂಡ ಅವರಿಗಿರಲಿಲ್ಲ. ನಡೆಯುತ್ತಿರೋವಾಗಲೇ ಇದ್ದಕ್ಕಿದ್ದಂತೆ ಅವರು ಭೂಮಿ ಒಳಗಡೆ ಅದೃಶ್ಯವಾಗಿಬಿಟ್ಟರು.

ಸಿಸಿಟಿವಿ ದೃಶ್ಯ ವೈರಲ್: ಹೆದ್ದಾರಿ ಪಕ್ಕದ ಬೇಜವಾಬ್ದಾರಿತನ; | Photo Credit: https://x.com/ggganeshh
ಸಿಸಿಟಿವಿ ದೃಶ್ಯ ವೈರಲ್: ಹೆದ್ದಾರಿ ಪಕ್ಕದ ಬೇಜವಾಬ್ದಾರಿತನ; | Photo Credit: https://x.com/ggganeshh

ಅಸಲಿಗೆ ಅಲ್ಲಿ ಆಗಿದ್ದೇನು ಅಂದ್ರೆ, ಹೆದ್ದಾರಿ ಪಕ್ಕದಲ್ಲಿರೋ ಚರಂಡಿ ಮೇಲಿರೋ ಕಾಂಕ್ರೀಟ್ ಮುಚ್ಚಳ ಸವೆದು ಹೋಗಿತ್ತು. ನಿಖಿಲ್ ಅವರು ಅದರ ಮೇಲೆ ಕಾಲಿಡುತ್ತಿದ್ದಂತೆಯೇ ಆ ಮುಚ್ಚಳ ಕುಸಿದು ಬಿಟ್ಟಿತು. ನೋಡನೋಡುತ್ತಿದ್ದಂತೆಯೇ ಅವರು ಆಳವಾದ ಗಟಾರದೊಳಗೆ ಬಿದ್ದು ಹೋದರು. ಈ ಇಡೀ ಘಟನೆ ಹತ್ತಿರದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ವಿಡಿಯೋ ನೋಡಿದ್ರೆ ಎಂತವರೂ ಒಂದು ಕ್ಷಣ ಎದೆ ಝಲ್ಲನ್ನುತ್ತೆ.

ಅದೃಷ್ಟವಶಾತ್, ನಿಖಿಲ್ ಅವರು ಗಟಾರಕ್ಕೆ ಬೀಳುತ್ತಿದ್ದಂತೆಯೇ ಅಲ್ಲಿದ್ದ ಸಾರ್ವಜನಿಕರು ಮತ್ತು ಅಂಗಡಿಯವರು ತಕ್ಷಣವೇ ಧಾವಿಸಿ ಬಂದಿದ್ದಾರೆ. ಎಲ್ಲರೂ ಸೇರಿ ಜಾಗರೂಕತೆಯಿಂದ ನಿಖಿಲ್ ಅವರನ್ನು ಮೇಲಕ್ಕೆ ಎತ್ತಿದ್ದಾರೆ. ಸ್ವಲ್ಪ ಮಿಸ್ ಆಗಿದ್ದರೂ ದೊಡ್ಡ ಅನಾಹುತವೇ ಆಗುತ್ತಿತ್ತು. ಕತ್ತಲೆಯಲ್ಲಿ ಅಥವಾ ಮಳೆ ಬಂದಾಗ ಈ ಘಟನೆ ನಡೆದಿದ್ದರೂ ಪ್ರಾಣಕ್ಕೇ ಕುತ್ತು ಬರುತ್ತಿತ್ತು. ಸದ್ಯಕ್ಕೆ ನಿಖಿಲ್ ಅವರು ಅಪಾಯದಿಂದ ಪಾರಾಗಿದ್ದಾರೆ ಅನ್ನೋದೇ ದೊಡ್ಡ ಸಮಾಧಾನದ ವಿಷಯ. 

ಈ ಘಟನೆ ನಡೆದ ಮೇಲೆ ಅಲ್ಲಿನ ಸ್ಥಳೀಯರು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಯಾಕಂದ್ರೆ ಆ ಏರಿಯಾದಲ್ಲಿ ಕೇವಲ ಒಂದು ಚರಂಡಿ ಅಷ್ಟೇ ಅಲ್ಲ, ಎಷ್ಟೋ ಕಡೆ ಗಟಾರದ ಮುಚ್ಚಳಗಳೇ ಇಲ್ಲ ಅಥವಾ ಬಿದ್ದು ಹೋಗಿವೆ. ನ್ಯಾಷನಲ್ ಹೈವೇ ಅಂತಹ ಜಾಗದಲ್ಲೂ ಇಷ್ಟೊಂದು ಬೇಜವಾಬ್ದಾರಿತನ ತೋರಿಸೋದು ಎಷ್ಟು ಸರಿ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ. ಯಾರಾದರೂ ಪ್ರಾಣ ಕಳೆದುಕೊಂಡ ಮೇಲೆ ಅಧಿಕಾರಿಗಳು ಎಚ್ಚೆತ್ತುಕೊಳ್ತಾರಾ? ಅಂತ ಪಾರ್ದಿ ನಿವಾಸಿಗಳು ಆಕ್ರೋಶ ಹೊರಹಾಕ್ತಿದ್ದಾರೆ.

ನಾವು ಸಿಟಿಯಲ್ಲಿ ಅಥವಾ ಹೈವೇ ಪಕ್ಕ ನಡೆಯುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಎಷ್ಟೋ ಸಲ ಗಟಾರದ ಮುಚ್ಚಳಗಳು ಸರಿಯಾಗಿ ಕುಳಿತಿರುವುದಿಲ್ಲ ಅಥವಾ ಒಳಗಿನಿಂದ ಪೊಳ್ಳಾಗಿರುತ್ತವೆ. ಫೋನ್ ನೋಡುತ್ತಾ ಅಥವಾ ಬೇರೆ ಯಾವುದೋ ಗುಂಗಿನಲ್ಲಿ ನಡೆದರೆ ಇಂತಹ ಅಪಾಯಗಳು ಕಟ್ಟಿಟ್ಟ ಬುತ್ತಿ. ಅಧಿಕಾರಿಗಳು ಈ ಸಮಸ್ಯೆಯನ್ನು ಸರಿಪಡಿಸುವವರೆಗೂ ನಾವೇ ನಮ್ಮ ಪ್ರಾಣದ ಬಗ್ಗೆ ಜಾಗ್ರತೆ ವಹಿಸೋದು ಉತ್ತಮ.

ನಿಖಿಲ್ ಅವರ ಈ ವಿಡಿಯೋ ಕೇವಲ ನೋಡೋದಕ್ಕಲ್ಲ, ಅದರಿಂದ ನಾವೆಲ್ಲರೂ ಪಾಠ ಕಲಿಯಬೇಕಿದೆ. ಸರ್ಕಾರಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ನಾವು ಧ್ವನಿ ಎತ್ತಲೇಬೇಕಿದೆ. ಪಾರ್ದಿ ಚಾರ್ ರಸ್ತೆಯಲ್ಲಿರೋ ಈ ಎಲ್ಲಾ ಗಟಾರ ಮುಚ್ಚಳಗಳನ್ನು ಆದಷ್ಟು ಬೇಗ ರಿಪೇರಿ ಮಾಡಲಿ ಅನ್ನೋದೇ ನಮ್ಮೆಲ್ಲರ ಆಶಯ. ನೀವು ದಾರಿಯಲ್ಲಿ ಹೋಗುವಾಗ ಸ್ವಲ್ಪ ಕಣ್ಣು ಬಿಟ್ಟು ನೋಡಿ ಹೆಜ್ಜೆ ಇಡಿ. 


Latest News