Mar 5, 2026 Languages : ಕನ್ನಡ | English

ಟೀಕಿಸುವವರಿಗೆ ಡಿ.ಕೆ. ಸುರೇಶ್ ಖಡಕ್ ಟಾಂಗ್ - ಮಾಗಡಿ ರೈತರ ದಶಕಗಳ ನೀರಿನ ದಾಹಕ್ಕೆ ಸಿಗಲಿದೆ ಮುಕ್ತಿ!!

ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ಮಾಗಡಿಯ ಚಕ್ರಬಾವಿಯಲ್ಲಿ ನಡೆದ ವೈ.ಜಿ. ಗುಡ್ಡ ಏತನೀರಾವರಿ ಯೋಜನೆಯ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಂಡು, ಬೆಂಗಳೂರು ದಕ್ಷಿಣ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ತಮ್ಮ ದೂರದೃಷ್ಟಿಯನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆ ನಂಬರ್ 1 ಆಗೋದು ಫಿಕ್ಸ್
ಬೆಂಗಳೂರು ದಕ್ಷಿಣ ಜಿಲ್ಲೆ ನಂಬರ್ 1 ಆಗೋದು ಫಿಕ್ಸ್

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನಂತೆ ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಇಡೀ ರಾಜ್ಯದಲ್ಲೇ ನಂಬರ್ 1 ಜಿಲ್ಲೆಯನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ನಾವು ಸುಳ್ಳು ಭರವಸೆಗಳನ್ನು ನೀಡಿ ಜನರ ಮುಂದೆ ನಾಟಕ ಮಾಡುವವರಲ್ಲ, ಕೊಟ್ಟ ಮಾತಿನಂತೆ ಕೆಲಸ ಮಾಡಿ ತೋರಿಸುವವರು ಎಂದು ಅವರು ವಿರೋಧಿಗಳಿಗೆ ಟಾಂಗ್ ನೀಡಿದರು.

ಈ ಭಾಗದ ದಶಕಗಳ ಕಾಲದ ನೀರಿನ ಸಮಸ್ಯೆಯನ್ನು ನೀಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಸುರೇಶ್ ಅವರು, ಸುಮಾರು 92 ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆಯ ವಿವರಗಳನ್ನು ನೀಡಿದರು. 115 ಕಿಲೋಮೀಟರ್ ದೂರದ ಕಾವೇರಿ ನದಿಯಿಂದ ನೀರನ್ನು ತಂದು ಚಕ್ರಬಾವಿ ಸೇರಿದಂತೆ ಸುತ್ತಮುತ್ತಲಿನ ಕೆರೆಗಳನ್ನು ತುಂಬಿಸುವ ಈ ಸಾಹಸಮಯ ಯೋಜನೆ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. 

ಪರಿಸರ ಇಲಾಖೆಯ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಸ್ವಲ್ಪ ಕೆಲಸ ಬಾಕಿ ಉಳಿದಿದ್ದು, ಬರುವ ಮೇ ತಿಂಗಳ ವೇಳೆಗೆ ಕಾಮಗಾರಿ ಮುಕ್ತಾಯವಾಗಲಿದೆ. ಈ ಯೋಜನೆಯಿಂದಾಗಿ ವೈ.ಜಿ. ಗುಡ್ಡ ಪ್ರದೇಶದ ಕೆರೆಗಳು ವರ್ಷದ 365 ದಿನವೂ ನೀರಿನಿಂದ ಕಂಗೊಳಿಸಲಿವೆ ಎಂದು ಅವರು ಭರವಸೆ ನೀಡಿದರು.

ಮಾಗಡಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಅವರು, ಮುಂದಿನ 2027-28ರ ವೇಳೆಗೆ ಈ ಭಾಗದ ಚಿತ್ರಣವೇ ಬದಲಾಗಲಿದೆ ಎಂದರು. ಈಗಾಗಲೇ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ಮಿಸಲಾಗುತ್ತಿದ್ದು, ಸುಮಾರು 1,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾವೇರಿ ನೀರನ್ನು ಪಶ್ಚಿಮದಿಂದ ಪೂರ್ವಕ್ಕೆ ಹರಿಸುವ ಮೂಲಕ ಕೆರೆಗಳನ್ನು ತುಂಬಿಸುವ ಯೋಜನೆಯು ಈ ಹಿಂದೆ ಯಾರೂ ಊಹಿಸದಂತಹ ಸಾಧನೆಯಾಗಿದೆ. ತಾವು ಸಂಸದರಾಗಿದ್ದ ಕಾಲದಿಂದಲೂ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಯೋಜನೆಯ ಸಾಧ್ಯತೆಗಳ ಬಗ್ಗೆ ನೀಲನಕ್ಷೆ ತಯಾರಿಸಿದ್ದನ್ನು ಅವರು ನೆನಪಿಸಿಕೊಂಡರು.

ರೈತರ ಹಿತರಕ್ಷಣೆಯ ಬಗ್ಗೆ ಮಾತನಾಡಿದ ಡಿ.ಕೆ. ಸುರೇಶ್, ಬಮೂಲ್ ಅಧ್ಯಕ್ಷನಾಗಿ ರೈತರಿಗೆ ನೆರವಾಗುವುದು ನನ್ನ ಆದ್ಯತೆಯಾಗಿದೆ ಎಂದರು. ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡುವ ಮೂಲಕ ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಶ್ರಮಿಸುವುದಾಗಿ ತಿಳಿಸಿದರು. ತಮ್ಮ ಮೇಲೆ ನಂಬಿಕೆ ಇಟ್ಟಿರುವ ಜನರ ಋಣವನ್ನು ತೀರಿಸಲು ತಾವು ಸದಾ ಸಿದ್ಧರಿರುವುದಾಗಿ ಭಾವುಕರಾಗಿ ನುಡಿದರು.

ಜನರ ಆಶೀರ್ವಾದ ಸದಾ ತಮ್ಮ ಮೇಲಿರಲಿ ಎಂದು ಆಶಿಸಿದ ಅವರು, ಈ ನೀರಾವರಿ ಯೋಜನೆಯನ್ನು ಮುಂದಿನ ಎರಡು ವರ್ಷಗಳೊಳಗೆ ಸಂಪೂರ್ಣವಾಗಿ ಮುಗಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

Latest News