ಕೋವಿಡ್ ಬಂದಾಗ ಪ್ರಧಾನಿ ನರೇಂದ್ರ ಮೋದಿಯವರು ಪದೇ ಪದೇ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಪರಿಸ್ಥಿತಿ ಫುಲ್ ಕಂಟ್ರೋಲ್ಗೆ ತರುತ್ತಿದ್ದರು. ಈಗ ಮತ್ತೆ ಅಂತಹದ್ದೇ ಸನ್ನಿವೇಶ ಎದುರಾಗಿದೆ. ಆದರೆ ಈ ಬಾರಿ ವೈರಸ್ ಶತ್ರುವಲ್ಲ, ಬದಲಿಗೆ ಸಮುದ್ರದಾಚೆ ನಡೆಯುತ್ತಿರುವ ಮಧ್ಯಪ್ರಾಚ್ಯ ಯುದ್ಧ!
ಹೌದು, ಇರಾನ್ ಮತ್ತು ಅಮೆರಿಕ ನಡುವಿನ ಕಿರಿಕ್ ಈಗ ಭಾರತದ ಅಡುಗೆ ಮನೆಯವರೆಗೂ ಬಿಸಿ ಮುಟ್ಟಿಸಿದೆ. ಈ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಧಾನಿ ಮೋದಿ ಇಂದು (ಶುಕ್ರವಾರ) ಸಂಜೆ 6.30ಕ್ಕೆ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಹೈ-ವೋಲ್ಟೇಜ್ ಮೀಟಿಂಗ್ ಫಿಕ್ಸ್ ಮಾಡಿದ್ದಾರೆ.
ಅಲ್ಲಿ ಯುದ್ಧ ನಡೆದರೆ ನಮಗೇನು ಅಂದುಕೊಳ್ಳಬೇಡಿ, ಅಲ್ಲಿಂದ ಬರುವ ಸರಕುಗಳ ಸಾಗಣೆ ನಿಂತರೆ ನಮ್ಮ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳುತ್ತೆ. ಅದಕ್ಕಾಗಿಯೇ ಮೋದಿ ಈ ಪ್ಲ್ಯಾನ್ ಮಾಡಿದ್ದಾರೆ:
ಗ್ಯಾಸ್ ಸಿಲಿಂಡರ್ ಕಥೆ ಏನು?: ನಮ್ಮ ದೇಶಕ್ಕೆ ಎಲ್ಪಿಜಿ (LPG) ಹೆಚ್ಚಾಗಿ ಬರುವುದು ಆ ಗಡಿಯಿಂದಲೇ. ಯುದ್ಧದಿಂದ ಗ್ಯಾಸ್ ಅಭಾವ ಉಂಟಾದರೆ ಜನಸಾಮಾನ್ಯರಿಗೆ ತೊಂದರೆಯಾಗದಂತೆ ರಾಜ್ಯಗಳು ಏನು ತಯಾರಿ ಮಾಡಿಕೊಂಡಿವೆ? ಎಂಬುದೇ ಇಂದಿನ ಸಭೆಯ ಹಾಟ್ ಟಾಪಿಕ್.
ಸರಕು ಸಾಗಣೆ ಮತ್ತು ಪೂರೈಕೆ: ಯುದ್ಧದ ಹಡಗುಗಳ ಕಾಟದಿಂದಾಗಿ ಇಂಧನ ಭದ್ರತೆ ಮತ್ತು ಬೇರೆ ಬೇರೆ ದೇಶಗಳಿಂದ ಬರುವ ಸರಕುಗಳ ಸರಪಳಿ ಕಟ್ ಆಗದಂತೆ ನೋಡಿಕೊಳ್ಳುವ ಬಗ್ಗೆ ಚರ್ಚೆ ನಡೆಯಲಿದೆ.
ನಮ್ಮವರ ರಕ್ಷಣೆ: ಯುದ್ಧ ನಡೆಯುತ್ತಿರುವ ದೇಶಗಳಲ್ಲಿ ಸಾಕಷ್ಟು ಭಾರತೀಯರಿದ್ದಾರೆ. ಅವರನ್ನು ಸೇಫ್ ಆಗಿ ವಾಪಸ್ ತರುವ ಬಗ್ಗೆ ಮತ್ತು ಅವರ ಸುರಕ್ಷತೆಯ ಬಗ್ಗೆ ಕೇಂದ್ರ-ರಾಜ್ಯಗಳು ಕೈಜೋಡಿಸಲಿವೆ.
ಟೀಮ್ ಇಂಡಿಯಾ ಮಂತ್ರ: ಸಂಕಷ್ಟದ ಸಮಯದಲ್ಲಿ ರಾಜಕೀಯ ಬಿಟ್ಟು ಎಲ್ಲರೂ 'ಒಂದೇ ತಂಡ'ವಾಗಿ ಕೆಲಸ ಮಾಡಬೇಕು ಎಂಬ ಒಗ್ಗಟ್ಟಿನ ಮಂತ್ರವನ್ನು ಮೋದಿ ಈ ಸಭೆಯಲ್ಲಿ ಪಠಿಸಲಿದ್ದಾರೆ.
ಚುನಾವಣಾ ರಾಜ್ಯಗಳಿಗೆ ಬೇರೆಯದೇ ರೂಲ್ಸ್!
ಒಂದು ಕಡೆ ಮೀಟಿಂಗ್ ಜೋರಾಗಿದ್ದರೆ, ಮತ್ತೊಂದೆಡೆ ಚುನಾವಣೆ ನಡೆಯುತ್ತಿರುವ ರಾಜ್ಯಗಳ ಸಿಎಂಗಳು ಈ ಸಭೆಯಿಂದ ದೂರ ಉಳಿಯಲಿದ್ದಾರೆ. ಯಾಕೆಂದರೆ ಅಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ, ಆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ಸಚಿವಾಲಯದ ಅಧಿಕಾರಿಗಳು ಪ್ರತ್ಯೇಕವಾಗಿ ಮಾತನಾಡಲಿದ್ದಾರೆ.
ಮೋದಿಯವರು ಇತ್ತೀಚೆಗೆ ಒಂದು ಮಾತು ಹೇಳಿದ್ದರು— "ಕೋವಿಡ್ ಕಾಲದಂತೆ ಈಗಲೂ ದೇಶ ಸನ್ನದ್ಧವಾಗಿರುವುದು ಅನಿವಾರ್ಯ". ಅಂದರೆ, ಅಂತರಾಷ್ಟ್ರೀಯ ಮಟ್ಟದ ಜಗಳ ನಮ್ಮ ದೇಶದ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಬಾರದು ಎಂಬುದು ಅವರ ಉದ್ದೇಶ.
ಯುದ್ಧದ ಕಾರ್ಮೋಡಗಳ ನಡುವೆ ಭಾರತ ತನ್ನನ್ನು ತಾನು ಸುರಕ್ಷಿತವಾಗಿರಿಸಿಕೊಳ್ಳಲು ಫುಲ್ ಅಲರ್ಟ್ ಆಗಿದೆ. ಇವತ್ತಿನ ಸಭೆಯಲ್ಲಿ ರಾಜ್ಯಗಳಿಗೆ ಕೇಂದ್ರ ಯಾವ ರೀತಿ ಗೈಡ್ಲೈನ್ಸ್ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.