Apr 11, 2026 Languages : ಕನ್ನಡ | English

ಪ್ರೀತಿ ಅಮರ ಅಂದ್ರೆ ಇದೇನಾ? ಮದುವೆ ಹಿಂದಿನ ದಿನವೇ ವಧು ಆತ್ಮಹ*ತ್ಯೆ - ಮದುವೆ ವಿಡಿಯೋ ವೈರಲ್!!

ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ, ಕಣ್ಣೀರು ಹಾಕಿಸುವಂತಹ ಒಂದು ವಿಚಿತ್ರ ಘಟನೆ ನಡೆದಿದೆ. ಸಾವಿನಲ್ಲೂ ನಾವು ಒಂದಾಗೋಣ ಅನ್ನೋ ಮಾತು ಸಿನಿಮಾಗಳಲ್ಲಿ ಕೇಳಿರ್ತೀವಿ, ಆದರೆ ಇಲ್ಲಿ ಒಬ್ಬ ಯುವಕ ತನ್ನ ಭಾವಿ ಪತ್ನಿಯ ಮೃತದೇಹದ ಜೊತೆಗೇ ಮದುವೆಯಾಗುವ ಮೂಲಕ ಎಲ್ಲರನ್ನೂ ದಂಗಾಗಿಸಿದ್ದಾನೆ. ಪ್ರೀತಿ ಅನ್ನೋದು ಎಂತಹ ಕೆಲಸ ಮಾಡಿಸುತ್ತೆ ಅನ್ನೋದಕ್ಕೆ ಈ ಘಟನೆ ಒಂದು ಸಾಕ್ಷಿ. ಇದರ ಪೂರ್ತಿ ಡಿಟೇಲ್ಸ್ ಇಲ್ಲಿದೆ ನೋಡಿ.

ಮೃತ ವಧುವಿನ ಜೊತೆ ಮದುವೆಯಾದ ವರ; | Photo Credit: https://x.com/MalluChique
ಮೃತ ವಧುವಿನ ಜೊತೆ ಮದುವೆಯಾದ ವರ; | Photo Credit: https://x.com/MalluChique

ಉತ್ತರ ಪ್ರದೇಶದ ಪ್ರಿಯಾಂಕಾ ಮತ್ತು ಸನ್ನಿ ಮಧೇಸಿಯಾ ಎಂಬುವವರಿಗೆ ಮದುವೆ ಫಿಕ್ಸ್ ಆಗಿತ್ತು. ಇನ್ನೇನು ಮರುದಿನ ಮದುವೆ ಅನ್ನೋವಾಗ ಮನೆಯಲ್ಲಿ ಎಲ್ಲೆಡೆ ಸಂಭ್ರಮ, ಸಡಗರ ಇತ್ತು. ಬಂಧು ಬಳಗದವರೆಲ್ಲಾ ಬಂದು ಹೊಸ ಜೋಡಿಯನ್ನು ಹಾರೈಸಲು ರೆಡಿಯಾಗಿದ್ದರು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಮದುವೆಯ ಹಿಂದಿನ ದಿನವೇ ವಧು ಪ್ರಿಯಾಂಕಾ ಅನಿರೀಕ್ಷಿತವಾಗಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾಳೆ.

ಮದುವೆ ಮಂಟಪಕ್ಕೆ ಹೋಗಬೇಕಿದ್ದ ಹುಡುಗಿ ಹೆ*ಣವಾಗಿ ಮಲಗಿದ್ದನ್ನು ನೋಡಿ ಎರಡು ಕುಟುಂಬದವರು ಅಕ್ಷರಶಃ ಕುಸಿದು ಹೋಗಿದ್ದಾರೆ. ಖುಷಿಯಿಂದ ಇರಬೇಕಿದ್ದ ಮನೆಯಲ್ಲಿ ಅಳು, ಗೋಳಾಟ ಮುಗಿಲು ಮುಟ್ಟಿತ್ತು.

ತಾನು ಪ್ರೀತಿಸಿದ ಹುಡುಗಿ ಇನ್ನಿಲ್ಲ ಅನ್ನೋ ಕಹಿ ಸತ್ಯವನ್ನು ಸನ್ನಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆತ ಆ ಸಮಯದಲ್ಲಿ ತಗೊಂಡ ನಿರ್ಧಾರ ಮಾತ್ರ ಎಲ್ಲರಿಗೂ ಶಾಕ್ ನೀಡಿದೆ. ಆಕೆ ಬದುಕಿಲ್ಲದಿದ್ದರೂ ಪರವಾಗಿಲ್ಲ, ಆಕೆಯೇ ನನ್ನ ಹೆಂಡತಿ ಎಂದು ಹಠ ಹಿಡಿದ ಸನ್ನಿ, ಪ್ರಿಯಾಂಕಾಳ ಮೃತದೇಹದ ಜೊತೆಗೇ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾನೆ.

ಮೃತಪಟ್ಟಿದ್ದ ಪ್ರಿಯಾಂಕಾಳನ್ನು ವಧುವಿನಂತೆ ಸಿಂಗರಿಸಿ, ಆಕೆಯ ಜೊತೆಗೇ ಸಪ್ತಪದಿ ತುಳಿದು, ಅಗ್ನಿ ಸಾಕ್ಷಿಯಾಗಿ ಮದುವೆ ವಿಧಿವಿಧಾನಗಳನ್ನು ಪೂರೈಸಿದ್ದಾನೆ. ಸತ್ತ ಮೇಲೆ ಹೆಂಡತಿಯ ಸ್ಥಾನ ನೀಡಿರುವ ಈತನ ಹುಚ್ಚು ಪ್ರೀತಿಯನ್ನು ಕಂಡು ಅಲ್ಲಿದ್ದವರು ಮೂಕವಿಸ್ಮಿತರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ವೈರಲ್ ಆಗಿದ್ದು, ಜನ 'ಇದು ಪ್ರೀತಿಯೋ ಅಥವಾ ಮೂಢನಂಬಿಕೆಯೋ? ಎಂದು ಚರ್ಚೆ ನಡೆಸುತ್ತಿದ್ದಾರೆ.

ಮದುವೆ ಶಾಸ್ತ್ರಗಳೆಲ್ಲಾ ಮುಗಿದ ನಂತರ, ತನ್ನ ಪತ್ನಿಯನ್ನು ಸನ್ನಿ ಗಂಗಾ ನದಿಯ ತೀರಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಶಾಸ್ತ್ರೋಕ್ತವಾಗಿ ಪ್ರಿಯಾಂಕಾಳ ಅಂತ್ಯಕ್ರಿಯೆ ನಡೆಸಲಾಯಿತು. ಮದುವೆಯಾದ ಕೆಲವೇ ಗಂಟೆಗಳಲ್ಲಿ ತನ್ನ ಹೆಂಡತಿಯನ್ನು ಚಿತೆಗೆ ಒಪ್ಪಿಸಬೇಕಾದ ದೌರ್ಭಾಗ್ಯ ಆ ಯುವಕನಿಗೆ ಬಂದಿತ್ತು. ಗಂಗೆಯ ಮಡಿಲಲ್ಲಿ ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ ಆಕೆಯನ್ನು ಕಳುಹಿಸಿಕೊಟ್ಟಿದ್ದಾನೆ.

ಮದುವೆಗೆ ಎಲ್ಲವೂ ಸಿದ್ಧವಾಗಿದ್ದರೂ ಪ್ರಿಯಾಂಕಾ ಯಾಕೆ ಇಂತಹ ನಿರ್ಧಾರ ತಗೊಂಡಳು ಅನ್ನೋದು ಸದ್ಯಕ್ಕೆ ನಿಗೂಢವಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದರೆ, ಸನ್ನಿ ಮಾಡಿದ ಈ ಕೆಲಸ ಮಾತ್ರ ಇಡೀ ಉತ್ತರ ಪ್ರದೇಶದಲ್ಲಿ ಸಖತ್ ಚರ್ಚೆಗೆ ಗ್ರೇಟ್ ಆಗಿದೆ. ಕೆಲವರು ಆತನ ಪ್ರೀತಿಯನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಸಾವಿನ ನಂತರ ಇಂತಹ ಸಂಪ್ರದಾಯಗಳು ಬೇಕಿತ್ತಾ? ಎಂದು ಪ್ರಶ್ನಿಸುತ್ತಿದ್ದಾರೆ.

ಏನೇ ಇರಲಿ, ಒಂದು ಜೀವ ಈ ರೀತಿ ಅಂತ್ಯವಾಗಿದ್ದು ಮತ್ತು ಅದರ ನಂತರ ನಡೆದ ಈ ವಿಲಕ್ಷಣ ಮದುವೆ ಮನುಷ್ಯನ ಮನಸ್ಸಿನ ಆಳವನ್ನು ತೋರಿಸುತ್ತದೆ. ಪ್ರೀತಿ ಅಂಧವೋ ಅಥವಾ ಅಮರವೋ ಗೊತ್ತಿಲ್ಲ, ಆದರೆ ಈ ಘಟನೆ ಮಾತ್ರ ಜನರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯೋದಂತೂ ಗ್ಯಾರಂಟಿ.

Latest News