Apr 27, 2026 Languages : ಕನ್ನಡ | English

ಸೂರತ್‌ನಲ್ಲಿ ‘ದೃಶ್ಯಂ’ ಮಾದರಿ ಹ*ತ್ಯೆ - ಹೆಂಡತಿ ದೇಹದ ಮೇಲೆ ಸಿಮೆಂಟ್ ಸುರಿದಿದ್ದ ಪತಿ!!

ಕ್ರೈಂ ಸಿನಿಮಾಗಳಲ್ಲಿ ನಾವು ಅದೆಷ್ಟೋ ವಿಚಿತ್ರ ಹತ್ಯೆಗಳನ್ನು ನೋಡಿರುತ್ತೇವೆ. ಆದರೆ ಗುಜರಾತ್‌ನ ಸೂರತ್‌ನಲ್ಲಿ ನಡೆದ ಈ ಘಟನೆ ನೋಡಿದರೆ 'ನಿಜ ಜೀವನ ಸಿನಿಮಾಗಿಂತಲೂ ಭಯಾನಕ' ಎಂಬುದು ಸಾಬೀತಾಗುತ್ತದೆ. ತನ್ನ ಹೆಂಡತಿಯನ್ನೇ ಕೊಂ*ದು, ಶವದ ಮೇಲೆ ಸಿಮೆಂಟ್ ಸುರಿದು, ಏನೂ ಅರಿಯದವನಂತೆ ನಾಪತ್ತೆ ದೂರು ನೀಡಿದ್ದ ಪತಿಯೊಬ್ಬ ಈಗ ಸಿಕ್ಕಿಬಿದ್ದಿದ್ದಾನೆ.

ಮಗನಿಗೆ ಸಿಕ್ಕ ಚೀಟಿಯಿಂದ ಬಯಲಾಯ್ತು ತಂದೆಯ ಅಸಲಿ ಮುಖ | Photo Credit: https://x.com/RTVnewsnetwork
ಮಗನಿಗೆ ಸಿಕ್ಕ ಚೀಟಿಯಿಂದ ಬಯಲಾಯ್ತು ತಂದೆಯ ಅಸಲಿ ಮುಖ | Photo Credit: https://x.com/RTVnewsnetwork

ಫಿಲ್ಮಿ ಸ್ಟೈಲ್‌ನಲ್ಲಿ ಕಥೆ ಶುರು
ಆಹಾರ ತಜ್ಞೆಯಾಗಿ ಕೆಲಸ ಮಾಡುತ್ತಿದ್ದ ಶಿಲ್ಪಾ ಸಾಲ್ವಿ (39) ಎಂಬಾಕೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಶಿಲ್ಪಾ ಅವರ ಪತಿ ವಿಶಾಲ್ ಸಾಲ್ವಿ (40) ಪೊಲೀಸರ ಬಳಿ ಹೋಗಿ, "ನನ್ನ ಹೆಂಡತಿ ಮನೆಗೆ ಬಂದಿಲ್ಲ, ಎಲ್ಲಿ ಹೋಗಿದ್ದಾಳೆ ಅಂತ ಗೊತ್ತಿಲ್ಲ" ಎಂದು ಮುಗ್ಧನಂತೆ ನಾಪತ್ತೆ ದೂರು ನೀಡಿದ್ದ. ಪೊಲೀಸರು ಕೂಡ ಇದನ್ನೊಂದು ಸಾಧಾರಣ ನಾಪತ್ತೆ ಕೇಸ್ ಎಂದು ಭಾವಿಸಿ ಹುಡುಕಾಟ ಶುರು ಮಾಡಿದ್ದರು.

ಮಗನಿಗೆ ಸಿಕ್ಕ ಆ ಒಂದು ಚೀಟಿ

ಯಾರೂ ಊಹಿಸದ ತಿರುವು ಸಿಕ್ಕಿದ್ದು ಇಲ್ಲಿಯೇ. ವಿಶಾಲ್ ಮತ್ತು ಶಿಲ್ಪಾ ದಂಪತಿಯ ಮಗನಿಗೆ ಮನೆಯಲ್ಲಿ ತನ್ನ ತಂದೆ ಬರೆದಿದ್ದ ಒಂದು ಕೈಬರಹದ ಚೀಟಿ (Note) ಸಿಕ್ಕಿತು. ಅದರಲ್ಲಿ ವಿಶಾಲ್, "ನಾನು ದೊಡ್ಡ ತಪ್ಪು ಮಾಡಿದ್ದೇನೆ, ಶಿಲ್ಪಾ ಇನ್ನು ಬದುಕಿಲ್ಲ" ಎಂದು ಬರೆದುಕೊಂಡಿದ್ದ. ಗಾಬರಿಯಾದ ಮಗ ತಕ್ಷಣ ಆ ಪತ್ರವನ್ನು ಪೊಲೀಸರಿಗೆ ನೀಡಿದ. ಅಲ್ಲಿಂದ ತನಿಖೆಯ ದಿಕ್ಕೇ ಬದಲಾಯಿತು.

ಪಾಳುಬಿದ್ದ ಮನೆಯಲ್ಲಿ ಭೀಕರ ದೃಶ್ಯ

ಪೊಲೀಸರು ವಿಶಾಲ್‌ನ ಹಳೆಯ ಪಾಳುಬಿದ್ದ ಮನೆಯ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ಹೋದರು. ಮನೆಯ ಬೀಗ ಮುರಿದು ಒಳಗೆ ಕಾಲಿಡುತ್ತಿದ್ದಂತೆ ಕೊಳೆತ ವಾಸನೆ ಮೂಗಿಗೆ ಬಡಿಯಿತು. ಮನೆಯ ಮೂಲೆಯಲ್ಲಿದ್ದ ಒಂದು ಮರದ ಪೆಟ್ಟಿಗೆಯನ್ನು ತೆರೆದು ನೋಡಿದ ಪೊಲೀಸರೇ ಬೆಚ್ಚಿಬಿದ್ದರು!

ಶಿಲ್ಪಾ ಅವರ ಶವವನ್ನು ಆ ಪೆಟ್ಟಿಗೆಯಲ್ಲಿ ಇಡಲಾಗಿತ್ತು. ಅಷ್ಟೇ ಅಲ್ಲ, ಶವ ವಾಸನೆ ಬರಬಾರದು ಮತ್ತು ಯಾರಿಗೂ ಸಿಗಬಾರದು ಎಂಬ ಕಾರಣಕ್ಕೆ ಅದರ ಮೇಲೆ ಕಚ್ಚಾ ಸಿಮೆಂಟ್ ಸುರಿಯಲಾಗಿತ್ತು. ಎಂತಹ ಕ್ರೂರಿ ಮನುಷ್ಯನಿರಬೇಕು ಇವನು ಎಂದು ನೆರೆಹೊರೆಯವರು ಈಗ ಶಪಿಸುತ್ತಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ದಂಪತಿಗಳ ನಡುವೆ ಹಲವು ದಿನಗಳಿಂದ ಕಿತ್ತಾಟ ನಡೆಯುತ್ತಿತ್ತು. "ಶಿಲ್ಪಾಳಿಗೆ ಬೇರೊಬ್ಬನ ಜೊತೆ ಸಂಬಂಧವಿದೆ" ಎಂದು ವಿಶಾಲ್ ಅನುಮಾನಿಸುತ್ತಿದ್ದ. ಇದೇ ಸಂಶಯದ ಬೆಂಕಿ ಕೊ*ಲೆಯಲ್ಲಿ ಅಂತ್ಯವಾಗಿದೆ. ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ನಾಟಕವಾಡಿ, ಈ ಹತ್ಯೆಯನ್ನು ಮುಚ್ಚಿಹಾಕಲು ಅವನು ಸಿನೆಮಾ ಮಾದರಿಯಲ್ಲಿ ಪ್ಲಾನ್ ಮಾಡಿದ್ದ.

ಬಲೆ ಬೀಸಿದ ಪೊಲೀಸರು

ಸದ್ಯ ವಿಶಾಲ್ ಸಾಲ್ವಿ ತಲೆಮರೆಸಿಕೊಂಡಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆತನ ಬೆನ್ನುಬಿದ್ದಿದ್ದಾರೆ. ತನ್ನ ಮಕ್ಕಳ ತಾಯಿಯನ್ನು ಅಷ್ಟು ಕ್ರೂರವಾಗಿ ಕೊಂದ ಆರೋಪಿಗೆ ಸರಿಯಾದ ಶಿಕ್ಷೆಯಾಗಲೇಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.