ಕರ್ನಾಟಕ ಸರ್ಕಾರವು ಪಶ್ಚಿಮ ಘಟ್ಟದಲ್ಲಿ ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ ಕೈಗೊಳ್ಳಲು ಮುಂದಾಗಿರುವುದರಿಂದ ಪರಿಸರ ಪ್ರೇಮಿಗಳು ಮತ್ತು ಧಾರ್ಮಿಕ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಯೋಜನೆಗೆ ಬೆಂಬಲವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆ, ಬಂಗಾರಮಕ್ಕಿ ಮಹಾಸಂಸ್ಥಾನದ ಮಾರುತಿ ಗುರೂಜಿಯ ಕಿಡಿ ಪ್ರತಿಕ್ರಿಯೆಗೆ ಕಾರಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಬಂಗಾರಮಕ್ಕಿ ಮಹಾಸಂಸ್ಥಾನದಿಂದ ಮಾತನಾಡಿದ ಮಾರುತಿ ಗುರೂಜಿ, “ರಾಜ್ಯದ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವವರು ಹಗುರವಾಗಿ ಇಂತಹ ಮಹತ್ವದ ವಿಷಯಗಳ ಬಗ್ಗೆ ಮಾತನಾಡುವುದು ಸರಿಯಲ್ಲ” ಎಂದು ತೀವ್ರವಾಗಿ ಟೀಕಿಸಿದರು. ಪಶ್ಚಿಮ ಘಟ್ಟದ ಮಹತ್ವವನ್ನು ಅರಿಯದೇ, ಕೇವಲ ವಿದೇಶಗಳಲ್ಲಿ ಕಂಡ ಅನುಭವದ ಆಧಾರದ ಮೇಲೆ ಯೋಜನೆಗೆ ಬೆಂಬಲ ನೀಡಿರುವುದು ಅಸಮಂಜಸ ಎಂದು ಅವರು ಅಭಿಪ್ರಾಯಪಟ್ಟರು.
ಡಿ.ಕೆ. ಶಿವಕುಮಾರ್ ಜರ್ಮನಿಯಲ್ಲಿ ಪಂಪ್ಡ್ ಸ್ಟೋರೆಜ್ ಯೋಜನೆಗಳನ್ನು ನೋಡಿದ್ದೇನೆ ಎಂದು ಹೇಳಿದ್ದರೂ, ಪಶ್ಚಿಮ ಘಟ್ಟದ ಬಗ್ಗೆ ಅನೇಕ ವರದಿಗಳು, ಅಧ್ಯಯನಗಳು ಮತ್ತು ಎಚ್ಚರಿಕೆಗಳು ಇವೆ. “ಅವುಗಳನ್ನು ಓದಿಕೊಂಡರೆ, ಅವರೇ ಈ ಯೋಜನೆ ಕೈ ಬಿಡುತ್ತಾರೆ” ಎಂದು ಮಾರುತಿ ಗುರೂಜಿ ಹೇಳಿದರು. ವಿದೇಶಗಳಲ್ಲಿ ಅನೇಕ ಡ್ಯಾಂಗಳನ್ನು ನಿರ್ಮಿಸಿ ನಂತರ ಅವು ಒಡೆದುಹೋಗಿರುವುದನ್ನು, ಪ್ರಕೃತಿಯನ್ನು ಉಳಿಸಿಕೊಳ್ಳಲು ಹೊರದೇಶದವರು ನಡೆಸುತ್ತಿರುವ ಹೋರಾಟವನ್ನು ಅವರು ಉದಾಹರಿಸಿದರು.
ಯೋಜನೆಗೆ 20 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದೇವೆ, ವಿದ್ಯುತ್ ಉಚಿತವಾಗಿ ಕೊಡುತ್ತಿದ್ದೇವೆ ಎಂದು ಡಿಸಿಎಂ ಹೇಳಿದ್ದನ್ನು ಗುರೂಜಿ ಪ್ರಶ್ನಿಸಿದರು. “ವಿದ್ಯುತ್ ಫ್ರೀ ಯಾರಿಗಾಗಿ ಕೊಟ್ಟಿದ್ದೀರಿ? ನಿಮ್ಮ ಅಧಿಕಾರದ ತೆವಳಿಗಾಗಿ ಕೊಟ್ಟಿದ್ದೀರಿ. ಫ್ರೀ ಕೊಡುವುದರಿಂದ ವಿಯೇಟ್ನಾಂ ದೇಶ ಏನಾಗಿದೆ ಎಂದು ತಿಳಿಯಿರಿ” ಎಂದು ಅವರು ಕಿಡಿ ಹೊತ್ತಿಸಿದರು.
ಹೋರಾಟ ಮಾಡುವವರು ಮಾಡಿಕೊಳ್ಳಲಿ ಎಂದು ಡಿಸಿಎಂ ಹೇಳಿರುವುದನ್ನು ಗುರೂಜಿ ತೀವ್ರವಾಗಿ ವಿರೋಧಿಸಿದರು. “ಅವರ ಸ್ಥಾನದಲ್ಲಿದ್ದವರು ಹಗುರವಾಗಿ ಮಾತನಾಡುವುದರಿಂದ ಅವತ ಸ್ಥಾನಕ್ಕೆ ಗೌರವ ಕಳೆದುಕೊಳ್ಳುತ್ತಿದ್ದಾರೆ” ಎಂದು ಅವರು ಅಭಿಪ್ರಾಯಪಟ್ಟರು. ಮಾರುತಿ ಗುರೂಜಿ ಕೊನೆಗೆ ಸ್ಪಷ್ಟವಾಗಿ ಹೇಳಿದರು: “ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು. ಪಶ್ಚಿಮ ಘಟ್ಟವು ನಮ್ಮ ಪ್ರಕೃತಿಯ ಹೃದಯ. ಅದನ್ನು ಹಾಳು ಮಾಡುವಂತಹ ಯೋಜನೆಗೆ ನಾವು ಒಪ್ಪುವುದಿಲ್ಲ.”
ಈ ಘಟನೆ ಕೇವಲ ಒಂದು ರಾಜಕೀಯ ಹೇಳಿಕೆಯ ಪ್ರತಿಕ್ರಿಯೆಯಲ್ಲ, ಅದು ಪ್ರಕೃತಿ ಸಂರಕ್ಷಣೆ, ಪರಿಸರದ ಮಹತ್ವ ಮತ್ತು ಜನರ ಭಾವನೆಗಳ ಪ್ರತಿಬಿಂಬವಾಗಿದೆ. ಪಶ್ಚಿಮ ಘಟ್ಟದಂತಹ ಜೀವ ವೈವಿಧ್ಯತೆಯ ತಾಣದಲ್ಲಿ ದೊಡ್ಡ ಮಟ್ಟದ ಯೋಜನೆಗಳನ್ನು ಕೈಗೊಳ್ಳುವಾಗ, ಪರಿಸರದ ಹಿತಾಸಕ್ತಿಯನ್ನು ಮೊದಲಿಗಾಗಿಸಬೇಕೆಂಬ ಸಂದೇಶವನ್ನು ಮಾರುತಿ ಗುರೂಜಿ ತಮ್ಮ ಮಾತುಗಳ ಮೂಲಕ ಸಾರಿದ್ದಾರೆ.