Feb 16, 2026 Languages : ಕನ್ನಡ | English

ಗುಲಾಮಗಿರಿಯ ಸಂಕೇತಕ್ಕೆ ವಿದಾಯ - 95ನೇ ವರ್ಷದ ಸಂಭ್ರಮದಲ್ಲಿ ನವದೆಹಲಿಗೆ ಹೊಸ ಆಡಳಿತ ಕೇಂದ್ರ.

ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟಿಷರ ಕಾಲದ ಸೌತ್ ಬ್ಲಾಕ್ ಕಟ್ಟಡದಿಂದ ತಮ್ಮ ಅಧಿಕೃತ ಕಚೇರಿಯನ್ನು ರಾಷ್ಟ್ರಪತಿ ಭವನ ಸಮೀಪದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ “ಸೇವಾ ತೀರ್ಥ”ವನ್ನು ಅಧಿಕೃತವಾಗಿ ಉದ್ಘಾಟಿಸಿದರು. 1931ರಲ್ಲಿ ಇದೇ ದಿನ ನವದೆಹಲಿಯನ್ನು ಭಾರತದ ಆಧುನಿಕ ರಾಜಧಾನಿ ಎಂದು ಘೋಷಿಸಲಾಗಿತ್ತು. ಅದರ 95ನೇ ವರ್ಷಾಚರಣೆ ಸಂದರ್ಭದಲ್ಲಿ ಈ ಸ್ಥಳಾಂತರ ನಡೆದಿರುವುದು ವಿಶೇಷವಾಗಿದೆ.

ಮೊದಲ ದಿನವೇ ನಾಲ್ಕು ಪ್ರಮುಖ ಯೋಜನೆಗಳಿಗೆ ಮೋದಿ ಸಹಿ.
ಮೊದಲ ದಿನವೇ ನಾಲ್ಕು ಪ್ರಮುಖ ಯೋಜನೆಗಳಿಗೆ ಮೋದಿ ಸಹಿ.

ಸೇವಾ ತೀರ್ಥ ಕಟ್ಟಡ ಸಂಕೀರ್ಣದಲ್ಲಿ ಪ್ರಧಾನಿ ಕಚೇರಿ (PMO), ರಾಷ್ಟ್ರೀಯ ಭದ್ರತಾ ಸಮಿತಿ ಕಾರ್ಯಾಲಯ ಮತ್ತು ಕ್ಯಾಬಿನೆಟ್ ಕಾರ್ಯಾಲಯವನ್ನು ಒಂದೇ ಸ್ಥಳದಲ್ಲಿ ಸ್ಥಾಪಿಸಲಾಗಿದೆ. ಈ ಹಿಂದೆ ಇವು ಬೇರೆ ಬೇರೆ ಕಡೆ ಕಾರ್ಯನಿರ್ವಹಿಸುತ್ತಿದ್ದರಿಂದ ಉನ್ನತ ಮಟ್ಟದ ಸಂವಹನದಲ್ಲಿ ತೊಂದರೆ ಉಂಟಾಗುತ್ತಿತ್ತು. ಈಗ ಎಲ್ಲವೂ ಒಂದೇ ಸಂಕೀರ್ಣದಲ್ಲಿ ಇರುವುದರಿಂದ ಆಡಳಿತ ಕಾರ್ಯಕ್ಷಮತೆ ಹೆಚ್ಚಲಿದೆ ಎಂದು ಸರ್ಕಾರ ತಿಳಿಸಿದೆ.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್, ಜಿತೇಂದ್ರ ಸಿಂಗ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಉಪಸ್ಥಿತರಿದ್ದರು. ಹೊಸ ಕಚೇರಿಗೆ ಕಾಲಿಟ್ಟ ಪ್ರಧಾನಿ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ, ನಾಲ್ಕು ಪ್ರಮುಖ ನಿರ್ಧಾರಗಳಿಗೆ ಸಹಿ ಹಾಕಿದರು.

ಮೊದಲ ನಿರ್ಧಾರವಾಗಿ ಅಪಘಾತದಲ್ಲಿ ಸಂತ್ರಸ್ತರಾದವರಿಗೆ 1.5 ಲಕ್ಷ ರೂಪಾಯಿವರೆಗೆ ನಗದು ರಹಿತ ಚಿಕಿತ್ಸೆ ಸಿಗುವ ಯೋಜನೆಗೆ ಅನುಮೋದನೆ ನೀಡಲಾಯಿತು. ತುರ್ತು ಚಿಕಿತ್ಸೆ ಸಿಗದೆ ಸಾವನ್ನಪ್ಪುವ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಜಾರಿಯಾಗಿದೆ.

“ಲಕ್‌ಪತಿ ದೀದಿ” ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪುಗಳನ್ನು ಆರ್ಥಿಕವಾಗಿ ಬಲಪಡಿಸುವ ಗುರಿ ಹೊಂದಲಾಗಿದೆ. ಈಗಾಗಲೇ 3 ಕೋಟಿ ಲಕ್‌ಪತಿ ದೀದಿಗಳು ರೂಪುಗೊಂಡಿದ್ದು, 2029ರ ಮಾರ್ಚ್ ವೇಳೆಗೆ ಈ ಸಂಖ್ಯೆಯನ್ನು 6 ಕೋಟಿಗೆ ಏರಿಸುವ ಮಹತ್ವಾಕಾಂಕ್ಷೆಯ ಗುರಿ ನಿಗದಿಪಡಿಸಲಾಗಿದೆ.

ರೈತರ ಬೆಂಬಲಕ್ಕಾಗಿ ಕೃಷಿ ಮೂಲಸೌಕರ್ಯ ನಿಧಿಯನ್ನು 2 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಇದರಿಂದ ಕೃಷಿ ಮೌಲ್ಯ ಸರಪಳಿಯನ್ನು ಬಲಪಡಿಸಿ, ಸಂಗ್ರಹಣೆ ಮತ್ತು ಸಂಸ್ಕರಣೆ ಸೌಲಭ್ಯಗಳನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಜೊತೆಗೆ, ನವೀನ ತಂತ್ರಜ್ಞಾನ ಮತ್ತು ಡೀಪ್ ಟೆಕ್ ಕ್ಷೇತ್ರಗಳಿಗೆ ಉತ್ತೇಜನ ನೀಡಲು 10 ಸಾವಿರ ಕೋಟಿ ರೂಪಾಯಿ ಮೂಲನಿಧಿಯೊಂದಿಗೆ “ಸ್ಟಾರ್ಟ್‌ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ 2.0” ಸ್ಥಾಪಿಸಲು ತೀರ್ಮಾನಿಸಲಾಗಿದೆ.

ಸೇವಾ ತೀರ್ಥ ಮತ್ತು ಕರ್ತವ್ಯ ಭವನ-1 ಹಾಗೂ 2 ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ಇವು ನಾಗರಿಕ ಕೇಂದ್ರಿತ ಆಡಳಿತದ ಸಂಕೇತ ಎಂದು ಹೇಳಿದರು. ಉತ್ತರ ಮತ್ತು ದಕ್ಷಿಣ ಬ್ಲಾಕ್ ಕಟ್ಟಡಗಳು ಬ್ರಿಟಿಷ್ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣವಾದವು. ಆದರೆ ಹೊಸ ಕಟ್ಟಡಗಳು 140 ಕೋಟಿ ಭಾರತೀಯರ ಕನಸುಗಳನ್ನು ಸಾಕಾರಗೊಳಿಸಲು ನಿರ್ಮಾಣಗೊಂಡಿವೆ ಎಂದು ಅವರು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ ನಂತರವೂ ಬ್ರಿಟಿಷರ ಪರಂಪರೆಯ ಕಟ್ಟಡಗಳಲ್ಲಿ ಆಡಳಿತ ನಡೆಸಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ದೇಶವು ವಿಕಸಿತ ಭಾರತದತ್ತ ಸಾಗುತ್ತಿರುವಾಗ ಗುಲಾಮಗಿರಿಯ ಮನೋಭಾವದಿಂದ ಮುಕ್ತರಾಗಬೇಕೆಂದು ಹೇಳಿದರು. ಹೆಸರು ಬದಲಾವಣೆ ಮತ್ತು ಹೊಸ ಕಟ್ಟಡ ನಿರ್ಮಾಣ ಅದಕ್ಕೆ ಸಂಕೇತವೆಂದು ವಿವರಿಸಿದರು.

Latest News