ಜಗತ್ತಿನಲ್ಲಿ ಯುದ್ಧ, ಆರ್ಥಿಕ ಕುಸಿತದ ಭೀತಿ ಎದುರಾದಾಗ ಸಾಮಾನ್ಯವಾಗಿ ಎಲ್ಲರೂ ಮೊದಲು ಹುಡುಕುವುದು ಸುರಕ್ಷಿತ ಜಾಗವನ್ನು. ಈಗ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಇಂತದ್ದೇ ಒಂದು ದಿಟ್ಟ ಹೆಜ್ಜೆ ಇಟ್ಟಿದೆ. ಹೌದು, ಲಂಡನ್ ಮತ್ತು ಇತರ ವಿದೇಶಿ ಬ್ಯಾಂಕುಗಳಲ್ಲಿದ್ದ ಭಾರತದ ಭಾರಿ ಪ್ರಮಾಣದ ಚಿನ್ನದ ಸಂಗ್ರಹ ಈಗ ಮೆಲ್ಲನೆ ನಮ್ಮ ದೇಶದ ಗಡಿಯೊಳಗೆ ಬಂದು ಸೇರುತ್ತಿದೆ.
ಕೇವಲ ಮೂರು ವರ್ಷಗಳ ಹಿಂದೆ, ಅಂದರೆ 2023ರಲ್ಲಿ ಭಾರತದ ಒಟ್ಟು ಚಿನ್ನದ ಪೈಕಿ ಕೇವಲ ಶೇ. 37 ರಷ್ಟು ಮಾತ್ರ ಭಾರತದಲ್ಲಿತ್ತು. ಆದರೆ ಈಗ ಆ ಚಿತ್ರಣ ಸಂಪೂರ್ಣ ಬದಲಾಗಿದೆ. 2026ರ ಮಾರ್ಚ್ ಅಂತ್ಯದ ವೇಳೆಗೆ ಭಾರತದ ಬಳಿ ಒಟ್ಟು 880.52 ಮೆಟ್ರಿಕ್ ಟನ್ ಚಿನ್ನವಿದೆ. ಇದರಲ್ಲಿ ಬರೋಬ್ಬರಿ 680.05 ಮೆಟ್ರಿಕ್ ಟನ್ ಚಿನ್ನ ಈಗಾಗಲೇ ಭಾರತಕ್ಕೆ ಬಂದು ತಲುಪಿದೆ. ಉಳಿದ ಚಿನ್ನ ಮಾತ್ರ ಇಂಗ್ಲೆಂಡ್ ಬ್ಯಾಂಕ್ ಮತ್ತು ಇತರ ಅಂತರಾಷ್ಟ್ರೀಯ ಸಂಸ್ಥೆಗಳ ಬಳಿ ಇದೆ.
ಕಳೆದ ಆರು ತಿಂಗಳಲ್ಲೇ ಆರ್ಬಿಐ ಸುಮಾರು 104 ಟನ್ ಚಿನ್ನವನ್ನು ವಿದೇಶದಿಂದ ಭಾರತಕ್ಕೆ ಶಿಫ್ಟ್ ಮಾಡಿದೆ ಎಂದರೆ ಇದರ ವೇಗ ಎಷ್ಟಿದೆ ಎಂದು ನೀವೇ ಊಹಿಸಿ!
ಚಿನ್ನವನ್ನು ಮರಳಿ ತರುತ್ತಿರುವುದಕ್ಕೆ ಕಾರಣವೇನು?
"ಚಿನ್ನ ನಿಮ್ಮ ಕೈಯಲ್ಲಿ ಇಲ್ಲದಿದ್ದರೆ, ಅದು ಸಂಪೂರ್ಣವಾಗಿ ನಿಮ್ಮದು ಅಲ್ಲ" ಎಂಬ ಮಾತೊಂದಿದೆ. ಆರ್ಬಿಐ ಕೂಡ ಇದನ್ನೇ ಪಾಲಿಸುತ್ತಿದೆ. ಇದಕ್ಕೆ ಮುಖ್ಯ ಕಾರಣಗಳು ಇಲ್ಲಿವೆ:
ಜಾಗತಿಕ ಯುದ್ಧದ ಆತಂಕ: ರಷ್ಯಾ ಮತ್ತು ಉಕ್ರೇನ್ ಯುದ್ಧ ಶುರುವಾದ ಮೇಲೆ, ಪಾಶ್ಚಿಮಾತ್ಯ ದೇಶಗಳು ರಷ್ಯಾದ ವಿದೇಶಿ ಆಸ್ತಿಗಳನ್ನು ಫ್ರೀಜ್ ಮಾಡಿದವು (ತಡೆಹಿಡಿದವು). ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗಲೂ ಅವರ ವಿದೇಶಿ ಸಂಗ್ರಹವನ್ನು ಅಮೆರಿಕಾ ನಿಯಂತ್ರಿಸಿತ್ತು. ಇಂತಹ ಘಟನೆಗಳನ್ನು ನೋಡಿ ಭಾರತ ಎಚ್ಚೆತ್ತುಕೊಂಡಿದೆ. ನಾಳೆ ಯಾವುದೋ ರಾಜಕೀಯ ಕಾರಣಕ್ಕೆ ನಮ್ಮ ಚಿನ್ನಕ್ಕೆ ವಿದೇಶದಲ್ಲಿ ತೊಂದರೆ ಆಗಬಾರದು ಎಂಬುದು ಸರ್ಕಾರದ ಉದ್ದೇಶ.
ಆರ್ಥಿಕ ಭದ್ರತೆ: ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಏರಿಳಿತವಾದಾಗ ಚಿನ್ನವೇ ದೊಡ್ಡ ಆಸರೆ. ನಮ್ಮ ಚಿನ್ನ ನಮ್ಮ ಮನೆಯಲ್ಲಿದ್ದರೆ (ದೇಶದಲ್ಲಿದ್ದರೆ) ನಮಗೆ ಹೆಚ್ಚಿನ ಧೈರ್ಯ ಮತ್ತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಸಿಗುತ್ತದೆ.
ಭಾರತದ ಶಕ್ತಿ ಹೆಚ್ಚುತ್ತಿದೆ!
ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಚಿನ್ನದ ಪಾಲು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 2025ರಲ್ಲಿ ಕೇವಲ ಶೇ. 11 ರಷ್ಟಿದ್ದ ಚಿನ್ನದ ಪಾಲು, 2026ರ ಮಾರ್ಚ್ ವೇಳೆಗೆ ಶೇ. 16.7 ಕ್ಕೆ ಏರಿಕೆಯಾಗಿದೆ. ಇಂದು ಭಾರತದ ಒಟ್ಟು ವಿದೇಶಿ ವಿನಿಮಯ ಸಂಗ್ರಹ $703 ಬಿಲಿಯನ್ ದಾಟಿದೆ. ಇದರಲ್ಲಿ ಚಿನ್ನದ ಮೌಲ್ಯವೇ ಸುಮಾರು $113.5 ಬಿಲಿಯನ್ ಅಂದರೆ ಸಣ್ಣ ಮಾತಲ್ಲ!
ಇದು ಕೇವಲ ಭಾರತಕ್ಕೆ ಮಾತ್ರವಲ್ಲ..
ಕೇವಲ ಆರ್ಬಿಐ ಮಾತ್ರವಲ್ಲ, ಪ್ರಪಂಚದ ಅನೇಕ ದೇಶಗಳ ಕೇಂದ್ರ ಬ್ಯಾಂಕುಗಳು ಈಗ ತಮ್ಮ ಚಿನ್ನವನ್ನು ವಿದೇಶದಿಂದ ವಾಪಸ್ ತಮ್ಮ ದೇಶಕ್ಕೆ ತರಿಸಿಕೊಳ್ಳುತ್ತಿವೆ. ಅಂತರಾಷ್ಟ್ರೀಯ ನಿರ್ಬಂಧಗಳು ಮತ್ತು ರಾಜಕೀಯ ಹಗೆತನದಿಂದ ತಮ್ಮ ಆಸ್ತಿಯನ್ನು ರಕ್ಷಿಸಿಕೊಳ್ಳುವುದು ಎಲ್ಲರ ಗುರಿಯಾಗಿದೆ.