ನಮ್ಮ ಈ ಆಧುನಿಕ ಜಗತ್ತಿನಲ್ಲಿ ಎಷ್ಟೇ ವಿಜ್ಞಾನ ಮುಂದುವರಿದಿದ್ದರೂ, 'ಪುನರ್ಜನ್ಮ' ಎನ್ನುವುದು ಇಂದಿಗೂ ಒಂದು ಬಿಡಿಸಲಾಗದ ರಹಸ್ಯವಾಗಿಯೇ ಉಳಿದಿದೆ. ಕೆಲವೊಮ್ಮೆ ಸಣ್ಣ ಮಕ್ಕಳು ತಮ್ಮ ಹಿಂದಿನ ಜನ್ಮದ ಬಗ್ಗೆ ಹೇಳುವ ಸಂಗತಿಗಳು ವಿಜ್ಞಾನಿಗಳನ್ನೇ ತಲೆ ಕೆರೆದುಕೊಳ್ಳುವಂತೆ ಮಾಡುತ್ತವೆ. ಅಂತಹದ್ದೇ ಒಂದು ಮೈ ಜುಂ ಎನಿಸುವ ಘಟನೆ ಈಗ ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ನಡೆದಿದೆ. ಅಲ್ಲಿನ ಒಬ್ಬ 10 ವರ್ಷದ ಹುಡುಗ, "ನಾನು ಸಾಮಾನ್ಯ ಬಾಲಕನಲ್ಲ, 400 ವರ್ಷಗಳ ಹಿಂದೆ ಆಳ್ವಿಕೆ ನಡೆಸಿದ ಮಹಾರಾಜ ಮಾನ್ ಸಿಂಗ್" ಎಂದು ಹೇಳುವ ಮೂಲಕ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದಾನೆ.
ಟೋಂಕ್ ಜಿಲ್ಲೆಯ ಜೈಕಮಾಬಾದ್ ಎಂಬ ಪುಟ್ಟ ಹಳ್ಳಿಯಲ್ಲಿ ವಾಸವಿರುವ ಕನ್ಹಾರಾಮ್ ಬೈರ್ವಾ ಎಂಬ 10 ವರ್ಷದ ಬಾಲಕನೇ ಈಗ ಸುದ್ದಿಯ ಕೇಂದ್ರಬಿಂದು. ಕಳೆದ ಮೂರು ವರ್ಷಗಳಿಂದ ಈ ಹುಡುಗ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ. ತನ್ನ ತಂದೆ-ತಾಯಿಯ ಬಳಿ "ನನಗೆ ಆಮೀರ್ ಕೋಟೆಗೆ ಹೋಗಬೇಕು, ನಾನು ಅಲ್ಲಿನ ರಾಜ" ಎಂದು ಹಠ ಮಾಡುತ್ತಿದ್ದಾನೆ. ಮೊದಲಿಗೆ ಪೋಷಕರು ಇದನ್ನು ಬಾಲಿಶತನ ಅಂದುಕೊಂಡು ಸುಮ್ಮನಾಗಿದ್ದರು. ಆದರೆ, ಆತ ಹೇಳುತ್ತಿರುವ ಯುದ್ಧದ ಕಥೆಗಳು ಮತ್ತು ಇತಿಹಾಸದ ಸಣ್ಣಪುಟ್ಟ ವಿವರಗಳನ್ನು ಕೇಳಿದ ಮೇಲೆ ಮನೆಯವರು ಮಾತ್ರವಲ್ಲ, ಇಡೀ ಹಳ್ಳಿಯೇ ದಂಗಾಗಿದೆ.
मुझे आमेर जाना है,
— Mukesh मारवाड़ी (@Mukeshbaitu) April 17, 2026
मेरा राजपाट संभालना है....
:- पुनर्जन्म राजा मानसिंह pic.twitter.com/NSVv6AkbC2
ಅಚ್ಚರಿ ಮೂಡಿಸುವ ಬಾಲಕನ ಮಾತುಗಳು
ಕನ್ಹಾರಾಮ್ ಮಾಧ್ಯಮಗಳ ಮುಂದೆ ಯಾವುದೇ ಭಯವಿಲ್ಲದೆ ಮಾತನಾಡುತ್ತಿದ್ದಾನೆ. ಆತ ಹೇಳುವ ಪ್ರಕಾರ, "ನಾನು ಆಮೀರ್ ಸಂಸ್ಥಾನದ ರಾಜ ಮಾನ್ ಸಿಂಗ್. ನನಗೆ ಇಬ್ಬರು ರಾಣಿಯರು ಹಾಗೂ ಮೂವರು ಸಹೋದರರಿದ್ದರು. ಈಗ ಜೈಪುರದಲ್ಲಿರುವ ಪ್ರಖ್ಯಾತ ಸವಾಯಿ ಮಾನ್ ಸಿಂಗ್ ಆಸ್ಪತ್ರೆ ಇರುವುದು ನನ್ನ ಹೆಸರಿನಲ್ಲೇ."
ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ರಾಜ ಮಾನ್ ಸಿಂಗ್ 1589 ರಿಂದ 1614 ರವರೆಗೆ ಆಳ್ವಿಕೆ ನಡೆಸಿದ್ದರು ಮತ್ತು ಮೊಘಲ್ ಚಕ್ರವರ್ತಿ ಅಕ್ಬರ್ನ ಅತ್ಯಂತ ಆಪ್ತ ಸೇನಾಪತಿಯಾಗಿದ್ದರು ಎಂಬುದು ನಿಜ. ಅಷ್ಟೇ ಅಲ್ಲದೆ, ಹಳದಿಘಾಟಿ ಕದನದಲ್ಲಿ ಮಹಾರಾಣಾ ಪ್ರತಾಪ್ ವಿರುದ್ಧ ತಾನು ಹೋರಾಡಿದ್ದ ನೆನಪುಗಳನ್ನೂ ಈ ಹುಡುಗ ಹಂಚಿಕೊಳ್ಳುತ್ತಿದ್ದಾನೆ. ಇತಿಹಾಸದ ಪುಸ್ತಕದಲ್ಲಿರುವ ವಿಷಯಗಳು ಈ ಮಗುವಿನ ಬಾಯಲ್ಲಿ ಬರುತ್ತಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ.
ಶೀಲಾ ದೇವಿಯ ರಹಸ್ಯ ಮತ್ತು ಇತಿಹಾಸದ ನಂಟು
ಈ ಬಾಲಕನ ದಾವೆಗಳಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವುದು ಆಮೀರ್ ಕೋಟೆಯ ಶೀಲಾ ದೇವಿ ದೇವಸ್ಥಾನದ ಬಗ್ಗೆ. "ನಾನೇ ಬಂಗಾಳದಿಂದ ಶೀಲಾ ದೇವಿಯ ವಿಗ್ರಹವನ್ನು ತಂದು ಆಮೀರ್ನಲ್ಲಿ ಪ್ರತಿಷ್ಠಾಪಿಸಿದ್ದು. ಅಲ್ಲಿನ ಒಂದು ಗುಪ್ತ ಕೋಣೆಯಲ್ಲಿ ಅಸಲಿ ವಿಗ್ರಹ ಇಂದಿಗೂ ಇದೆ" ಎಂದು ಆತ ಬಲವಾಗಿ ಪ್ರತಿಪಾದಿಸುತ್ತಿದ್ದಾನೆ.
ವಿಶೇಷವೆಂದರೆ, ಇತಿಹಾಸದ ಪ್ರಕಾರವೂ ರಾಜ ಮಾನ್ ಸಿಂಗ್ ಬಂಗಾಳದ ರಾಜ ಕೇದಾರ್ನನ್ನು ಸೋಲಿಸಿ ಅಲ್ಲಿಂದ ದೇವಿಯ ವಿಗ್ರಹವನ್ನು ತಂದಿದ್ದರು ಎನ್ನಲಾಗುತ್ತದೆ. ದೇವಿಯ ಕುತ್ತಿಗೆ ಯಾಕೆ ಸ್ವಲ್ಪ ಓರೆಯಾಗಿದೆ ಎನ್ನುವುದಕ್ಕೂ ಈ ಬಾಲಕ ಒಂದು ಕುತೂಹಲಕಾರಿ ಕಥೆಯನ್ನು ಹೇಳುತ್ತಿದ್ದಾನೆ. ಇವೆಲ್ಲವೂ ಇತಿಹಾಸಕಾರರನ್ನೂ ಚಿಂತೆಗೀಡು ಮಾಡಿದೆ.
ರಾಜವಂಶಸ್ಥನಂತೆ ಬಾಲಕನ ಜೀವನ ಶೈಲಿ
ಕನ್ಹಾರಾಮ್ನ ವರ್ತನೆಯಲ್ಲಿ ಈಗ ಭಾರಿ ಬದಲಾವಣೆ ಕಂಡಿದೆ. ಆತ ಈಗ ಸಾಮಾನ್ಯ ಮಕ್ಕಳಂತೆ ಆಟವಾಡುವುದಿಲ್ಲ. ಆತನ ಆಹಾರ ಪದ್ಧತಿಯೇ ಬೇರೆ! ಊಟದಲ್ಲಿ ಅತಿಯಾದ ತುಪ್ಪ ಬೇಕೇ ಬೇಕು, ಇಲ್ಲವಾದರೆ ಆತ ಊಟ ಮಾಡುವುದಿಲ್ಲ. "ನಾನು ರಾಜ, ನೀವು ಸಾಮಾನ್ಯರು" ಎಂದು ಹೇಳುತ್ತಾ ತನ್ನ ಮನೆಯವರ ಜೊತೆ ಕೂತು ಊಟ ಮಾಡುವುದನ್ನೂ ನಿಲ್ಲಿಸಿದ್ದಾನೆ. ಆತನ ನಡೆಯುವ ರೀತಿ, ಮಾತನಾಡುವ ಶೈಲಿ ಎಲ್ಲದರಲ್ಲೂ ಒಂದು ರೀತಿಯ ರಾಜ ಗತ್ತು ಕಾಣಿಸುತ್ತಿದೆ ಎಂದು ಮನೆಯವರು ಹೇಳುತ್ತಾರೆ.