Apr 8, 2026 Languages : ಕನ್ನಡ | English

ನೇಪಾಳದ ರಸ್ತೆಯಲ್ಲಿ ಗುಟ್ಕಾ ಉಗಿದ ಭಾರತೀಯ ಪ್ರವಾಸಿಗ - ಮುಂದಾಗಿದ್ದೆ ಬೇರೆ ನೋಡಿ; ವಿಡಿಯೋ ವೈರಲ್!!

ನಾವು ನಮ್ಮ ದೇಶದಲ್ಲೇ ಇರಲಿ ಅಥವಾ ಬೇರೆ ದೇಶಕ್ಕೆ ಹೋಗಿರಲಿ, ಅಲ್ಲಿನ ಸ್ವಚ್ಛತೆಯನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಆದರೆ ನಮ್ಮಲ್ಲಿ ಕೆಲವರಿಗೆ ಎಲ್ಲೆಂದರಲ್ಲಿ ಗುಟ್ಕಾ ತಿಂದು ಉಗುಳುವುದು ಒಂದು ಕೆಟ್ಟ ಅಭ್ಯಾಸವಾಗಿಬಿಟ್ಟಿದೆ. ಇದೇ ಅಭ್ಯಾಸವನ್ನು ನೇಪಾಳಕ್ಕೆ ಹೋದಾಗಲೂ ಮುಂದುವರಿಸಿದ ಭಾರತೀಯ ಪ್ರವಾಸಿಗರಿಗೆ ಅಲ್ಲಿನ ವ್ಯಕ್ತಿಯೊಬ್ಬರು ಸರಿಯಾದ ಪಾಠ ಕಲಿಸಿದ್ದಾರೆ.

ನೇಪಾಳದಲ್ಲಿ ಭಾರತೀಯ ಪ್ರವಾಸಿಗರಿಗೆ ಸ್ವಚ್ಛತೆ ಪಾಠ; | Photo Credit: https://x.com/TyrantOppressor
ನೇಪಾಳದಲ್ಲಿ ಭಾರತೀಯ ಪ್ರವಾಸಿಗರಿಗೆ ಸ್ವಚ್ಛತೆ ಪಾಠ; | Photo Credit: https://x.com/TyrantOppressor

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ 24 ಸೆಕೆಂಡುಗಳ ಒಂದು ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಕೆಲವರು ಭಾರತೀಯ ಪ್ರವಾಸಿಗರು ನೇಪಾಳದ ರಸ್ತೆಯ ಮೇಲೆ ಗುಟ್ಕಾ ತಿಂದು ಉಗಿದಿದ್ದಾರೆ. ಇದನ್ನು ಗಮನಿಸಿದ ಅಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬರು ಸುಮ್ಮನೆ ಕೂರಲಿಲ್ಲ. ತಕ್ಷಣ ಆ ಪ್ರವಾಸಿಗರನ್ನು ತಡೆದು ನಿಲ್ಲಿಸಿದ್ದಾರೆ. ಅಷ್ಟಕ್ಕೇ ಬಿಡದ ಅವರು, ರಸ್ತೆಯನ್ನು ಈಗಲೇ ಕ್ಲೀನ್ ಮಾಡಿ ಎಂದು ಗದರಿಸಿದ್ದಾರೆ.

ಬೇರೆ ದಾರಿಯಿಲ್ಲದೆ ಆ ಪ್ರವಾಸಿಗರು ತಾವೇ ತಂದಿದ್ದ ನೀರಿನ ಬಾಟಲಿಯಿಂದ ನೀರು ಸುರಿದು, ರಸ್ತೆಯ ಮೇಲೆ ಉಗಿದಿದ್ದ ಗುಟ್ಕಾವನ್ನು ಕೈಯಾರೆ ಉಜ್ಜಿ ಕ್ಲೀನ್ ಮಾಡಿದ್ದಾರೆ. ಅಲ್ಲಿ ನೆರೆದಿದ್ದ ಜನರೆಲ್ಲರೂ ಇದನ್ನು ಆಶ್ಚರ್ಯದಿಂದ ನೋಡುತ್ತಿದ್ದರು. ರಸ್ತೆಯನ್ನು ಮೊದಲಿಗಿಂತಲೂ ಸ್ವಚ್ಛವಾಗಿ ತೊಳೆದ ನಂತರ, ಆ ಪ್ರವಾಸಿಗರು ಮುಖ ಸಣ್ಣಗೆ ಮಾಡಿಕೊಂಡು, ಕ್ಷಮೆ ಕೇಳಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆ ನೇಪಾಳದ ವ್ಯಕ್ತಿಯ ಧೈರ್ಯ ಮತ್ತು ನಾಗರಿಕ ಪ್ರಜ್ಞೆಯನ್ನು ಕೊಂಡಾಡುತ್ತಿದ್ದಾರೆ. 'ಸ್ವಚ್ಛತೆ ಅಂದ್ರೆ ಹೀಗಿರಬೇಕು, ತಪ್ಪು ಮಾಡಿದವರಿಗೆ ತಕ್ಷಣ ಶಿಕ್ಷೆ ಸಿಕ್ಕರೆ ಮಾತ್ರ ಬುದ್ಧಿ ಬರುತ್ತೆ' ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ.

ವಿಶೇಷವೆಂದರೆ, ಭಾರತದ ಅನೇಕ ನೆಟ್ಟಿಗರೇ ಈ ಘಟನೆಯ ಬಗ್ಗೆ ನಾಚಿಕೆ ವ್ಯಕ್ತಪಡಿಸುತ್ತಿದ್ದಾರೆ. 'ನಮ್ಮವರು ವಿದೇಶಕ್ಕೆ ಹೋಗಿ ಇಂತಹ ಕೆಲಸಗಳನ್ನು ಮಾಡಿ ದೇಶದ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಅಲ್ಲಿನವರು ನಮ್ಮ ಬಗ್ಗೆ ಏನು ಅಂದುಕೊಳ್ಳಬೇಡ? ನಮಗೂ ಸ್ವಲ್ಪ ಶಿಸ್ತು ಇರಬೇಕು' ಎಂದು ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ. ನಮ್ಮ ದೇಶದಲ್ಲಿ ನಾವು ಸ್ವಚ್ಛತೆ ಕಾಪಾಡಲು ಎಷ್ಟೇ ಪ್ರಯತ್ನಿಸಿದರೂ, ಇಂತಹ ಕೆಲವು ವ್ಯಕ್ತಿಗಳಿಂದಾಗಿ ಭಾರತದ ಇಮೇಜ್ ವಿದೇಶಗಳಲ್ಲಿ ಹಾಳಾಗುತ್ತಿದೆ ಎಂಬ ಬೇಸರ ವ್ಯಕ್ತವಾಗಿದೆ.

ಈ ಘಟನೆ ನಮಗೆ ಒಂದು ದೊಡ್ಡ ಪಾಠವನ್ನೇ ಕಲಿಸಿದೆ. ನಮಗೂ ನಮ್ಮ ನಗರ ಅಥವಾ ಪರಿಸರದ ಬಗ್ಗೆ ಅಷ್ಟೇ ಪ್ರೀತಿ ಮತ್ತು ಜವಾಬ್ದಾರಿ ಇರಬೇಕು. ಯಾರೋ ಒಬ್ಬರು ಬಂದು ಗುಡಿಸುತ್ತಾರೆ ಅಥವಾ ಮಳೆ ಬಂದಾಗ ತೊಳೆದುಕೊಂಡು ಹೋಗುತ್ತೆ ಅಂತ ಎಲ್ಲೆಂದರಲ್ಲಿ ಗಲೀಜು ಮಾಡುವುದು ಸರಿಯಲ್ಲ. ಅದರಲ್ಲೂ ವಿದೇಶಗಳಿಗೆ ಹೋದಾಗ ನಾವು ನಮ್ಮ ದೇಶದ ರಾಯಭಾರಿಗಳ ತರ ಇರುತ್ತೇವೆ, ನಮ್ಮ ಸಣ್ಣ ತಪ್ಪು ಕೂಡ ಇಡೀ ದೇಶಕ್ಕೆ ಕೆಟ್ಟ ಹೆಸರು ತರಬಹುದು ಎಂಬ ಅರಿವು ನಮಗಿರಲಿ.

ನೇಪಾಳದ ಆ ವ್ಯಕ್ತಿ ಮಾಡಿದ್ದು ಸರಿಯೋ ಅಥವಾ ತಪ್ಪೋ? ನಿಮ್ಮ ಪ್ರಕಾರ ಇಂತಹ ಘಟನೆಗಳು ನಮ್ಮ ಬೆಂಗಳೂರಿನಲ್ಲೂ ನಡೆಯಬೇಕಾ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Latest News