ನೆಲಮಂಗಲ: ಸಂಸಾರ ಅಂದಮೇಲೆ ಸಣ್ಣಪುಟ್ಟ ಜಗಳಗಳು ಇರುವುದು ಸಹಜ. ಆದರೆ ಅದೇ ಜಗಳ ವಿಕೋಪಕ್ಕೆ ಹೋಗಿ, ಪ್ರೀತಿಸಿ ಮದುವೆಯಾದ ಗಂಡನೇ ಹೆಂಡತಿಯನ್ನು ಕೊಲೆ ಮಾಡುವ ಹಂತಕ್ಕೆ ತಲುಪಿರುವುದು ನಿಜಕ್ಕೂ ದುರಂತ. ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡಹಳ್ಳಿಯಲ್ಲಿ ಇಂಥದ್ದೇ ಒಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ.
ಕೊಲೆಯಾದ ಮಹಿಳೆಯ ಹೆಸರು ಮಂಜುಳಾ (26). ಇವರಿಗೆ ಐದು ವರ್ಷಗಳ ಹಿಂದೆಯೇ ಸಿದ್ದೇಶ್ ಎಂಬುವವರ ಜೊತೆ ಮೊದಲ ಮದುವೆಯಾಗಿತ್ತು. ಆದರೆ, ಕೆಲಸ ಮಾಡುವ ಜಾಗದಲ್ಲಿ ಅಪ್ಪು ಎಂಬಾತನ ಪರಿಚಯವಾಗಿತ್ತು. ಆ ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ಇತ್ತ ಅಪ್ಪು ಕೂಡ ತನ್ನ ಮೊದಲ ಹೆಂಡತಿಯನ್ನು ಬಿಟ್ಟಿದ್ದ. ಕೊನೆಗೆ ಮಂಜುಳಾ ಮತ್ತು ಅಪ್ಪು ಇಬ್ಬರೂ ತಮ್ಮ ಮೊದಲ ಸಂಗಾತಿಗಳಿಂದ ವಿಚ್ಛೇದನ ಪಡೆದು, ಪ್ರೀತಿಸಿ ಎರಡನೇ ಮದುವೆಯಾಗಿದ್ದರು. ಇವರಿಗೆ ಮೂರು ವರ್ಷದ ಒಂದು ಮುದ್ದಾದ ಗಂಡು ಮಗು ಕೂಡ ಇದೆ.
ಸುಖವಾಗಿದ್ದ ಸಂಸಾರದಲ್ಲಿ ಬಿರುಕು ಮೂಡಿದ್ದು ಯಾಕೆ?
ಮಂಜುಳಾ ಅವರು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರೆ, ಅಪ್ಪು ಗಾರ್ಮೆಂಟ್ಸ್ನಲ್ಲಿ ಕೆಲಸಕ್ಕಿದ್ದ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಈ ದಂಪತಿಗಳ ನಡುವೆ ಇತ್ತೀಚೆಗೆ ಸಣ್ಣಪುಟ್ಟ ವಿಚಾರಕ್ಕೆ ಕಿರಿಕಿರಿ ಶುರುವಾಗಿತ್ತು. ಜಗಳ ಜಾಸ್ತಿಯಾದಾಗ ಮಂಜುಳಾ ಅವರು, "ನಿನ್ನ ಜೊತೆ ನನಗೆ ಸಂಸಾರ ಮಾಡೋದು ಬೇಡ, ನಾನು ನಿನ್ನನ್ನು ಬಿಟ್ಟು ಹೋಗುತ್ತೇನೆ" ಎಂದು ಬಟ್ಟೆಬರೆಗಳನ್ನು ಪ್ಯಾಕ್ ಮಾಡಿಕೊಂಡು ಮನೆ ಬಿಡಲು ರೆಡಿಯಾಗಿದ್ದರು.
ಮಚ್ಚಿನಿಂದ ಕೊ*ಚ್ಚಿದ ಕಿರಾತಕ!
ಹೆಂಡತಿ ತನ್ನನ್ನು ಬಿಟ್ಟು ಹೋಗುತ್ತಾಳೆ ಎನ್ನುವ ಸಿಟ್ಟಿನಲ್ಲಿ ಅಪ್ಪುಗೆ ಏನು ಮಾಡಬೇಕೆಂದು ತೋಚಲಿಲ್ಲ. ಮನೆಯಲ್ಲಿದ್ದ ಮಚ್ಚು ತಗೊಂಡು ಮಂಜುಳಾ ಅವರ ಮೇಲೆ ಮನಬಂದಂತೆ ಹ*ಲ್ಲೆ ನಡೆಸಿದ್ದಾನೆ. ರ*ಕ್ತದ ಮಡುವಿನಲ್ಲಿ ಬಿದ್ದಿದ್ದ ಮಂಜುಳಾರನ್ನು ಅಕ್ಕಪಕ್ಕದವರು ಕೂಡಲೇ ಆಸ್ಪತ್ರೆಗೆ ಸೇರಿಸಿದರೂ, ಗಾಯ ತೀವ್ರವಾಗಿದ್ದರಿಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಪೊಲೀಸರ ಬಲೆಗೆ ಬಿದ್ದ ಅಪ್ಪು
ಕೊಲೆ ಮಾಡಿ ಪರಾರಿಯಾಗಿದ್ದ ಅಪ್ಪುನನ್ನು ಮಾದನಾಯಕನಹಳ್ಳಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಕರೆತಂದು ಮಹಜರು ನಡೆಸಿದ್ದು, ಸದ್ಯಕ್ಕೆ ಅಪ್ಪು ಜೈಲು ಪಾಲಾಗಿದ್ದಾನೆ.
ಪ್ರೀತಿಯ ಹೆಸರಿನಲ್ಲಿ ಒಂದಾದ ಇಬ್ಬರ ಜೀವನ ಈಗ ಮಸಣ ಸೇರಿದೆ. ತಂದೆ ಜೈಲಿಗೆ ಹೋದರೆ, ತಾಯಿ ಮಣ್ಣು ಪಾಲಾಗಿದ್ದಾಳೆ. ಈ ಇಬ್ಬರ ಜಗಳದ ನಡುವೆ ಮೂರು ವರ್ಷದ ಹಸುಗೂಸು ಈಗ ಅನಾಥವಾಗಿದೆ.