Mar 31, 2026 Languages : ಕನ್ನಡ | English

ರೈತರಿಗೆ ಗುಡ್ ನ್ಯೂಸ್: ನಿಮ್ಮ ಹೊಲದ ದಾರಿ ಯಾರಾದರೂ ಮುಚ್ಚಿದ್ದಾರಾ? ತಕ್ಷಣ ಇದೊಂದು ಕೆಲಸ ಮಾಡಿ ಸಾಕು!!

ಹಳ್ಳಿಗಳಲ್ಲಿ ರೈತರಿಗೆ ದೊಡ್ಡ ತಲೆನೋವು ಅಂದ್ರೆ ಅದು ಜಮೀನಿಗೆ ಹೋಗುವ ದಾರಿಯ ವಿಚಾರ. ಎಷ್ಟೋ ಕಡೆ ಅಕ್ಕ-ಪಕ್ಕದ ಜಮೀನಿನವರು ದ್ವೇಷಕ್ಕೋ ಅಥವಾ ದರ್ಪಕ್ಕೋ ಜಮೀನಿಗೆ ಹೋಗುವ 'ಕಾಲುದಾರಿ' ಅಥವಾ 'ಬಂಡಿದಾರಿ'ಯನ್ನೇ ಮುಚ್ಚಿಬಿಡುತ್ತಾರೆ. ಇದರಿಂದ ಬೇಸತ್ತು ಎಷ್ಟೋ ರೈತರು ಕೃಷಿಯನ್ನೇ ಬಿಟ್ಟುಬಿಟ್ಟ ಉದಾಹರಣೆಗಳಿವೆ. ಆದರೆ ಈಗ ರೈತರು ಇಂತಹ ದರ್ಪಕ್ಕೆ ಹೆದರಬೇಕಿಲ್ಲ. ನಿಮ್ಮ ಜಮೀನಿನ ದಾರಿಯ ಹಕ್ಕನ್ನು ರಕ್ಷಿಸಲು ಸರ್ಕಾರ ಮತ್ತು ಕಾನೂನು ಈಗ ನಿಮ್ಮ ಬೆನ್ನಿಗೆ ನಿಂತಿದೆ.

ರೈತರ ಜಮೀನಿನ ದಾರಿ – ಕಾನೂನು ನಿಮ್ಮ ಬೆನ್ನಿಗೆ!!
ರೈತರ ಜಮೀನಿನ ದಾರಿ – ಕಾನೂನು ನಿಮ್ಮ ಬೆನ್ನಿಗೆ!!

ದಾರಿ ಮುಚ್ಚುವುದು ಅಕ್ಷರಶಃ ಕಾನೂನುಬಾಹಿರ

ಬ್ರಿಟಿಷರ ಕಾಲದ ಗ್ರಾಮದ ನಕ್ಷೆಯಲ್ಲಿ (Village Map) ಯಾವ್ಯಾವ ದಾರಿಗಳು ಎಲ್ಲಿವೆ ಎಂಬುದು ಸ್ಪಷ್ಟವಾಗಿ ದಾಖಲಾಗಿರುತ್ತದೆ. ಇಂತಹ ನಕ್ಷೆಯಲ್ಲಿರುವ ದಾರಿಗಳನ್ನು ಯಾರೂ ಕೂಡ ತಮ್ಮ ಸ್ವಾರ್ಥಕ್ಕಾಗಿ ಮುಚ್ಚುವಂತಿಲ್ಲ. ಒಂದು ವೇಳೆ ನಿಮ್ಮ ಪಕ್ಕದ ಜಮೀನಿನವರು ಮಣ್ಣು ಹಾಕಿ ಅಥವಾ ಬೇಲಿ ಹಾಕಿ ದಾರಿಯನ್ನು ಬಂದ್ ಮಾಡಿದರೆ, ಅದು ಶಿಕ್ಷಾರ್ಹ ಅಪರಾಧ. ರೈತರ ಕೃಷಿ ಚಟುವಟಿಕೆಗೆ ಅಡ್ಡಿಪಡಿಸುವುದು ಕಾನೂನಿನ ಪ್ರಕಾರ ದೊಡ್ಡ ತಪ್ಪು.

ನೀವು ಯಾರಿಗೆ ದೂರು ನೀಡಬೇಕು?

ನಿಮ್ಮ ಜಮೀನಿನ ದಾರಿ ಅತಿಕ್ರಮಣವಾಗಿದೆ ಎಂದು ಗೊತ್ತಾದ ತಕ್ಷಣ ನೀವು ಮೊದಲು ಮಾಡಬೇಕಾದ ಕೆಲಸ ಅಂದ್ರೆ, ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರ್‌ಗೆ (Tahsildar) ಲಿಖಿತ ದೂರು ನೀಡುವುದು. ದೂರು ನೀಡುವಾಗ ನಿಮ್ಮ ಜಮೀನಿನ ಸರ್ವೆ ನಂಬರ್ ಮತ್ತು ದಾರಿ ಅತಿಕ್ರಮಣವಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ. ತಹಶೀಲ್ದಾರ್‌ಗೆ ಈ ವಿಷಯದಲ್ಲಿ ವಿಶೇಷ ಅಧಿಕಾರ ಇರುತ್ತದೆ. ಅವರು ದೂರು ಸ್ವೀಕರಿಸಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.

ಬಲವಾದ ಕಾನೂನು ಬೆಂಬಲ ನಿಮಗಿದೆ

 ನಮ್ಮ ಕಾನೂನಿನಲ್ಲಿ ರೈತರ ದಾರಿಯ ಹಕ್ಕನ್ನು ರಕ್ಷಿಸಲು ಮೂರು ಮುಖ್ಯ ನಿಯಮಗಳಿವೆ

ಕರ್ನಾಟಕ ಭೂ ಕಂದಾಯ ನಿಯಮಗಳು 1966 (ನಿಯಮ 59): ಇದರ ಪ್ರಕಾರ ದಾರಿಯ ಹಕ್ಕುಗಳು ಮತ್ತು ಅನುಭೋಗದ ಹಕ್ಕುಗಳ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಬೇಕಿದ್ದರೆ ಈ ಹಕ್ಕನ್ನು ನೀವು ಅಧಿಕೃತವಾಗಿ ನೋಂದಣಿ (Registration) ಮಾಡಿಸಿಕೊಳ್ಳಬಹುದು.

ಇಂಡಿಯನ್ ಈಸ್‌ಮೆಂಟ್ ಆಕ್ಟ್ 1882 (Indian Easements Act): ಈ ಕಾಯ್ದೆಯ ಪ್ರಕಾರ ಪ್ರತಿಯೊಬ್ಬ ಜಮೀನಿನ ಮಾಲೀಕನಿಗೂ ತನ್ನ ಭೂಮಿಗೆ ಹೋಗಲು ದಾರಿಯ ಮೂಲಭೂತ ಹಕ್ಕಿರುತ್ತದೆ. ಇದನ್ನು ಯಾರೂ ಕಸಿದುಕೊಳ್ಳುವಂತಿಲ್ಲ.

ಸಿಆರ್‌ಪಿಸಿ ಕಲಂ 147 (CrPC Section 147): ದಾರಿಯ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿ ಶಾಂತಿ ಭಂಗ ಉಂಟಾಗುವ ಸಾಧ್ಯತೆ ಇದ್ದರೆ, ತಹಶೀಲ್ದಾರ್ ಅವರು 'ಮ್ಯಾಜಿಸ್ಟ್ರೇಟ್' ಅಧಿಕಾರ ಬಳಸಿ ಪೊಲೀಸ್ ರಕ್ಷಣೆಯೊಂದಿಗೆ ಅತಿಕ್ರಮಣ ತೆರವುಗೊಳಿಸಿ ದಾರಿಯನ್ನು ಸುಗಮಗೊಳಿಸಬಹುದು.

ಅಧಿಕಾರಿಗಳು ಸ್ಪಂದಿಸದಿದ್ದರೆ ಏನು ಮಾಡಬೇಕು? ಹಲವು ಬಾರಿ ಗ್ರಾಮ ಆಡಳಿತಾಧಿಕಾರಿಗಳು (VA) ಅಥವಾ ತಹಶೀಲ್ದಾರ್‌ಗಳು ಪ್ರಭಾವಿಗಳಿಗೆ ಹೆದರಿ ದೂರು ಪಡೆದರೂ ಸುಮ್ಮನೆ ಕೂರುತ್ತಾರೆ ಎಂಬ ದೂರುಗಳಿವೆ. ಇದಕ್ಕಾಗಿಯೇ ಕಂದಾಯ ಇಲಾಖೆಯು 2023ರ ಅಕ್ಟೋಬರ್ 20ರಂದು ಒಂದು ಖಡಕ್ ಆದೇಶ ಹೊರಡಿಸಿದೆ. ರೈತರ ದಾರಿ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಬಗೆಹರಿಸಬೇಕು ಎಂದು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ನಿಮ್ಮ ತಾಲೂಕಿನ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ, ನೀವು ನೇರವಾಗಿ ಉಪವಿಭಾಗಾಧಿಕಾರಿ (AC) ಅಥವಾ ಜಿಲ್ಲಾಧಿಕಾರಿಗಳ (DC) ಬಳಿ ಹೋಗಿ ದೂರು ನೀಡಬಹುದು.

ನೆನಪಿರಲಿ, ನಿಮ್ಮ ಹಕ್ಕು ನಿಮ್ಮ ಕೈಯಲ್ಲಿದೆ

ಜಮೀನಿನ ದಾರಿ ಎನ್ನುವುದು ರೈತನ ಜೀವನಾಡಿ ಇದ್ದಂತೆ. ಗೊಬ್ಬರ ಸಾಗಿಸಲು, ಬೆಳೆ ತರಲು ದಾರಿ ಇಲ್ಲದಿದ್ದರೆ ಕೃಷಿ ಮಾಡುವುದೇ ಅಸಾಧ್ಯ. ಹಾಗಾಗಿ, ಯಾರೋ ದರ್ಪ ತೋರಿಸುತ್ತಾರೆ ಎಂದು ಸುಮ್ಮನೆ ಕೂರಬೇಡಿ. ಕಾನೂನಿನ ಮೊರೆ ಹೋಗಿ ನಿಮ್ಮ ಹಕ್ಕನ್ನು ಪಡೆದುಕೊಳ್ಳಿ. ಹಳ್ಳಿಗಳಲ್ಲಿ ಅನಗತ್ಯ ಜಗಳ ಮಾಡುವ ಬದಲು, ಈ ಕಾನೂನುಬದ್ಧ ದಾರಿಯನ್ನು ಹಿಡಿಯುವುದು ಉತ್ತಮ.

ಈ ಮಾಹಿತಿಯನ್ನು ನಿಮ್ಮ ಊರಿನ ಎಲ್ಲಾ ರೈತರಿಗೂ ತಲುಪಿಸಿ. ಎಷ್ಟೋ ಜನರಿಗೆ ಕಾನೂನಿನ ಅರಿವಿಲ್ಲದೆ ದಾರಿ ಬಿಟ್ಟುಕೊಟ್ಟು ಸುಮ್ಮನಾಗಿರುತ್ತಾರೆ. ನಿಮ್ಮ ಊರಿನ ವಾಟ್ಸಾಪ್ ಗ್ರೂಪ್‌ಗಳಿಗೆ ಶೇರ್ ಮಾಡುವ ಮೂಲಕ ಇನ್ನೊಬ್ಬ ರೈತನಿಗೆ ಸಹಾಯ ಮಾಡಿ. ಕೃಷಿ ಉಳಿಸಿ, ರೈತನನ್ನ ರಕ್ಷಿಸಿ.

Latest News