Mar 29, 2026 Languages : ಕನ್ನಡ | English

ಆಶ್ರಮದ ಹೆಸರಲ್ಲಿ ಕಾಮಕಾಂಡ - 100 ಮಹಿಳೆಯರ ಬಾಳಲ್ಲಿ ಕತ್ತಲು ತುಂಬಿದ ಪಾಪಿ ಅಶೋಕ್ ಖರತ್!!

ಸ್ವಯಂ ಘೋಷಿತ ದೇವಮಾನವನೊಬ್ಬ ಮಾಡಿದ ಕೆಲಸ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಮತ್ತು ಸಿಟ್ಟು ಬರುತ್ತದೆ. ಈತನ ಹೆಸರು ಅಶೋಕ್ ಖರತ್. ಆಶ್ರಮದ ಹೆಸರಿನಲ್ಲಿ, ದೇವಮಾನವನ ಅವತಾರದಲ್ಲಿ ಈತ 100ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಾರ್ಚ್ 18ರಂದು ಈತನನ್ನು ಪೊಲೀಸರು ಬಂಧಿಸಿದ್ದಾರೆ.

ದೇವಮಾನವನ ಅಸಲಿ ಮುಖ ಬಯಲು
ದೇವಮಾನವನ ಅಸಲಿ ಮುಖ ಬಯಲು

ಈತನ ವಿರುದ್ಧ ಲೈಂಗಿಕ ದೌರ್ಜನ್ಯ, ಸುಲಿಗೆ ಸೇರಿದಂತೆ ಸದ್ಯಕ್ಕೆ ಎಂಟು ಎಫ್‌ಐಆರ್‌ಗಳು (FIR) ದಾಖಲಾಗಿವೆ. ಅಶೋಕ್ ಖರತ್‌ನ ಈ ಕರಾಳ ಮುಖ ಹೊರಬರುತ್ತಿದ್ದಂತೆ ಇಡೀ ಮಹಾರಾಷ್ಟ್ರವೇ ಬೆಚ್ಚಿಬಿದ್ದಿದೆ.

ಈ ವಿಷಯವಾಗಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಸುಧೀರ್ ಮುಂಗಂಟಿವಾರ್, ಸರ್ಕಾರದ ವಿರುದ್ಧವೇ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

"ನಾನು ಕಾನೂನನ್ನು ಗೌರವಿಸುವ ವ್ಯಕ್ತಿ, ಆದರೆ ಅಶೋಕ್ ಖರತ್ ಮಾಡಿದ ಕೆಲಸಗಳನ್ನು ನೋಡಿದ್ರೆ ಮನುಷ್ಯನಿಗೆ ಸಿಟ್ಟು ಬರುವುದು ಸಹಜ. ಇವನಿಗೆ ಯಾವುದೇ ಕಾನೂನು ವಿನಾಯ್ತಿ ಸಿಗಬಾರದು. ಕೋರ್ಟ್ ವಿಚಾರಣೆ, ಕಾನೂನು ಪ್ರಕ್ರಿಯೆ ಅನ್ನೋದಕ್ಕಿಂತ ಮಿಗಿಲಾಗಿ, ಇಂತಹ ನೀಚ ವ್ಯಕ್ತಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು," ಎಂದು ಮುಂಗಂಟಿವಾರ್ ಖಡಕ್ಕಾಗಿ ನುಡಿದಿದ್ದಾರೆ.

ಅವರು ಮುಂದುವರಿಸುತ್ತಾ, "ಇವನು ಛತ್ರಪತಿ ಶಿವಾಜಿ ಮಹಾರಾಜರ ನಾಡಿಗೆ ಮತ್ತು ನಮ್ಮ ಸಂಸ್ಕೃತಿಗೆ ಅಪಮಾನ ಮಾಡಿದ್ದಾನೆ. ಮಹಿಳೆಯರಿಗೆ ಗೌರವ ಕೊಡದ ಇಂತಹ ವ್ಯಕ್ತಿಗಳು ಬದುಕುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಇವನಿಗೆ ನೀಡುವ ಶಿಕ್ಷೆ ಬೇರೆಯವರಿಗೂ ಒಂದು ಪಾಠವಾಗಬೇಕು," ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಮಣ್ಣಿನಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ ಮತ್ತು ಶಾಹು ಮಹಾರಾಜ್ ಅವರಂತಹ ಸುಧಾರಕರ ಆದರ್ಶಗಳನ್ನು ನಾವು ಪಾಲಿಸುತ್ತಿದ್ದೇವೆ. ಶಾಲೆಗಳಲ್ಲಿ ಇಂತಹ ಮಹನೀಯರ ಬೋಧನೆಗಳನ್ನು ನೀಡಲಾಗುತ್ತಿದ್ದರೂ, ಧರ್ಮದ ಹೆಸರಿನಲ್ಲಿ ಇಂತಹ ಅನಾಚಾರಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮುಂಗಂಟಿವಾರ್ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳು ಸಮಾಜದ ಮೌಲ್ಯಗಳಿಗೆ ಮಾಡುತ್ತಿರುವ ಅವಮಾನ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ, ರೂಪಾಲಿ ಚಕಂಕರ್ ಅವರು ಮಹಿಳಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಚರ್ಚೆಯ ಬಗ್ಗೆಯೂ ಸುಧೀರ್ ಮುಂಗಂಟಿವಾರ್ ಮಾತನಾಡಿದ್ದಾರೆ. ಇಂತಹ ಗಂಭೀರ ಆರೋಪಗಳು ಕೇಳಿಬಂದಾಗ ಅಥವಾ ಪ್ರಕರಣಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ರಾಜೀನಾಮೆ ನೀಡುವುದು ಸೂಕ್ತ. ಇದು ತನಿಖೆಯ ಮೇಲೆ ಯಾವುದೇ ಪ್ರಭಾವ ಬೀರದಂತೆ ನೋಡಿಕೊಳ್ಳಲು ಸಹಾಯಕವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಅಶೋಕ್ ಖರತ್ ಪ್ರಕರಣ ಈಗ ಮಹಾರಾಷ್ಟ್ರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ನಿಜವಾದ ದೇವಮಾನವ ಯಾರು ಎಂಬುದು ಈಗ ಪ್ರಶ್ನೆಯಾಗಿದೆ. ಅಶೋಕ್ ಖರತ್‌ನಂತಹ ಪಾಪಿಗಳಿಗೆ ಕಾನೂನು ಯಾವ ರೀತಿಯ ಶಿಕ್ಷೆಯನ್ನು ವಿಧಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.