ಬೆಂಗಳೂರು: ರಾಜ್ಯದಲ್ಲಿ ಗುತ್ತಿಗೆ ಗೋಲ್ಮಾಲ್ ಕುರಿತಂತೆ ಸ್ಫೋಟಕ ಆಡಿಯೋ ಹೊರಬಂದಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಆಡಿಯೋದಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೇ ಭ್ರಷ್ಟಾಚಾರದ ಡೀಲ್ಗಳಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಕಾಂಟ್ರ್ಯಾಕ್ಟರ್ ಅಸೋಸಿಯೇಷನ್ ವಿರುದ್ಧವೇ ಹೊರಬಂದಿರುವ ಈ ಆಡಿಯೋದಲ್ಲಿ, ಸರ್ಕಾರ ಮತ್ತು ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದವರೇ, ಗುತ್ತಿಗೆ ಹಣದಲ್ಲಿ ಕಮೀಷನ್ ವಸೂಲಿಗೆ ಕುಮ್ಮಕ್ಕು ನೀಡಿರುವುದು ಬಹಿರಂಗವಾಗಿದೆ. “ಹೇಳೋದು ಆಚಾರ, ತಿನ್ನೋದು ಬದನೆಕಾಯಿ” ಎಂಬಂತೆ, ಸಂಘದ ಪದಾಧಿಕಾರಿಗಳ ನಡೆ ಗುತ್ತಿಗೆದಾರರ ಹೊಟ್ಟೆಯ ಮೇಲೆ ಹೊಡೆಯುತ್ತಿರುವಂತಾಗಿದೆ.
ಆಡಿಯೋದಲ್ಲಿ ಗೌರವಾಧ್ಯಕ್ಷ ಜಗನ್ನಾಥ್ ಜಿ. ಶಿವಾಜಿ ಹಾಗೂ ನಿರ್ದೇಶಕ ಎಚ್.ಆರ್. ಚಿಂಚಳಿ ಗುತ್ತಿಗೆದಾರರಿಗೆ ಧಮಕಿ ನೀಡಿರುವುದು ಬಹಿರಂಗವಾಗಿದೆ. ಸರ್ಕಾರಿ ಯೋಜನೆಗಳ ಟೆಂಡರ್ಗಳಲ್ಲಿ ಬಿಡ್ ಮಾಡಿದ ಗುತ್ತಿಗೆದಾರರಿಗೆ, “ಬಿಡ್ ವಾಪಸ್ ಪಡೆಯದಿದ್ದರೆ ಸಮಸ್ಯೆ” ಎಂದು ಬೆದರಿಕೆ ಹಾಕಿರುವುದಾಗಿ ಆಡಿಯೋದಲ್ಲಿ ಕೇಳಿಬಂದಿದೆ. ಬಿಡ್ ವಾಪಸ್ ಪಡೆಯಬೇಕೆಂದರೆ ಗುತ್ತಿಗೆ ಹಣದಲ್ಲಿ ಶೇ.3 ಕಮೀಷನ್ ನೀಡಬೇಕೆಂದು ಒತ್ತಾಯಿಸಿರುವುದು ಆಡಿಯೋದಲ್ಲಿ ಸ್ಪಷ್ಟವಾಗಿದೆ.
ಲೋಕೋಪಯೋಗಿ, ಇಂಧನ, ನಗರಾಭಿವೃದ್ಧಿ, ನೀರಾವರಿ ಸೇರಿದಂತೆ ಹಲವು ಇಲಾಖೆಗಳ ಟೆಂಡರ್ಗಳಲ್ಲಿ ಈ ರೀತಿಯ ಗೋಲ್ಮಾಲ್ ನಡೆಯುತ್ತಿದೆ ಎಂಬ ಆರೋಪಗಳು ಗುತ್ತಿಗೆದಾರರಲ್ಲಿ ಆತಂಕ ಮೂಡಿಸಿವೆ. ಬಡ ಗುತ್ತಿಗೆದಾರರಿಂದಲೇ ಕಮೀಷನ್ ವಸೂಲಿ ಮಾಡುತ್ತಿರುವ ಸಂಘದ ಪದಾಧಿಕಾರಿಗಳ ನಡೆ, ಸಂಘದ ನೈತಿಕತೆ ಮತ್ತು ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆ ಎಬ್ಬಿಸಿದೆ.
ಈ ಆಡಿಯೋ ವೈರಲ್ ಆಗುತ್ತಿದ್ದಂತೆಯೇ, ಗುತ್ತಿಗೆದಾರರ ಸಂಘದ ವಿರುದ್ಧ ಅನುಮಾನಗಳು ಹೆಚ್ಚಾಗಿವೆ. “ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಸಂಘದ ಪದಾಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಗುತ್ತಿಗೆದಾರರು ಆಗ್ರಹಿಸಿದ್ದಾರೆ.
ಈ ಘಟನೆ ರಾಜ್ಯದ ರಾಜಕೀಯ ವಲಯದಲ್ಲಿ ಭ್ರಷ್ಟಾಚಾರದ ಚರ್ಚೆಗೆ ಹೊಸ ತಿರುವು ನೀಡಿದ್ದು, ಸರ್ಕಾರದ ಯೋಜನೆಗಳ ಪಾರದರ್ಶಕತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.