Mar 27, 2026 Languages : ಕನ್ನಡ | English

ಸದನದಲ್ಲಿ 'ಪುಡಿ ರೌಡಿ' ಕಿರಿಕ್ - ಶಾಸಕ ಮುನಿರತ್ನ ವಿರುದ್ಧ ಕೆಂಡಾಮಂಡಲವಾದ ಡಿಸಿಎಂ ಡಿಕೆ ಶಿವಕುಮಾರ್!!

ಬೆಂಗಳೂರಿನ ವಿಧಾನಸಭೆ ಅಂದ್ರೆ ಅಲ್ಲಿ ಗಂಭೀರ ಚರ್ಚೆ ನಡೆಯಬೇಕು ಅಂದುಕೊಂಡರೆ ತಪ್ಪು. ಇಂದು ನಡೆದಿದ್ದೇ ಬೇರೆ! ಬೆಂಗಳೂರು ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುವಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಮುನಿರತ್ನ ನಡುವೆ ನಡೆದ ಕಿತ್ತಾಟ ನೋಡಿದರೆ, ಇದು ಅಸೆಂಬ್ಲಿನಾ ಅಥವಾ ಯಾವುದೋ ಸಿನಿಮಾ ಶೂಟಿಂಗಾ ಅನ್ನೋ ಅನುಮಾನ ಬರುವಂತಿತ್ತು.

ವಿಧಾನಸಭೆಯೋ ಅಥವಾ ಸಿನಿಮಾ ಶೂಟಿಂಗೋ? ಡಿಕೆಶಿ-ಮುನಿರತ್ನ ನಡುವೆ 'ತಾಕತ್' ವಾರ್!
ವಿಧಾನಸಭೆಯೋ ಅಥವಾ ಸಿನಿಮಾ ಶೂಟಿಂಗೋ? ಡಿಕೆಶಿ-ಮುನಿರತ್ನ ನಡುವೆ 'ತಾಕತ್' ವಾರ್!

ವಿಷಯ ಸಿಂಪಲ್ ಆಗಿತ್ತು. ಬೆಂಗಳೂರು ನಗರದ ಅಭಿವೃದ್ಧಿ ಬಗ್ಗೆ ಡಿಕೆಶಿ ಸುದೀರ್ಘವಾಗಿ ಉತ್ತರ ಕೊಡುತ್ತಿದ್ದರು. ಅಷ್ಟರಲ್ಲಿ ಮುನಿರತ್ನ ಎದ್ದು ನಿಂತು, "ನನಗೂ ಮಾತನಾಡಲು ಅವಕಾಶ ಕೊಡಿ" ಅಂತ ಸ್ಪೀಕರ್ ಖಾದರ್ ಅವರನ್ನ ಕೇಳಿದರು. ಆದರೆ ಸ್ಪೀಕರ್ ಅದಕ್ಕೆ 'ನೋ' ಅಂದರು. ಅಷ್ಟೇ, ಅಲ್ಲಿಗೆ ಶುರುವಾಯ್ತು ನೋಡಿ ಅಸಲಿ ಆಟ!

ಸ್ಪೀಕರ್ ಅವಕಾಶ ಕೊಡದಿದ್ದಕ್ಕೆ ರೊಚ್ಚಿಗೆದ್ದ ಮುನಿರತ್ನ ನೇರವಾಗಿ ಡಿಕೆಶಿ ಕಡೆ ತಿರುಗಿ, "ನಿಮಗೆ ಉತ್ತರ ಕೊಡಲು ತಾಕತ್ ಇಲ್ಲ" ಅಂತ ಸವಾಲು ಹಾಕಿದರು. "ನನಗೆ ಶಕ್ತಿ ಇರೋದಕ್ಕೆ ನಾನು ಇಲ್ಲಿ ಕೂತಿದ್ದೇನೆ, ತಾಕತ್ ಇದ್ರೆ ಉತ್ತರ ಕೊಡಿ" ಅಂತ ಪದೇ ಪದೇ ರೇಗಿಸಿದರು.

ಡಿಕೆಶಿ ಫುಲ್ ಗರಂ: "ನೀನೊಬ್ಬ ಪುಡಿ ರೌಡಿ!"

ಮುನಿರತ್ನ ಅವರ 'ತಾಕತ್' ಡೈಲಾಗ್ ಕೇಳಿ ಡಿಕೆಶಿ ಅವರಿಗೆ ಫುಲ್ ಸಿಟ್ಟು ಬಂತು. ಅವರು ಸುಮ್ಮನೆ ಇರುತ್ತಾರಾ? ಮೈಕ್ ಹಿಡಿದು ಮುನಿರತ್ನ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. "ನಿನ್ನಂತಹ ಪುಡಿ ರೌಡಿಗೆ ನಾನು ಹೆದರಲ್ಲ. ನೀನೊಬ್ಬ ರೇ ಪಿಸ್ಟ್, ಸೈಕೋ" ಅಂತ ಕಿಡಿಕಾರಿದರು. "ನಾನು ನನ್ನ ಯೋಗ್ಯತೆ, ತಾಕತ್ ತೋರಿಸಬೇಕಾ?" ಅಂತ ಘರ್ಜಿಸಿದರು.

ಸದನದಲ್ಲಿ ಗದ್ದಲ, ಬಾವಿಗಿಳಿದ ಕಾಂಗ್ರೆಸ್ ಸದಸ್ಯರು

ಡಿಕೆಶಿ ಮೇಲೆ ಮುನಿರತ್ನ ಸವಾರಿ ಮಾಡುತ್ತಿರುವುದನ್ನು ನೋಡಿ ಕಾಂಗ್ರೆಸ್ ಸದಸ್ಯರು ಸುಮ್ಮನೆ ಕೂರಲಿಲ್ಲ. "ಅತ್ಯಾಚಾರ ಮತ್ತು ಜಾತಿ ನಿಂದನೆ ಆರೋಪ ಹೊತ್ತಿರುವ ಮುನಿರತ್ನ ಸದನದಲ್ಲಿ ಇರಬಾರದು, ಅವರನ್ನು ಹೊರಗೆ ಹಾಕಿ" ಅಂತ ಕೂಗುತ್ತಾ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇತ್ತ ಬಿಜೆಪಿ ಸದಸ್ಯರು ಮುನಿರತ್ನ ಪರವಾಗಿ ನಿಂತಿದ್ದರಿಂದ ಸದನವೆಲ್ಲ ರಣರಂಗದಂತಾಯಿತು.

ಸ್ಪೀಕರ್ ಖಾದರ್ ಬೇಸರ: "ಇದು ಸದನಕ್ಕೆ ಕಪ್ಪು ಚುಕ್ಕೆ"

ಇಷ್ಟೆಲ್ಲಾ ಹೈಡ್ರಾಮಾ ನಡೆದ ಮೇಲೆ ಸ್ಪೀಕರ್ ಯು.ಟಿ. ಖಾದರ್ ಅವರು ಪರಿಸ್ಥಿತಿ ತಣ್ಣಗೆ ಮಾಡಿದರು. "ಇಂತಹ ಘಟನೆಗಳು ನಡೆಯುವುದು ನಮ್ಮ ಸದನಕ್ಕೆ ಕಪ್ಪು ಚುಕ್ಕೆ. ಇಲ್ಲಿ ತಾಕತ್ ತೋರಿಸೋಕೆ ಬರಬೇಡಿ, ತಾಕತ್ ಇದ್ದವರೇ ಈ ಸದನಕ್ಕೆ ಆರಿಸಿ ಬಂದಿರುತ್ತಾರೆ. ಇಂತಹ ಮಾತುಗಳು ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುತ್ತವೆ" ಅಂತ ಇಬ್ಬರಿಗೂ ಸರಿಯಾಗಿ ಕ್ಲಾಸ್ ತಗೊಂಡರು. ಅಷ್ಟೇ ಅಲ್ಲ, ಅಸಭ್ಯ ಮಾತುಗಳನ್ನೆಲ್ಲ ಸದನದ ದಾಖಲೆಯಿಂದ ತೆಗೆದುಹಾಕಲು ಆದೇಶಿಸಿದರು.

ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕಿದ್ದ ಜಾಗದಲ್ಲಿ 'ವೈಯಕ್ತಿಕ ನಿಂದನೆ' ಮತ್ತು 'ತಾಕತ್' ಪ್ರದರ್ಶನ ಜೋರಾಗಿ ನಡೆದು, ಸದನದ ಗಾಂಭೀರ್ಯವೇ ಗಾಳಿಗೆ ತೂರಿದಂತಾಗಿತ್ತು.

Latest News