ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ನಡೆಯುವ ಹಿಂಸೆ, ಬಹಿಷ್ಕಾರ ಮತ್ತು ಮರ್ಯಾದಾ ಹತ್ಯೆಗಳಂತಹ ಘೋರ ಕೃತ್ಯಗಳನ್ನು ತಡೆಯಲು ಕರ್ನಾಟಕ ಸರ್ಕಾರ ಈಗ ಭದ್ರವಾದ ಕಾನೂನು ತರಲು ಮುಂದಾಗಿದೆ. ವಿಧಾನಸಭೆಯಲ್ಲಿ ಮಂಡನೆಯಾಗಿರುವ ಈ ಹೊಸ ವಿಧೇಯಕವು ಅಂತರ್ಜಾತಿ ವಿವಾಹವಾಗುವ ದಂಪತಿಗಳಿಗೆ ಹೆಚ್ಚಿನ ಕಾನೂನು ಬಲ ಮತ್ತು ಸುರಕ್ಷತೆಯನ್ನು ನೀಡಲಿದೆ.
ಜಾತಿ ಶ್ರೇಣೀಕರಣ ಮತ್ತು ಹಳೆಯ ಸಂಪ್ರದಾಯಗಳ ಹೆಸರಿನಲ್ಲಿ ದಂಪತಿಗಳಿಗೆ ನೀಡುವ ದೈಹಿಕ ಹಾಗೂ ಮಾನಸಿಕ ಕಿರುಕುಳವನ್ನು ತಪ್ಪಿಸುವುದು ಈ ಕಾಯ್ದೆಯ ಮೂಲ ಗುರಿ. ಇದು ಕೇವಲ ವಿವಾಹಿತರನ್ನು ಮಾತ್ರವಲ್ಲದೆ, ಅವರಿಗೆ ಸಹಾಯ ಮಾಡುವವರನ್ನೂ ರಕ್ಷಿಸುತ್ತದೆ.
ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರಕ್ಕೆ ನಿಷೇಧ:
ಅಂತರ್ಜಾತಿ ಮದುವೆಯಾದ ಕಾರಣಕ್ಕೆ ದಂಪತಿಗಳನ್ನು ಅಥವಾ ಅವರ ಕುಟುಂಬವನ್ನು ಗ್ರಾಮದಿಂದ ಹೊರಹಾಕುವುದು, ಸಾಮಾಜಿಕವಾಗಿ ಬಹಿಷ್ಕರಿಸುವುದು ಅಥವಾ ಆರ್ಥಿಕವಾಗಿ ತೊಂದರೆ ಕೊಡುವುದು ಇನ್ನು ಮುಂದೆ ಕಾನೂನುಬಾಹಿರ.
ಮದುವೆಯಾಗುವ ಇಬ್ಬರೂ ವ್ಯಕ್ತಿಗಳು ವಯಸ್ಕರಾಗಿದ್ದರೆ (Major), ಅವರ ವಿವಾಹಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯವಲ್ಲ. ಅವರ ಕುಟುಂಬಸ್ಥರು ಮದುವೆಗೆ ಅಡ್ಡಿಪಡಿಸುವಂತಿಲ್ಲ.
ಅಂತರ್ಜಾತಿ ವಿವಾಹವಾದ ಕಾರಣಕ್ಕೆ ವ್ಯಕ್ತಿಯನ್ನು ಕುಟುಂಬದ ಆಸ್ತಿಯಿಂದ ವಂಚಿಸುವಂತಿಲ್ಲ. ಅಲ್ಲದೆ, ಅವರಿಗೆ ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಿಸುವುದು ಅಥವಾ ಕೆಲಸದ ಸ್ಥಳದಲ್ಲಿ ಕಿರುಕುಳ ನೀಡುವುದು ಶಿಕ್ಷಾರ್ಹ ಅಪರಾಧ.
ಹಿಂಸೆ ಮತ್ತು ಕಿರುಕುಳಕ್ಕೆ ಕಠಿಣ ಶಿಕ್ಷೆ:
ದಂಪತಿಯನ್ನು ಬಲವಂತವಾಗಿ ಬೇರ್ಪಡಿಸುವುದು ಅಥವಾ ಕಿಡ್ನ್ಯಾಪ್ ಮಾಡುವುದು ಅಪರಾಧ.
ಲೈಂಗಿಕ ಹಿಂಸೆ ಅಥವಾ ಬಲವಂತದ ಗರ್ಭಪಾತಕ್ಕೆ ಒತ್ತಡ ಹೇರುವುದು ಕಾನೂನುಬಾಹಿರ.
ದಂಪತಿಗೆ ಬೆದರಿಕೆ ಹಾಕಿದರೆ 5 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಬಹುದು.
ಒಂದು ವೇಳೆ ಮರ್ಯಾದಾ ಹತ್ಯೆಯಂತಹ ಕೃತ್ಯ ನಡೆದರೆ, ತಪ್ಪಿತಸ್ಥರಿಗೆ ಕನಿಷ್ಠ 5 ವರ್ಷ ಜೈಲು ಮತ್ತು ದಂಡ ವಿಧಿಸಲಾಗುತ್ತದೆ. ದಂಪತಿಗೆ ಗಾಯಗೊಳಿಸಿದರೆ 3 ವರ್ಷ ಜೈಲು ಮತ್ತು 3 ಲಕ್ಷ ರೂ. ದಂಡದ ನಿಬಂಧನೆ ಇದೆ.
‘ಇವನಮ್ಮವ ಇವ ನಮ್ಮವ’ ಎಂಬ ಈ ವಿಧೇಯಕವು ಕಾಯ್ದೆಯಾಗಿ ಜಾರಿಗೆ ಬಂದಲ್ಲಿ, ಜಾತಿ ಪದ್ಧತಿಯ ಕಟ್ಟುಪಾಡುಗಳಿಂದ ಹೊರಬಂದು ಮದುವೆಯಾಗುವ ಯುವಜೋಡಿಗಳಿಗೆ ಸರ್ಕಾರವೇ ಕವಚವಾಗಿ ನಿಲ್ಲಲಿದೆ. ಇದು ಸಮಾಜದಲ್ಲಿ ಸಮಾನತೆ ಮತ್ತು ಪ್ರೀತಿಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.