ಮೊಬೈಲ್ ಗೇಮ್ ಎಂಬುದು ಇಂದಿನ ದಿನಗಳಲ್ಲಿ ಕೇವಲ ಹವ್ಯಾಸವಾಗಿ ಉಳಿದಿಲ್ಲ, ಅದೊಂದು ಹೆಮ್ಮಾರಿಯಾಗಿ ಮಕ್ಕಳ ಜೀವವನ್ನೇ ಬಲಿ ಪಡೆಯುತ್ತಿದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಹುಬ್ಬಳ್ಳಿಯ ಉದಯನಗರದಲ್ಲಿ ನಡೆದ ಈ ದಾರುಣ ಘಟನೆ. ಕೇವಲ 14 ವರ್ಷದ ಬಾಲಕನೊಬ್ಬ ಮೊಬೈಲ್ ಸಿಗಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಬಾಲಕನನ್ನು ಸಮರ್ಥ್ (14) ಎಂದು ಗುರುತಿಸಲಾಗಿದೆ. ಈ ಬಾಲಕನಿಗೆ 'ಫ್ರೀ ಫೈರ್' (Free Fire) ಎಂಬ ಆನ್ಲೈನ್ ಗೇಮ್ ಆಡುವ ವಿಪರೀತ ಚಟವಿತ್ತು. ಓದು-ಬರಹ ಬಿಟ್ಟು ಹಗಲು ರಾತ್ರಿ ಮೊಬೈಲ್ನಲ್ಲೇ ಮುಳುಗಿದ್ದ ಮಗನ ಸ್ಥಿತಿ ನೋಡಿ ಪೋಷಕರು ಕಂಗಾಲಾಗಿದ್ದರು. ಸಮರ್ಥನ ಮೊಬೈಲ್ ಚಟವನ್ನು ಬಿಡಿಸಲು ತಂದೆ-ತಾಯಿ ಪದೇ ಪದೇ ಬುದ್ಧಿ ಹೇಳುತ್ತಲೇ ಇದ್ದರು.
ನಿನ್ನೆ ರಾತ್ರಿ ಕೂಡ ತಾಯಿ ಮಗನಿಗೆ, "ಜಾಸ್ತಿ ಗೇಮ್ ಆಡಬೇಡ, ಮೊಬೈಲ್ ಬಿಟ್ಟು ಓದುವ ಕಡೆ ಗಮನ ಕೊಡು" ಎಂದು ಸ್ವಲ್ಪ ಗದರಿಸಿದ್ದಾರೆ. ಅಮ್ಮ ಬುದ್ಧಿ ಹೇಳಿದ್ದಕ್ಕೆ ಅತಿಯಾಗಿ ನೊಂದುಕೊಂಡ ಬಾಲಕ, ಕೋಣೆಗೆ ಹೋಗಿ ಅಮ್ಮನ ಸೀರೆಯಿಂದಲೇ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾನೆ. ಅಮ್ಮ ಅದೇ ಸೀರೆಯುಟ್ಟು ಮಗನಿಗೆ ಉಣಬಡಿಸಬೇಕಿತ್ತು, ಆದರೆ ಮಗ ಅದೇ ಸೀರೆಯನ್ನೇ ಸಾವಿನ ಕುಣಿಕೆಯನ್ನಾಗಿ ಮಾಡಿಕೊಂಡಿದ್ದು ವಿಧಿಯ ವೈಪರೀತ್ಯ.
ಪೊಲೀಸ್ ಭೇಟಿ ಮತ್ತು ತನಿಖೆ
ವಿಷಯ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಅವರು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆಯ ಪರಿಶೀಲನೆ ನಡೆಸಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಇಡೀ ಬಡಾವಣೆ ಮೌನಕ್ಕೆ ಶರಣಾಗಿದೆ.
ಸರ್ಕಾರ ಮತ್ತು ಶಾಲೆಗಳ ಎಚ್ಚರಿಕೆ
ಮಕ್ಕಳು ಮೊಬೈಲ್ ಚಟಕ್ಕೆ ದಾಸರಾಗುತ್ತಿರುವುದನ್ನು ಕಂಡು ರಾಜ್ಯ ಸರ್ಕಾರ ಈಗಾಗಲೇ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬಳಸದಂತೆ ನಿರ್ಬಂಧ ಹೇರಿದೆ. ಶಾಲಾ ಪಠ್ಯಗಳನ್ನು ಅಥವಾ ಹೋಂ ವರ್ಕ್ಗಳನ್ನು ವಾಟ್ಸಾಪ್ ಮೂಲಕ ಕಳುಹಿಸಬಾರದು ಎಂದು ಶಾಲೆಗಳಿಗೂ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಆದರೂ ಮಕ್ಕಳು ಪೋಷಕರ ಮೊಬೈಲ್ ಕಿತ್ತುಕೊಂಡು ಗೇಮ್ ಆಡುತ್ತಿರುವುದು ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ.
ಪೋಷಕರೇ ಗಮನಿಸಿ.. ನಿಮ್ಮ ಮಕ್ಕಳ ಮೇಲೆ ಕಣ್ಣಿರಲಿ!
ಇಂದಿನ ಮಕ್ಕಳು ಸಣ್ಣ ವಿಷಯಕ್ಕೂ ಬೇಸರ ಮಾಡಿಕೊಂಡು ಜೀವ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಿದ್ದಾರೆ. ಮೊಬೈಲ್ ಬದಲಿಗೆ ಅವರಿಗೆ ಮೈದಾನದಲ್ಲಿ ಆಡುವ ಆಟಗಳು, ಕಥೆ ಪುಸ್ತಕಗಳು ಅಥವಾ ಇತರ ಹವ್ಯಾಸಗಳನ್ನು ರೂಢಿಸಬೇಕಿದೆ. ಮನೆಯಲ್ಲಿ ಅವರೊಂದಿಗೆ ಹೆಚ್ಚು ಸಮಯ ಕಳೆಯುವುದು ಇಂದಿನ ತುರ್ತು ಅಗತ್ಯವಾಗಿದೆ.