ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ಯುವಕನ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಿದ್ದು, ಘಟನೆಯ ಹಿಂದಿನ ಆಘಾತಕಾರಿ ಸತ್ಯಗಳು ಹೊರಬಂದಿವೆ. ಬಾಲ್ಯದ ಗೆಳೆಯನನ್ನೇ ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೂಖಹಳ್ಳಿ ಗ್ರಾಮದ ನಂಜುಂಡಸ್ವಾಮಿ (23) ಎಂಬ ಯುವಕ ಮಾರ್ಚ್ 1 ರಂದು ನಿಗೂಢವಾಗಿ ಕೊಲೆಯಾಗಿದ್ದ. ಗುಂಡ್ಲುಪೇಟೆ ಪಟ್ಟಣದ ದೊಡ್ಡಕೆರೆ ಏರಿಯ ಬಳಿ ಆತನ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಯಾರೋ ಅಪರಿಚಿತರು ಮಾಡಿದ ಕೃತ್ಯ ಎಂದು ಭಾವಿಸಲಾಗಿತ್ತಾದರೂ, ಪೊಲೀಸರ ಚಾಣಾಕ್ಷ ತನಿಖೆಯಿಂದ ಕೊಲೆಗಾರ ಬೇರೆ ಯಾರೂ ಅಲ್ಲ, ಆತನ ಆಪ್ತ ಸ್ನೇಹಿತ ಮತ್ತು ಸೋದರ ಸಂಬಂಧಿಯಾದ ಅಜಯ್ (ಅಲಿಯಾಸ್ ಪ್ರಮೋದ್) ಎಂಬುದು ದೃಢಪಟ್ಟಿದೆ.
ಸ್ನೇಹಿತನ ಸಹೋದರಿಯೊಂದಿಗೆ ಸಂಬಂಧ: ಕೊಲೆಯಾದ ನಂಜುಂಡಸ್ವಾಮಿ, ಆರೋಪಿ ಅಜಯ್ನ ಸಹೋದರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು: ಅಜಯ್ ಸಹೋದರಿಗೆ ಈಗಾಗಲೇ ಮದುವೆಯಾಗಿದ್ದರೂ, ನಂಜುಂಡಸ್ವಾಮಿ ಜೊತೆಗಿನ ಒಡನಾಟ ಮುಂದುವರಿದಿತ್ತು. ಒಮ್ಮೆ ಇವರಿಬ್ಬರು ಖಾಸಗಿ ಕ್ಷಣದಲ್ಲಿದ್ದಾಗ ಆಕೆಯ ಪತಿಯ ಕೈಗೇ ಸಿಕ್ಕಿಬಿದ್ದಿದ್ದರು.
ಕುಟುಂಬದ ಗೌರವದ ಪ್ರಶ್ನೆ: ಈ ವಿಚಾರ ಅಜಯ್ನ ಕಿವಿಗೆ ಬಿದ್ದಾಗ ಆತ ತೀವ್ರ ಆಕ್ರೋಶಗೊಂಡಿದ್ದ. ತನ್ನ ಸ್ನೇಹಿತನೇ ತನ್ನ ಕುಟುಂಬದ ಗೌರವಕ್ಕೆ ಧಕ್ಕೆ ತರುತ್ತಿದ್ದಾನೆ ಎಂಬ ಸಿಟ್ಟಿನಿಂದ ಆತನನ್ನು ಮುಗಿಸಲು ಸಂಚು ರೂಪಿಸಿದ್ದ.
ಸಂಚು ಮತ್ತು ಹತ್ಯೆ ನಡೆದ ರೀತಿ
ಮಾರ್ಚ್ 1 ರಂದು ಕೆಲಸ ಮುಗಿಸಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ನಂಜುಂಡಸ್ವಾಮಿಯನ್ನು ಅಜಯ್ ಪಾರ್ಟಿ ಮಾಡುವ ನೆಪದಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದ. ಇಬ್ಬರೂ ಜೊತೆಯಾಗಿ ಮದ್ಯ ಸೇವಿಸಿದ್ದಾರೆ. ನಂಜುಂಡಸ್ವಾಮಿ ಕಂಠಪೂರ್ತಿ ಕುಡಿದು ಪ್ರಜ್ಞೆ ತಪ್ಪುವ ಹಂತಕ್ಕೆ ತಲುಪಿದಾಗ, ಅಜಯ್ ತನ್ನ ಬಳಿಯಿದ್ದ ಚಾಕುವಿನಿಂದ ಆತನ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ.
ಕೊಲೆಯಾದ ನಂತರ ತಲೆಮರೆಸಿಕೊಂಡಿದ್ದ ಅಜಯ್ನನ್ನು ಗುಂಡ್ಲುಪೇಟೆ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಾಲ್ಯದಿಂದಲೂ ಜೊತೆಯಾಗಿ ಬೆಳೆದ ಗೆಳೆಯರೇ ಹೀಗೆ ಅಕ್ರಮ ಸಂಬಂಧದ ವಿಚಾರಕ್ಕಾಗಿ ಬದ್ಧ ವೈರಿಗಳಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.