May 6, 2026 Languages : ಕನ್ನಡ | English

"ಅದು ಸಿಎಂ ಪ್ರಿಯಾರಿಟಿ" - ರಾಜಕೀಯ ಕಾರ್ಯದರ್ಶಿಗಳ ಕೈಬಿಟ್ಟ ವಿಚಾರಕ್ಕೆ ಡಿಕೆಶಿ ಕೊಟ್ಟ ಖಡಕ್ ಸ್ಪಷ್ಟನೆ!!

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ರಾಜಕೀಯದ ಹಲವು ಬಿಸಿಬಿಸಿ ವಿಚಾರಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಮುಸ್ಲಿಂ ನಾಯಕರ ಸಸ್ಪೆಂಡ್ ವಿಚಾರದಿಂದ ಹಿಡಿದು, ದೆಹಲಿ ಪ್ರವಾಸ ಹಾಗೂ ತಮಿಳುನಾಡಿನ ಮೈತ್ರಿ ರಾಜಕಾರಣದವರೆಗೆ ಡಿಕೆಶಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಬುಲಾವ್ ಸುದ್ದಿಗೆ ಬ್ರೇಕ್ ಹಾಕಿದ ಉಪಮುಖ್ಯಮಂತ್ರಿ
ಬುಲಾವ್ ಸುದ್ದಿಗೆ ಬ್ರೇಕ್ ಹಾಕಿದ ಉಪಮುಖ್ಯಮಂತ್ರಿ

1. ಮುಸ್ಲಿಂ ನಾಯಕರ ವಜಾ: "ಇದು ಸಿಎಂ ನಿರ್ಧಾರ"

ಪಕ್ಷದಿಂದ ಸಸ್ಪೆಂಡ್ ಆಗಿದ್ದ ಮುಸ್ಲಿಂ ನಾಯಕರನ್ನು ಮತ್ತೆ ವಾಪಸ್ ತೆಗೆದುಕೊಳ್ಳುವ ಬಗ್ಗೆ ಕೇಳಲಾದ ಪ್ರಶ್ನೆಗೆ ಡಿಕೆಶಿ ಬಹಳ ಜಾಣ್ಮೆಯ ಉತ್ತರ ನೀಡಿದರು. "ನಾನು ಈ ಬಗ್ಗೆ ಏನೂ ಮಾತನಾಡಲ್ಲ, ಇದೆಲ್ಲಾ ಪಾರ್ಟಿ ತೆಗೆದುಕೊಂಡಿರುವ ತೀರ್ಮಾನ" ಎಂದು ಹೇಳುವ ಮೂಲಕ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಎಸೆದರು.

ವಿಶೇಷವಾಗಿ ಪೊಲಿಟಿಕಲ್ ಸೆಕ್ರೆಟರಿ ಹುದ್ದೆಯಿಂದ ಕೈಬಿಟ್ಟ ವಿಚಾರವಾಗಿ ಮಾತನಾಡಿದ ಅವರು, "ಒಬ್ಬ ರಾಜಕೀಯ ಕಾರ್ಯದರ್ಶಿಯನ್ನು ನೇಮಿಸಿಕೊಳ್ಳುವುದು ಅಥವಾ ಕೈಬಿಡುವುದು ಸಂಪೂರ್ಣವಾಗಿ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು (CM Priority). ಸಿಎಂ ಅವರೇ ಇವರನ್ನು ಆಯ್ಕೆ ಮಾಡಿದ್ದರು, ಈಗ ಅವರೇ ಕೈಬಿಟ್ಟಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ಪೂರಕ ಮಾಹಿತಿ ಮತ್ತು ಫೀಡ್‌ಬ್ಯಾಕ್ ಅನ್ನು ಅಧಿಕಾರಿಗಳು ಹಾಗೂ ಪಕ್ಷದ ಮೂಲಗಳು ಮುಖ್ಯಮಂತ್ರಿಗಳಿಗೆ ನೀಡಿವೆ," ಎಂದರು.

ಕೆಲಸ ಮಾಡದವರಿಗೆ ಜಾಗವಿಲ್ಲ ಎಂಬ ಸಂದೇಶ ರವಾನಿಸಿದ ಡಿಕೆಶಿ, "ಮುಖ್ಯಮಂತ್ರಿಗಳು ಕೊಟ್ಟ ಜವಾಬ್ದಾರಿಯನ್ನು ಅವರು ಸರಿಯಾಗಿ ನಿಭಾಯಿಸಲಿಲ್ಲ, ಆ ಕಾರಣಕ್ಕಾಗಿಯೇ ಅವರನ್ನು ಡ್ರಾಪ್ ಮಾಡಲಾಗಿದೆ. ಇನ್ನು ಜಬ್ಬಾರ್ ಅವರ ವಿಚಾರಕ್ಕೆ ಬಂದರೆ, ಅವರು ಸ್ವತಃ ರಾಜೀನಾಮೆ ನೀಡಿದ್ದರು, ನಾವು ಅದನ್ನು ಸ್ವೀಕರಿಸಿದ್ದೇವೆ ಅಷ್ಟೇ," ಎಂದು ಸ್ಪಷ್ಟಪಡಿಸಿದರು.

2. ದೆಹಲಿ ಪ್ರವಾಸ: "ಕರೆ ಬಂದಾಗ ಹೋಗ್ತೀವಿ"

ಮುಂದಿನ ವಾರ ಸಿಎಂ ಮತ್ತು ಡಿಸಿಎಂ ದೆಹಲಿಗೆ ಹೋಗುತ್ತಾರೆ ಎಂಬ ಸುದ್ದಿಗೂ ಡಿಕೆಶಿ ತೆರೆ ಎಳೆದರು. "ಹೈಕಮಾಂಡ್ ನಾಯಕರು ನಮಗೆ ಕರೆದಾಗ ಖಂಡಿತ ಹೋಗುತ್ತೇವೆ. ಸುಮ್ಮನೆ ಅವರ ಕರೆ ಇಲ್ಲದೆ ಹೋಗುವುದು ಸರಿಯಲ್ಲ ಅಂತ ನಾವು ಸುಮ್ಮನಿದ್ದೇವೆ. ಅವರು ನಮಗೆ ಫೋನ್ ಮಾಡ್ತೀವಿ, ಕರೀತೀವಿ ಅಂತ ಹೇಳಿದ್ದಾರೆ. ಹೈಕಮಾಂಡ್‌ನಿಂದ ಬುಲಾವ್ ಬಂದ ತಕ್ಷಣ ನಾವು ದೆಹಲಿ ವಿಮಾನ ಏರುತ್ತೇವೆ," ಎಂದು ನಗುತ್ತಲೇ ಹೇಳಿದರು.

3. ತಮಿಳುನಾಡು ಮೈತ್ರಿ: ವಿಜಯ್ ಅವರ TVK ಜೊತೆ ಕಾಂಗ್ರೆಸ್ ದೋಸ್ತಿ?

ಇನ್ನು ನೆರೆ ರಾಜ್ಯ ತಮಿಳುನಾಡಿನಲ್ಲಿ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿದೆಯೇ ಎಂಬ ಚರ್ಚೆಗೆ ಡಿಕೆಶಿ ಹೊಸ ಆಯಾಮ ನೀಡಿದ್ದಾರೆ. "ನಮ್ಮ ಮೂಲ ಉದ್ದೇಶ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು. ದೇಶದಲ್ಲಿರುವ ಎಲ್ಲಾ ಜಾತ್ಯತೀತ ಶಕ್ತಿಗಳು (Secular Forces) ಒಂದಾಗಬೇಕು ಎನ್ನುವುದು ನಮ್ಮ ಆಸೆ," ಎಂದರು.

ವಿಜಯ್ ಅವರ ನಿಲುವನ್ನು ಶ್ಲಾಘಿಸಿದ ಅವರು, "TVK ಪಕ್ಷದ ಮೇಲೆ ಡಿಎಂಕೆ ಮತ್ತು ಬಿಜೆಪಿಯವರು ಎಷ್ಟೇ ಒತ್ತಡ ಹಾಕಿದರೂ ಅವರು ಮಣಿದಿಲ್ಲ. ಅವರು ಸೆಕ್ಯುಲರ್ ತತ್ವಕ್ಕೆ ಬದ್ಧರಾಗಿದ್ದಾರೆ. ತಮಿಳುನಾಡಿನ ಹಿತದೃಷ್ಟಿಯಿಂದ ಮತ್ತು ಜಾತ್ಯತೀತ ಶಕ್ತಿಗಳನ್ನು ಬಲಪಡಿಸಲು ನಮ್ಮ ಪಕ್ಷದ ಹಿರಿಯ ನಾಯಕರು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ," ಎಂದು ಮೈತ್ರಿಯ ಮುನ್ಸೂಚನೆ ನೀಡಿದರು.

Latest News