Apr 14, 2026 Languages : ಕನ್ನಡ | English

ಬಾಯಿಗೆ ಬೀಗ ಹಾಕದಿದ್ರೆ ಶಿಸ್ತು ಕ್ರಮದ ಬಿಸಿ - ಕೈ ನಾಯಕರಿಗೆ ಡಿಕೆಶಿ ಖಡಕ್ ವಾರ್ನಿಂಗ್!!

ರಾಜ್ಯ ರಾಜಕಾರಣದಲ್ಲಿ ಈಗ ಸಚಿವ ಸ್ಥಾನದ ಆಕಾಂಕ್ಷಿಗಳ ದಂಡೇ ಇದೆ. ಶಾಸಕರು ದೆಹಲಿಗೆ ಹೋಗುವುದು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ಹೊಸದೇನಲ್ಲ. ಆದರೆ, ಇದೆಲ್ಲದರ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಪಕ್ಷದ ಶಾಸಕರಿಗೆ ಒಂದು ಸ್ಟ್ರಾಂಗ್ ಮೆಸೇಜ್ ರವಾನಿಸಿದ್ದಾರೆ. "ನಾಯಕರುಗಳನ್ನ ಭೇಟಿ ಮಾಡೋಕೆ ನಮ್ಮ ಅಭ್ಯಂತರವಿಲ್ಲ, ಆದ್ರೆ ಕ್ಯಾಮೆರಾ ಮುಂದೆ ನಿಂತು ಏನೇನೋ ಮಾತಾಡಿದ್ರೆ ಮಾತ್ರ ಶಿಸ್ತು ಕ್ರಮ ಗ್ಯಾರಂಟಿ" ಎಂದು ಎಚ್ಚರಿಸಿದ್ದಾರೆ.

ಸಚಿವ ಸ್ಥಾನಕ್ಕಾಗಿ ದೆಹಲಿ ಅಲೆಯುತ್ತಿರುವ ಶಾಸಕರಿಗೆ ಡಿಕೆಶಿ ಟಾಂಗ್
ಸಚಿವ ಸ್ಥಾನಕ್ಕಾಗಿ ದೆಹಲಿ ಅಲೆಯುತ್ತಿರುವ ಶಾಸಕರಿಗೆ ಡಿಕೆಶಿ ಟಾಂಗ್

ಇತ್ತೀಚೆಗೆ ಬೆಂಗಳೂರಿನ ಸದಾಶಿವನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಡಿ.ಕೆ. ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಅವರ ಮಾತಿನ ಸಾರಾಂಶ ಇಷ್ಟೇ - ರಾಜಕಾರಣದಲ್ಲಿ ಆಸೆ ಇರುವುದು ಸಹಜ, ಆದರೆ ಅದಕ್ಕೊಂದು ಸಮಯ ಹಾಗೂ ಸಂದರ್ಭ ಇರಬೇಕು.

ಸಚಿವ ಸ್ಥಾನ ಕೇಳೋದು ತಪ್ಪಲ್ಲ, ಆದ್ರೆ ಈಗ ಟೈಮ್ ಸರಿಯಿಲ್ಲ

"ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರತಿಯೊಬ್ಬರಿಗೂ ಅಧಿಕಾರದ ಆಸೆ ಇರುತ್ತದೆ. ಆದರೆ, ಈಗ ದೇಶದಲ್ಲಿ ಚುನಾವಣೆಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ನಾವು ಸಂಘಟಿತವಾಗಿ ಕೆಲಸ ಮಾಡಬೇಕೇ ಹೊರತು, ವೈಯಕ್ತಿಕ ಬೇಡಿಕೆಗಳನ್ನ ಮಾಧ್ಯಮಗಳ ಮುಂದೆ ಇಡಬಾರದು. ಮೊದಲು ಚುನಾವಣೆ ಮುಗಿಯಲಿ, ಆಮೇಲೆ ಅದರ ಬಗ್ಗೆ ಯೋಚಿಸೋಣ" ಎಂದು ಡಿಕೆಶಿ ಸಮಾಧಾನವಾಗಿಯೇ ಕಿವಿಮಾತು ಹೇಳಿದ್ದಾರೆ.

ಪಕ್ಷದ ಗೌರವ ಕಾಪಾಡಿ

ಶಿವಕುಮಾರ್ ಅವರ ಮುಖ್ಯ ಕಾಳಜಿ ಇರೋದೇ ಪಕ್ಷದ ಇಮೇಜ್ ಬಗ್ಗೆ. "ಎಲ್ಲಾ ಶಾಸಕರು ಪಕ್ಷದ ಶಿಸ್ತನ್ನು ಪಾಲಿಸಬೇಕು. ನಮಗೆ ಪಕ್ಷವೇ ತಾಯಿ ಸಮಾನ. ಮಾಧ್ಯಮಗಳ ಮುಂದೆ ಹೋಗಿ ಏನೇನೋ ಹೇಳಿಕೆ ನೀಡಿ ಪಕ್ಷದ ಗೌರವವನ್ನು ಹಾದಿಬೀದಿಯಲ್ಲಿ ಹರಾಜು ಹಾಕಬೇಡಿ. ನಿಮ್ಮ ಭವಿಷ್ಯವಿರುವುದು ಪಕ್ಷದ ಒಳಗೆಯೇ ಹೊರತು, ಟಿವಿ ಚಾನೆಲ್‌ಗಳ ಮುಂದಲ್ಲ" ಎಂದು ನೇರವಾಗಿಯೇ ಟಾಂಗ್ ನೀಡಿದ್ದಾರೆ. ವಿಶೇಷವೆಂದರೆ, ಈಗಾಗಲೇ ಸಿಎಂ ಸಿದ್ದರಾಮಯ್ಯ ಕೂಡ ಶಾಸಕರಿಗೆ ಇದೇ ಸೂಚನೆಯನ್ನು ನೀಡಿದ್ದಾರೆ.

ಇನ್ನು ಶಾಸಕರು ದೆಹಲಿಗೆ ಹೋಗುವ ಮೊದಲು ನಿಮ್ಮ ಬಳಿ ಚರ್ಚೆ ಮಾಡಿದ್ದಾರಾ ಎಂಬ ಪ್ರಶ್ನೆಗೆ, "ಕೆಲವರು ಚರ್ಚೆ ಮಾಡಿದ್ದಾರೆ, ಇನ್ನು ಕೆಲವರು ನೇರವಾಗಿ ಹೋಗಿದ್ದಾರೆ" ಎಂದು ಉತ್ತರಿಸಿದರು. ಖರ್ಗೆ ಅವರ ಭೇಟಿಯ ಬಗ್ಗೆ ಮಾಹಿತಿ ನೀಡುತ್ತಾ, "ನನಗೆ ತಮಿಳುನಾಡಿಗೆ ಹೋಗಲು ಪಕ್ಷ ಸೂಚಿಸಿತ್ತು. ಅಲ್ಲಿನ ಪ್ರಚಾರದ ಬಗ್ಗೆ ರಿಪೋರ್ಟ್ ನೀಡಲು ಬಂದಿದ್ದೆ. ಮತ್ತೆ ತಮಿಳುನಾಡಿಗೆ ಹೋಗಬೇಕಿದೆ" ಎಂದರು.

ಕೈ ನಾಯಕರಲ್ಲಿ ಸಚಿವ ಸ್ಥಾನದ ಕಿಚ್ಚು ಹತ್ತಿಕೊಂಡಿರೋದು ನಿಜ. ಆದರೆ ಅದು ಬಹಿರಂಗವಾಗಿ ಜ್ವಾಲೆಯಾಗದಂತೆ ಡಿಕೆಶಿ ಈಗಲೇ ಎಚ್ಚರಿಕೆ ನೀಡುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಇಳಿದಿದ್ದಾರೆ.

Latest News