ಧಾರವಾಡದಲ್ಲಿ ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. ಈ ಸಭೆಗೆ ಸಚಿವರು ನಡೆದುಕೊಂಡು ಬಂದ ದೃಶ್ಯ ಸ್ಥಳೀಯರಲ್ಲಿ ಕುತೂಹಲ ಮೂಡಿಸಿತು. ಜನಪರ ಕಾರ್ಯಕ್ರಮದ ಪೂರ್ವಭಾವಿ ಚರ್ಚೆಗೆ ಸಚಿವರು ಹಾಗೂ ಶಾಸಕರು ಆಗಮಿಸಿದರು. ಹೌದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಜೊತೆ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಹಲವು ಸಚಿವರು ಸಭಾಂಗಣಕ್ಕೆ ಆಗಮಿಸಿದರು. ಜನರೊಂದಿಗೆ ಹತ್ತಿರವಾಗಿರುವ ಸಂದೇಶವನ್ನು ಸಾರುವಂತೆ ಅವರು ಸರಳವಾಗಿ ನಡೆದುಕೊಂಡು ಬಂದರು.
ಹೌದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಈ ಸಭೆಯ ಮುಖ್ಯ ಉದ್ದೇಶ, ಜನವರಿ 24ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ 42 ಸಾವಿರ ಮನೆಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮದ ಪೂರ್ವಭಾವಿ ತಯಾರಿ ಎನ್ನಲಾಗುತ್ತಿದೆ. ಈ ಮಹತ್ವದ ಯೋಜನೆ ಮನೆ ಇಲ್ಲದವರಿಗೆ ಭದ್ರತೆ ಮತ್ತು ಹಕ್ಕು ನೀಡುವ ಉದ್ದೇಶ ಹೊಂದಿದೆ ಎಂದು ತಿಳಿದು ಬಂದಿತು. ಈ ಸಭೆಯಲ್ಲಿ ಅಧಿಕಾರಿಗಳು, ಸಚಿವರು, ಶಾಸಕರು ಎಲ್ಲಾ ಸೇರಿ ಚರ್ಚೆ ನಡೆಸಿ, ಕಾರ್ಯಕ್ರಮದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಜನರಿಗೆ ಹಕ್ಕುಪತ್ರ ವಿತರಿಸುವಾಗ ಯಾವುದೇ ತೊಂದರೆ ಆಗದಂತೆ ಎಲ್ಲ ವ್ಯವಸ್ಥೆಗಳನ್ನು ಸರಿಯಾಗಿ ಮಾಡಬೇಕೆಂದು ಸೂಚನೆ ಕೂಡ ನೀಡಲಾಯಿತು.
42 ಸಾವಿರ ಮನೆಗಳಿಗೆ ಹಕ್ಕುಪತ್ರ ವಿತರಣೆ ಕೇವಲ ಆಡಳಿತಾತ್ಮಕ ಕಾರ್ಯವಲ್ಲ, ಅದು ಸಾವಿರಾರು ಕುಟುಂಬಗಳ ಬದುಕಿಗೆ ಹೊಸ ಬೆಳಕು. ಮನೆ ಇಲ್ಲದವರ ಕಣ್ಣಲ್ಲಿ ಭರವಸೆಯ ಕಣ್ಣೀರು ಮಿನುಗುವ ಕ್ಷಣ, ಸಮಾಜದ ಮಾನವೀಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಬಹುದು. ಹೌದು ಧಾರವಾಡದಲ್ಲಿ ನಡೆದ ಈ ಸಭೆ, ಜನವರಿ 24ರ ಮಹತ್ವದ ದಿನಕ್ಕೆ ವೇದಿಕೆ ಸಿದ್ಧಪಡಿಸಿದೆ. ಹುಬ್ಬಳ್ಳಿಯಲ್ಲಿ ನಡೆಯಲಿರುವ ಹಕ್ಕುಪತ್ರ ವಿತರಣೆ ಕಾರ್ಯಕ್ರಮ, ಸಾವಿರಾರು ಕುಟುಂಬಗಳಿಗೆ ಬದುಕಿನ ಹೊಸ ಅಧ್ಯಾಯವನ್ನು ಬರೆಯಲಿದೆ ಹಾಗಾಗಿ ಎಲ್ಲರು ಆ ದಿನಕ್ಕೆ ಹೆಚ್ಚು ಕಾಯುತ್ತಿದ್ದಾರೆ.