ಸದ್ಯ ಇಡೀ ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ‘ಧರ್ಮಸ್ಥಳ ಬುರುಡೆ ಪ್ರಕರಣ’ಕ್ಕೆ (Dharmasthala Burude Case) ಸಂಬಂಧಿಸಿದಂತೆ ಈಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಹೆಸರು ಈ ಕೇಸ್ನಲ್ಲಿ ಸದ್ದಿಲ್ಲದೆ ಥಳುಕು ಹಾಕಿಕೊಂಡಿದ್ದು, ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಇದರ ಬಗ್ಗೆಯೇ ದೊಡ್ಡ ಮಟ್ಟದ ಚರ್ಚೆಗಳು ನಡೀತಿವೆ.
ಈ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಶುಕ್ರವಾರ ಮಾಧ್ಯಮಗಳ ಮುಂದೆ ಬಂದು ಮಹತ್ವದ ಸ್ಪಷ್ಟನೆ ನೀಡಿದ್ದಾರೆ.
ಹೈಕೋರ್ಟ್ ಮೆಟ್ಟಿಲೇರಿದ ‘ಮಾಸ್ಕ್ ಮ್ಯಾನ್’ ಬಿಚ್ಚಿಟ್ಟ ರಹಸ್ಯ
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಹೇಗಾದರೂ ಮಾಡಿ ಜೈಲಿಗೆ ಕಳುಹಿಸಬೇಕು ಎಂದು ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣವರ್ ಸೇರಿದಂತೆ ಹಲವರು ದೊಡ್ಡದೊಂದು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿ ‘ಮಾಸ್ಕ್ ಮ್ಯಾನ್’ ಎಂದೇ ಖ್ಯಾತರಾಗಿರುವ ಸಿ.ಎನ್. ಚಿನ್ನಯ್ಯ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಇಡೀ ಘಟನೆಯ ರೋಚಕ ವಿವರಗಳನ್ನು ಬಿಚ್ಚಿಡಲಾಗಿದೆ.
ಮುಖ್ಯವಾಗಿ, "ಪ್ರಕಾಶ್ ರಾಜ್ ಎಂಬುವರು ನನ್ನ ಜೊತೆ ಫೋನ್ನಲ್ಲಿ ಮಾತನಾಡಿದ್ದರು. ಒಂದು ದಿನ ನಿನ್ನನ್ನು ಬಂದು ಅಪ್ಪಿಕೊಳ್ಳುವುದಾಗಿ ಹೇಳಿದ್ದರು" ಎಂದು ಚಿನ್ನಯ್ಯ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕಾಶ್ ರಾಜ್ ಬೇರೆ ಯಾರೂ ಅಲ್ಲ, ಖ್ಯಾತ ನಟ ಪ್ರಕಾಶ್ ರಾಜ್ ಇರಬಹುದು ಎಂಬ ಚರ್ಚೆ ಶುರುವಾಗುತ್ತಿದ್ದಂತೆ ಗೃಹ ಸಚಿವರು ಈ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.
"ಹೆಸರು ಬಂದ ತಕ್ಷಣ ಯಾರೂ ಕ್ರಿಮಿನಲ್ ಆಗಲ್ಲ" - ಪ್ರಿಯಾಂಕ್ ಖರ್ಗೆ
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಈ ಹೈಪ್ರೊಫೈಲ್ ಕೇಸ್ನ ತನಿಖೆಯ ಬಗ್ಗೆ ಮಾತನಾಡಿದ್ದಾರೆ. "ಯಾರದ್ದೋ ಹೆಸರು ಪ್ರಸ್ತಾಪ ಆದ ತಕ್ಷಣ ಅವರೆಲ್ಲರೂ ಕ್ರಿಮಿನಲ್ ಆಗಲು ಸಾಧ್ಯವಿಲ್ಲ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೇರವಾಗಿ ಎಸ್ಐಟಿ (SIT) ಮುಖ್ಯಸ್ಥರ ಬಳಿ ಕೆಲವು ಪ್ರಮುಖ ಮಾಹಿತಿಗಳನ್ನು ಕೇಳಿದೆ. ಎಸ್ಐಟಿ ಚೀಫ್ ಮೊದಲು ಕೋರ್ಟ್ಗೆ ಅಧಿಕೃತ ಉತ್ತರ ನೀಡಲಿ. ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ನಾವು ಮಾಧ್ಯಮಗಳ ಮುಂದೆ ಬಂದು ಬಹಿರಂಗವಾಗಿ ಚರ್ಚೆ ಮಾಡಲು ಆಗುವುದಿಲ್ಲ" ಎಂದು ಹೇಳಿದ್ದಾರೆ.
ಇದೇ ವೇಳೆ ಚಾರ್ಜ್ ಶೀಟ್ ವಿಚಾರವಾಗಿ ಮಾತನಾಡಿದ ಅವರು, "ನ್ಯಾಯಾಲಯ ಕೇಳಿರುವ ಪ್ರಶ್ನೆಗಳಿಗೆ ಎಸ್ಐಟಿ ಮುಖ್ಯಸ್ಥರು ಕೋರ್ಟ್ನಲ್ಲೇ ಲಿಖಿತ ಉತ್ತರ ಸಲ್ಲಿಸಲಿದ್ದಾರೆ. ನ್ಯಾಯಾಲಯಕ್ಕೆ ಉತ್ತರ ತಲುಪಿದ ನಂತರ, ಕಾನೂನು ಪ್ರಕಾರ ಆ ಮಾಹಿತಿಯನ್ನು ತಮಗೂ (ಮಾಧ್ಯಮಗಳಿಗೆ) ತಿಳಿಸಲಾಗುವುದು" ಎಂದಿದ್ದಾರೆ.
₹200 ಕೋಟಿ ಡೀಲ್ ಆರೋಪದ ಬಗ್ಗೆ ಸಚಿವರು ಹೇಳಿದ್ದೇನು?
ಈ ಇಡೀ ಪ್ರಕರಣದ ಹಿಂದೆ ಬೇರೆ ಬೇರೆ ಕಡೆಯಿಂದ ಭಾರಿ ಪ್ರಮಾಣದ ಹಣ ಸಂಗ್ರಹವಾಗಿದೆ ಮತ್ತು ಇದರಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಭಾಗಿದಾರಿಕೆ ಇದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಎಸ್ಐಟಿ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ ಎಂಬ ಸುದ್ದಿಯೂ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದರ ಬೆನ್ನಲ್ಲೇ ಸುಮಾರು 200 ಕೋಟಿ ರೂಪಾಯಿಯಷ್ಟು ಹಣದ ಕೈಬದಲಾವಣೆ ನಡೆದಿದೆ ಎಂಬ ಟಾಕ್ ಶುರುವಾಗಿದೆ.
ಈ ಬಗ್ಗೆ ಮಾತನಾಡಿದ ಗೃಹ ಸಚಿವರು, "ಇದು ಸಣ್ಣ ಪ್ರಮಾಣದ ಹಣ ಅಲ್ಲ, ಸುಮಾರು 200 ಕೋಟಿ ರೂಪಾಯಿ ಎಂದು ಮಾಧ್ಯಮಗಳಲ್ಲಿ ಹೇಳಲಾಗುತ್ತಿದೆ. ಆದರೆ ಆ ಆರೋಪದಲ್ಲಿ ಎಷ್ಟು ನಿಜವಿದೆಯೋ ಮತ್ತು ಎಷ್ಟು ಸುಳ್ಳಿದೆಯೋ ನಮಗೆ ಗೊತ್ತಿಲ್ಲ. ಯಾಕೆಂದರೆ ಈ ಹಿಂದೆ ಇದೇ ವ್ಯಕ್ತಿ ಧರ್ಮಸ್ಥಳದ ಬಗ್ಗೆ ಹಲವು ಆರೋಪಗಳನ್ನು ಮಾಡಿದ್ದರು. ಹಾಗಾಗಿ ಅವರು ಈಗ ಎಷ್ಟು ಸತ್ಯ ಹೇಳ್ತಾ ಇದ್ದಾರೆ ಅಥವಾ ಎಷ್ಟು ಸುಳ್ಳು ಹೇಳ್ತಾ ಇದ್ದಾರೆ ಅನ್ನೋದನ್ನು ಪೊಲೀಸರು ಮತ್ತು ಕೋರ್ಟ್ ಆಳವಾಗಿ ಪರಿಶೀಲನೆ ಮಾಡಬೇಕಾಗುತ್ತದೆ" ಎಂದು ತಿಳಿಸಿದರು.
ಮೈಕ್ರೋ ಫೈನಾನ್ಸ್ ಕಾಯ್ದೆ ಉಲ್ಲಂಘನೆ ಆರೋಪ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ‘ಮೈಕ್ರೋ ಫೈನಾನ್ಸ್ ಕಾಯ್ದೆ’ಯನ್ನು (Micro Finance Act) ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂಬ ಆರೋಪದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, "ಈ ಹೊಸ ಕಾಯ್ದೆಯನ್ನು ಇಡೀ ಕರ್ನಾಟಕ ರಾಜ್ಯಕ್ಕೆ ಅನ್ವಯವಾಗುವಂತೆ ತರಲಾಗಿದೆ. ಹೊಸ ರೂಲ್ಸ್ ಬಂದ ಮೇಲೆ ಇದನ್ನು ಯಾರು ಉಲ್ಲಂಘನೆ ಮಾಡಿದ್ದಾರೆ ಎಂಬ ಕಂಪ್ಲೀಟ್ ಮಾಹಿತಿ ಸದ್ಯ ನನ್ನ ಬಳಿ ಇಲ್ಲ. ಇನ್ನು ಒಂದು ವಾರ ಅಥವಾ 10 ದಿನಗಳ ಒಳಗಾಗಿ ಈ ಇಲಾಖೆಯ ಅಧಿಕಾರಿಗಳ ಜೊತೆ ಹೈಲೆವೆಲ್ ಮೀಟಿಂಗ್ ಮಾಡಿ ಮಾಹಿತಿ ಪಡೆದು ತಿಳಿಸುತ್ತೇನೆ" ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಅವರು, "ಈ ಮೈಕ್ರೋ ಫೈನಾನ್ಸ್ ಕಾಯ್ದೆ ಕೇವಲ ಧರ್ಮಸ್ಥಳ ಸಂಘಕ್ಕೆ ಮಾತ್ರ ಸೀಮಿತವಲ್ಲ. ರಾಜ್ಯದಲ್ಲಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೂ ಇದು ಅನ್ವಯ ಆಗುತ್ತದೆ ಮತ್ತು ಎಲ್ಲರೂ ಇದನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಸದ್ಯ ಬಂದಿರುವ ದೂರು ಏನಿದೆ ಎಂದು ನೋಡಿ, ಅದರ ಬಗ್ಗೆ ತನಿಖೆ ಮತ್ತು ಸಂಪೂರ್ಣ ಪರಿಶೀಲನೆ ನಡೆಸೋಣ" ಎಂದು ಹೇಳುವ ಮೂಲಕ ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.