Dec 13, 2025 Languages : ಕನ್ನಡ | English

ಮೆಕ್ಕೆಜೋಳ ಖರೀದಿ ವಿಳಂಬ!! ಪ್ರಟಿಭಟನೆ ಕೈಗೊಳ್ಳದಾಗಿ ಹೇಳಿ ರೈತರ ಪರವಾಗಿ ಎನ್. ರವಿಕುಮಾರ್ ಆಕ್ರೋಶ

ಚಿತ್ರದುರ್ಗದಲ್ಲಿ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ತೀವ್ರ ಟೀಕೆ ಮಾಡಿ, ರೈತರ ಹಿತಾಸಕ್ತಿಗಾಗಿ ಬೆಳಗಾವಿಯಲ್ಲಿ ಡಿಸೆಂಬರ್ 9ರಂದು ಬೃಹತ್ ಪ್ರತಿಭಟನೆ ಆಯೋಜನೆ ಮಾಡಲಾಗುತ್ತಿದೆ ಎಂದು ಘೋಷಿಸಿದರು. ಅವರು ಆರೋಪಿಸಿದಂತೆ, ರಾಜ್ಯದಲ್ಲಿ 74 ಲಕ್ಷ ಟನ್ ಮೆಕ್ಕೆಜೋಳ ಬೆಳೆದಿದ್ದರೂ, ಸರಕಾರ ಕೇವಲ 5 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡುವುದಾಗಿ ಹೇಳಿದೆ. “ಇನ್ನುಳಿದ ಮೆಕ್ಕೆಜೋಳವನ್ನು ರೈತರು ಏನು ಮಾಡಬೇಕು?” ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರ ಪ್ರತೀ ಕ್ವಿಂಟಾಲ್‌ಗೆ 2400 ರೂ. ದರ ನಿಗದಿ ಮಾಡಿದರೂ, ರಾಜ್ಯ ಸರಕಾರ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿಲ್ಲವೆಂದು ಖಂಡಿಸಿದರು.

chitradurga-n-ravikumar-farmers-protest-maize-congress
chitradurga-n-ravikumar-farmers-protest-maize-congress

ತುಂಗಭದ್ರಾ ಡ್ಯಾಮ್ ಎರಡು ಬಾರಿ ಭರ್ತಿಯಾದರೂ, ರೈತರಿಗೆ 2ನೇ ಬೆಳೆ ಬೆಳೆಯಲು ನೀರು ಬಿಡದಿರುವುದನ್ನು ಅವರು ತೀವ್ರವಾಗಿ ಟೀಕಿಸಿದರು. ಗೇಟ್ ರಿಪೇರಿ ಕಾರಣ ಹೇಳಿ ವಿಳಂಬ ಮಾಡುತ್ತಿರುವುದಲ್ಲದೆ, 12 ಕೋಟಿ ರೂ. ಬಾಕಿ ಉಳಿದಿದೆ ಎಂದು ಆರೋಪಿಸಿದರು. ರೈತರಿಗೆ ಪ್ರತೀ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಕಲ್ಯಾಣ ಕರ್ನಾಟಕದಲ್ಲಿ ತೊಗರಿ ಬೆಳೆ 80% ಹಾಳಾದರೂ ಪರಿಹಾರ ನೀಡದಿರುವುದು, ತೆಂಗು-ಅಡಿಕೆ ಬೆಳೆ ಹಾನಿಗೂ ಪರಿಹಾರ ನೀಡದಿರುವುದನ್ನು ಅವರು ಉದಾಹರಿಸಿದರು. “ಒಟ್ಟಾರೆ ಕಾಂಗ್ರೆಸ್ ಸರಕಾರ ರೈತ ವಿರೋಧಿ ಸರಕಾರ” ಎಂದು ಅವರು ಹೇಳಿದರು.

ಅವರು ಶಿಕ್ಷಣ ಕ್ಷೇತ್ರದಲ್ಲಿಯೂ ಸಮಸ್ಯೆಗಳನ್ನು ಎತ್ತಿ ತೋರಿಸಿದರು. “ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ, ಮಕ್ಕಳಿಗೆ ಯೂನಿಫಾರ್ಮ್ ನೀಡಿಲ್ಲ, ವಿಶ್ವವಿದ್ಯಾಲಯಗಳಲ್ಲಿ 80% ಪ್ರೊಫೆಸರ್‌ಗಳ ಕೊರತೆ, ಪಾಸಿಂಗ್ ಪರ್ಸಂಟೇಜ್ 35ರಿಂದ 33ಕ್ಕೆ ಇಳಿಕೆ – ಇವುಗಳ ಬಗ್ಗೆ ಚರ್ಚೆ ನಡೆಯಬೇಕು” ಎಂದು ಹೇಳಿದರು. ರಾಜ್ಯದ ಅಭಿವೃದ್ಧಿ ಸ್ಥಗಿತಗೊಂಡಿದೆ ಎಂದು ಅವರು ಆರೋಪಿಸಿ, “ಒಂದು ಕಿಮೀ ರಸ್ತೆ ಕೂಡ ನಿರ್ಮಾಣವಾಗಿಲ್ಲ. ಆಡಳಿತ ಪಕ್ಷದ ಶಾಸಕರೇ ಸರಕಾರದ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಿಎಂ ಆರ್ಥಿಕ ಸಲಹೆಗಾರರು ಕೂಡ ಅಭಿವೃದ್ಧಿಗೆ ಹಣ ನೀಡಿಲ್ಲವೆಂದು ಹೇಳಿದ್ದಾರೆ” ಎಂದು ಹೇಳಿದರು.

ಬಿಜೆಪಿ ರಾಜ್ಯದ 180 ವಿಧಾನಸಭಾ ಕ್ಷೇತ್ರಗಳಲ್ಲಿ ಹೋರಾಟ ನಡೆಸಲಿದೆ ಎಂದು ಅವರು ಘೋಷಿಸಿದರು. “ಸರಕಾರ ನಾಟಿಕೋಳಿ, ಬ್ರೇಕ್‌ಫಾಸ್ಟ್ ಬಿಟ್ಟು ರೈತರು, ವಿದ್ಯಾರ್ಥಿಗಳ ಬಗ್ಗೆ ಯೋಚಿಸಲಿ” ಎಂದು ಟೀಕಿಸಿದರು. ಬಿ.ಕೆ. ಹರಿಪ್ರಸಾದ್ ದೆಹಲಿ ಪ್ರವಾಸ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಅವರು, “ಈ ಸರಕಾರವೇ ದೆಹಲಿ ಪ್ರವಾಸದಲ್ಲಿದೆ. ಯಾವುದೇ ಮಂತ್ರಿಗಳು ಜಿಲ್ಲೆಗಳಿಗೆ ಭೇಟಿ ನೀಡುತ್ತಿಲ್ಲ. ಕಾಂಗ್ರೆಸ್ ಸರಕಾರ ‘ಆಲ್ ಮೋಸ್ಟ್ ಡೆಡ್ ಗೌರ್ನಮೆಂಟ್’ ಆಗಿದೆ” ಎಂದು ಹೇಳಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಅವರು, “ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿಗಳು, ಅಮಿತ್ ಶಾ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದು ಸ್ಪಷ್ಟಪಡಿಸಿದರು. ಎನ್. ರವಿಕುಮಾರ್ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಬೆಳಗಾವಿಯ ಪ್ರತಿಭಟನೆಗೆ ಹೆಚ್ಚಿನ ಗಮನ ಸೆಳೆಯುತ್ತಿದೆ.

Latest News