Feb 16, 2026 Languages : ಕನ್ನಡ | English

ಒಂದು ವರ್ಷದಲ್ಲಿ ಎರಡನೇ ಬಾರಿ ದೇವಾಲಯ ಹುಂಡಿಗೆ ಕೈ ಹಾಕಿದ ಕಳ್ಳರು - ಹುಂಡಿ ಹೊಡೆದ ಘಟನೆ!!

ಚಿಕ್ಕಬಳ್ಳಾಪುರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೊಮ್ಮಸಂದ್ರ ಗ್ರಾಮದಲ್ಲಿ ನಡೆದ ಸರಣಿ ಕಳ್ಳತನ ಸ್ಥಳೀಯರಲ್ಲಿ ಹೆಚ್ಚು ಆತಂಕ ಮೂಡಿಸಿದೆ. ಇತಿಹಾಸ ಪ್ರಸಿದ್ದ ಚಂದ್ರಮೌಳೆಶ್ವರ ದೇವಾಲಯ ಹಾಗೂ ಓಂ ಶಕ್ತಿ ದೇವಾಲಯಗಳಲ್ಲಿ ಖದೀಮರು ಬಾಗಿಲು ಮುರಿದು ಹುಂಡಿ ಹೊಡೆದು ಹಣ ದೋಚಿರುವ ಘಟನೆ ನಡೆದಿದೆ.

ಕೊಮ್ಮಸಂದ್ರ ಗ್ರಾಮದಲ್ಲಿ ಮತ್ತೆ ದೇವಾಲಯ ಕಳ್ಳತನ – ಚಿನ್ನದ ಸರ ದೋಚಿದ ಕಳ್ಳರು!!
ಕೊಮ್ಮಸಂದ್ರ ಗ್ರಾಮದಲ್ಲಿ ಮತ್ತೆ ದೇವಾಲಯ ಕಳ್ಳತನ – ಚಿನ್ನದ ಸರ ದೋಚಿದ ಕಳ್ಳರು!!

ಹೌದು, ಗ್ರಾಮದ ಚಂದ್ರಮೌಳೆಶ್ವರ ದೇವಾಲಯದ ಬಾಗಿಲು ಮುರಿದು, ಹುಂಡಿಯಲ್ಲಿದ್ದ ಹಣವನ್ನು ಕಳ್ಳರು ದೋಚಿದ್ದಾರೆ ಎನ್ನಲಾಗುತ್ತಿದೆ.  ಇದೇ ವೇಳೆ, ಅದೇ ಗ್ರಾಮದ ಓಂ ಶಕ್ತಿ ದೇವಾಲಯದಲ್ಲೂ ಹುಂಡಿ ಹೊಡೆದು ಹಣ ದೋಚಿರುವುದು ಬೆಳಕಿಗೆ ಬಂದಿದೆ. ಕೇವಲ ಹಣವಷ್ಟೇ ಅಲ್ಲದೆ, ದೇವರ ಮೇಲೆ ಅಲಂಕರಿಸಲಾಗಿದ್ದ 10 ಗ್ರಾಂ ಚಿನ್ನದ ಸರವನ್ನೂ ಕಳ್ಳರು ದೋಚಿದ್ದಾರೆ.

ಒಂದು ವರ್ಷದಲ್ಲಿ ಇದೇ ಎರಡನೇ ಬಾರಿ ಗ್ರಾಮದ ದೇವಾಲಯಗಳಲ್ಲಿ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಭಯ ಮತ್ತು ಅಸಮಾಧಾನ ಮೂಡಿಸಿದೆ. “ದೇವಾಲಯಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ನಮ್ಮ ಧಾರ್ಮಿಕ ಭಾವನೆಗಳಿಗೆ ದೊಡ್ಡ ಆಘಾತ. ಪೊಲೀಸರು ಗಂಭೀರವಾಗಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕು” ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

“ದೇವಾಲಯಗಳಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಬೇಕು. ಸಿಸಿಟಿವಿ ಕ್ಯಾಮೆರಾ, ಭದ್ರತಾ ಸಿಬ್ಬಂದಿ ನಿಯೋಜನೆ ಅಗತ್ಯ” ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.  ಗ್ರಾಮದ ಜನರು ದೇವಾಲಯಗಳಲ್ಲಿ  ಮೇಲಿಂದ ಮೇಲೆ ನಡೆಯುತ್ತಿರುವ ಕಳ್ಳತನದಿಂದ ಆತಂಕಗೊಂಡಿದ್ದು, ಧಾರ್ಮಿಕ ಸ್ಥಳಗಳ ಭದ್ರತೆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ. ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಗ್ರಾಮಸ್ಥರ ನಂಬಿಕೆ ಮತ್ತು ಭಾವನೆಗಳ ಸಂಕೇತವಾಗಿವೆ. ಇಂತಹ ಸ್ಥಳಗಳಲ್ಲಿ ಕಳ್ಳತನ ನಡೆಯುವುದು ಸಮಾಜದ ನೈತಿಕತೆಗೆ ದೊಡ್ಡ ಸವಾಲು.

ಈ ಘಟನೆ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ಶೀಘ್ರ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸುವ ನಿರೀಕ್ಷೆಯಿದೆ. ಗ್ರಾಮಸ್ಥರು ದೇವಾಲಯಗಳ ಭದ್ರತೆ ಹೆಚ್ಚಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Latest News