ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಹಿಂದೂ ಸಮಾಜವನ್ನು ಒಗ್ಗೂಡಿಸುವ ಉದ್ದೇಶದಿಂದ ಬೃಹತ್ ವಿರಾಟ ಹಿಂದೂ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಈ ಸಮ್ಮೇಳನದ ಅಂಗವಾಗಿ ನಡೆದ ಶೋಭಾಯಾತ್ರೆ ಗ್ರಾಮದಲ್ಲಿ ವಿಶೇಷ ಉತ್ಸಾಹ ಮತ್ತು ಸಂಭ್ರಮವನ್ನು ಮೂಡಿಸಿತು. ನಾರಾಯಣಪುರದ ರಾಮ್ ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.
ಶೋಭಾಯಾತ್ರೆಯಲ್ಲಿ ದೇಶಭಕ್ತಿಗೀತೆಗಳ ನಾದದೊಂದಿಗೆ ಭಾರತ ಮಾತೆಯ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ದೃಶ್ಯಗಳು ಭಾಗವಹಿಸಿದ ಜನರಲ್ಲಿ ದೇಶಭಕ್ತಿ ಮತ್ತು ಸಂಸ್ಕೃತಿಯ ಗರ್ವವನ್ನು ಮೂಡಿಸಿತು. ಸಮ್ಮೇಳನದ ಹಿನ್ನೆಲೆಯಲ್ಲಿ ಇಡೀ ಗ್ರಾಮದಲ್ಲಿ ಭಾಗವಾಧ್ವಜಗಳನ್ನು ಹಾರಿಸಲಾಗಿದ್ದು, ನಾರಾಯಣಪುರ ಸಂಪೂರ್ಣವಾಗಿ ಕೇಸರಿಮಯವಾಗಿ ಕಾಣಿಸಿಕೊಂಡಿತು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಭಜನಾ ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಲಾಪ್ರದರ್ಶನಗಳು ನಡೆದವು. ಈ ಕಲಾ ಪ್ರದರ್ಶನಗಳು ಜನರ ಗಮನ ಸೆಳೆಯುವುದರ ಜೊತೆಗೆ ಶೋಭಾಯಾತ್ರೆಗೆ ಇನ್ನಷ್ಟು ರಂಗು ತುಂಬಿದವು. ಮಕ್ಕಳು, ಯುವಕರು, ಹಿರಿಯರು ಎಲ್ಲರೂ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂಭ್ರಮದ ನಡುವೆ ಬಸವಕಲ್ಯಾಣ ಕ್ಷೇತ್ರದ ಶಾಸಕ ಶರಣು ಸಲಗರ ಅವರು ತಮ್ಮ ಪತ್ನಿ ಸಾವಿತ್ರಿ ಅವರೊಂದಿಗೆ ಶೋಭಾಯಾತ್ರೆಯಲ್ಲಿ ಭರ್ಜರಿ ಸ್ಟೆಪ್ ಹಾಕಿದರು. ಪತಿ–ಪತ್ನಿಯರ ಈ ಸಂಭ್ರಮದ ಕ್ಷಣಗಳು ಜನರ ಗಮನ ಸೆಳೆದಿದೆ. ಇಬ್ಬರೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾವು ಕೂಡ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು. ವಿರಾಟ ಹಿಂದೂ ಸಮ್ಮೇಳನವು ಶಾಂತಿ, ಸಂಸ್ಕೃತಿ ಮತ್ತು ಒಗ್ಗಟ್ಟಿನ ಸಂದೇಶವನ್ನು ಸಾರುತ್ತಾ ಯಶಸ್ವಿಯಾಗಿ ನೆರವೇರಿದೆ.