May 11, 2026 Languages : ಕನ್ನಡ | English

ಬಳ್ಳಾರಿಯಲ್ಲಿ 'ಮಣ್ಣು' ಮಾಫಿಯಾ ಅಟ್ಟಹಾಸ - ಅಕ್ರಮ ತಡೆಯಲು ಹೋದ ಮಾಜಿ ಪಂಚಾಯತ್ ಅಧ್ಯಕ್ಷನಿಗೆ ರಕ್ತಪಾತ!!

ಬಳ್ಳಾರಿ: ಗಣಿನಾಡಿನಲ್ಲಿ ಭೂಗತ ದಂಧೆಕೋರರ ದರ್ಬಾರ್ ಮತ್ತೆ ಶುರುವಾಗಿದೆಯೇ? ಕೊಳಗಲ್ಲು ಗ್ರಾಮದ ಕೆರೆ ಮಣ್ಣು ಲೂಟಿ ಮಾಡುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹುಲಿಯಪ್ಪ ಅವರನ್ನು ಕೊ*ಲೆ ಮಾಡಲು ಯತ್ನಿಸಿರುವುದು ಈಗ ಜಿಲ್ಲೆಯಾದ್ಯಂತ ಕಿಚ್ಚು ಹಚ್ಚಿದೆ. ಮಣ್ಣಿನ ದಂಧೆಯನ್ನು ಮಟ್ಟಹಾಕಬೇಕಿದ್ದ ವ್ಯವಸ್ಥೆ ಮೌನವಾಗಿದ್ದೇ ಈ ಅನಾಹುತಕ್ಕೆ ಕಾರಣ ಎಂಬ ದೂರುಗಳು ಕೇಳಿಬರುತ್ತಿವೆ.

ಅಕ್ರಮ ಮಣ್ಣು ಸಾಗಾಟ ಪ್ರಶ್ನಿಸಿದ ಮಾಜಿ ಅಧ್ಯಕ್ಷ ಐಸಿಯುನಲ್ಲಿ;
ಅಕ್ರಮ ಮಣ್ಣು ಸಾಗಾಟ ಪ್ರಶ್ನಿಸಿದ ಮಾಜಿ ಅಧ್ಯಕ್ಷ ಐಸಿಯುನಲ್ಲಿ;

ತಡರಾತ್ರಿಯ ಆ 'ಭೀಕರ' ದಾಳಿ!

ಕೊಳಗಲ್ಲು ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕೆರೆಮಣ್ಣಿನ ಅಕ್ರಮ ಸಾಗಾಟ ದಂಧೆ ಬಹಳ ದಿನಗಳಿಂದ ಎಗ್ಗಿಲ್ಲದೆ ಸಾಗುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷರಾದ ಹುಲಿಯಪ್ಪ ಅವರು ಹಲವು ಬಾರಿ ಧ್ವನಿ ಎತ್ತಿದ್ದರು. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ನಿನ್ನೆ ತಡರಾತ್ರಿ ಕೂಡ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿರುವುದನ್ನು ಗಮನಿಸಿದ ಹುಲಿಯಪ್ಪ ಅವರು, ಅದನ್ನು ತಡೆಯಲು ಸ್ಥಳಕ್ಕೆ ಹೋಗಿದ್ದಾರೆ. ದಂಧೆಕೋರರ ಟ್ರಾಕ್ಟರ್ ತಡೆದು ನಿಲ್ಲಿಸಿದ ಅವರು, ತಕ್ಷಣವೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸರಿಗೆ ಫೋನ್ ಮಾಡಲು ಮುಂದಾಗಿದ್ದಾರೆ. ತಾವು ಸಿಕ್ಕಿಬೀಳುತ್ತೇವೆ ಎಂಬ ಭಯ ಮತ್ತು ಹಳೆಯ ದ್ವೇಷದಿಂದ ಕೆರಳಿದ ದಂಧೆಕೋರರು, ಹುಲಿಯಪ್ಪ ಅವರ ಮೇಲೆ ಮುಗಿಬಿದ್ದಿದ್ದಾರೆ.

ಕೊಳಗಲ್ಲು ಗ್ರಾಮದ ಹಳ್ಳ-ಕೊಳ್ಳಗಳಲ್ಲಿ ಮಣ್ಣು ದೋಚುತ್ತಿದ್ದ ಮಾಫಿಯಾ ತಂಡಕ್ಕೆ ಹುಲಿಯಪ್ಪ ಅವರು ಕಂಟಕವಾಗಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಜರುಗಿರಲಿಲ್ಲ. ನಿನ್ನೆ ತಡರಾತ್ರಿ ಅಕ್ರಮ ಸಾಗಾಟದ ಟ್ರಾಕ್ಟರ್ ತಡೆದು ಪೊಲೀಸರಿಗೆ ಮಾಹಿತಿ ನೀಡಲು ಮುಂದಾದಾಗ, ಅಟ್ಟಹಾಸ ಮೆರೆದ ದಂಧೆಕೋರರು ಹುಲಿಯಪ್ಪ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಬಿಟ್ಟು ಕಿಡಿಗೇಡಿಗಳು ಪರಾರಿಯಾಗಿದ್ದಾರೆ.

ಐಸಿಯುನಲ್ಲಿ ಸಾವು-ಬದುಕಿನ ಹೋರಾಟ

ದಂಧೆಕೋರರ ವಿಕೃತಿಯಿಂದ ಗಂಭೀರವಾಗಿ ಗಾಯಗೊಂಡಿರುವ ಹುಲಿಯಪ್ಪ ಅವರು ಬಳ್ಳಾರಿಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ಮಾಜಿ ಜನಪ್ರತಿನಿಧಿಯ ಮೇಲೆಯೇ ಇಷ್ಟು ಭೀಕರವಾಗಿ ಹ*ಲ್ಲೆ ನಡೆದಿದೆ ಎಂದರೆ, ಸಾಮಾನ್ಯ ಜನರು ಅಕ್ರಮಗಳನ್ನು ಪ್ರಶ್ನಿಸಲು ಹೋದರೆ ಅವರ ಗತಿ ಏನು? ಎಂಬ ಆತಂಕ ಈಗ ಕೊಳಗಲ್ಲು ಗ್ರಾಮಸ್ಥರನ್ನು ಕಾಡುತ್ತಿದೆ.

ಅಧಿಕಾರಿಗಳೇ, ಇದು ನಿಮ್ಮ ನಿರ್ಲಕ್ಷ್ಯವಲ್ಲವೇ?

ಹುಲಿಯಪ್ಪ ಅವರು ಅಕ್ರಮದ ಬಗ್ಗೆ ಮೊದಲೇ ಎಚ್ಚರಿಸಿದ್ದರು. ಅಧಿಕಾರಿಗಳು ಆಗಲೇ ಎಚ್ಚೆತ್ತು ದಂಧೆಕೋರರ ಮೇಲೆ ಕಾನೂನು ಕ್ರಮ ಕೈಗೊಂಡಿದ್ದರೆ ಇಂದು ಈ ರಕ್ತಪಾತ ನಡೆಯುತ್ತಿರಲಿಲ್ಲ. "ದೂರು ನೀಡಿದ ಮೇಲೂ ದಂಧೆ ನಿರಂತರವಾಗಿ ಸಾಗುತ್ತಿದೆ ಎಂದರೆ, ಈ ಮಾಫಿಯಾದ ಹಿಂದೆ ಯಾವ 'ದೊಡ್ಡ ಕೈ'ಗಳ ಅಶೀರ್ವಾದವಿದೆ?" ಎನ್ನುವುದು ಸಾರ್ವಜನಿಕರ ನೇರ ಪ್ರಶ್ನೆಯಾಗಿದೆ.

ಪೊಲೀಸರ ಮುಂದಿರುವ ಸವಾಲು

ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ತಂಡಗಳನ್ನು ರಚಿಸಿದ್ದಾರೆ. ಕೇವಲ ಹ*ಲ್ಲೆ ಮಾಡಿದವರನ್ನು ಮಾತ್ರವಲ್ಲದೆ, ಈ ಮಣ್ಣು ಮಾಫಿಯಾದ ಕಿಂಗ್‌ಪಿನ್‌ಗಳನ್ನೂ ಜೈಲಿಗೆ ಕಳುಹಿಸಬೇಕು ಎಂಬುದು ಜನರ ಆಗ್ರಹವಾಗಿದೆ.

ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುವವರ ವಿರುದ್ಧ ಧ್ವನಿ ಎತ್ತುವವರ ರಕ್ಷಣೆ ಸರ್ಕಾರದ ಹೊಣೆ. ಬಳ್ಳಾರಿಯಲ್ಲಿ ಇಂತಹ 'ಗೂಂಡಾಗಿರಿ'ಗೆ ತಕ್ಷಣ ಬ್ರೇಕ್ ಬೀಳಬೇಕಿದೆ. ಹ*ಲ್ಲೆಗೊಳಗಾದ ಹುಲಿಯಪ್ಪ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸೋಣ. 

Latest News