Dec 12, 2025 Languages : ಕನ್ನಡ | English

ದೈವಾರಾಧನೆ ಸಂಪ್ರದಾಯ ಮೀರಿ ನಡೀತಾ? ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ತೊಡೆ ಮೇಲೆ ಮಲಗಿದ ಪಂಜುರ್ಲಿ

ಮಂಗಳೂರಿನ ಬಾರೆಬೈಲು ಜಾರಂದಾಯ ಬಂಟ ಹಾಗೂ ವಾರಾಜಿ ಪಂಜುರ್ಲಿ ದೈವಸ್ಥಾನದಲ್ಲಿ ನಡೆದ ಹರಕೆ ನೇಮೋತ್ಸವವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ನಟ ರಿಷಬ್‌ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್‌ ವತಿಯಿಂದ ನಡೆದ ಈ ನೇಮೋತ್ಸವದಲ್ಲಿ ದೈವ ನರ್ತಕರ ನಡೆ ಕುರಿತು ತುಳುನಾಡ ದೈವಾರಾಧಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಮಂಗಳೂರಿನಲ್ಲಿ ರಿಷಬ್‌ ಶೆಟ್ಟಿ ಹರಕೆ ಕೋಲ
ಮಂಗಳೂರಿನಲ್ಲಿ ರಿಷಬ್‌ ಶೆಟ್ಟಿ ಹರಕೆ ಕೋಲ

ಎಣ್ಣೆಬೂಳ್ಯ ಪದ್ದತಿ ವೇಳೆ ವಿವಾದ

ನೇಮೋತ್ಸವ ಆರಂಭಕ್ಕೂ ಮುನ್ನ ದೈವಸ್ಥಾನದಲ್ಲಿ ದೈವ ಎಣ್ಣೆಬೂಳ್ಯ ನೀಡುವ ಸಂಪ್ರದಾಯ ಪಾಲಿಸಲಾಯಿತು. ಈ ವೇಳೆ ದೈವ ನರ್ತಕರು ತುಳುನಾಡ ದೈವಾರಾಧನೆ ಸಂಪ್ರದಾಯ ಮೀರಿ ವರ್ತಿಸಿದ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ರಿಷಬ್‌ ಶೆಟ್ಟಿಯ ಎರಡೂ ಕಾಂತಾರ ಸಿನಿಮಾಗಳಲ್ಲಿ ಮಾರ್ಗದರ್ಶಕರಾಗಿದ್ದ ನರ್ತಕರೊಬ್ಬರ ವಿರುದ್ಧ ಈ ಅಸಮಾಧಾನ ಹೆಚ್ಚಾಗಿದೆ.

ರಿಷಬ್‌ ಶೆಟ್ಟಿ ಮಡಿಲಲ್ಲಿ ಮಲಗಿದ ಸನ್ನಿವೇಶ

ಬಾರೆಬೈಲು ಹರಕೆ ನೇಮೋತ್ಸವದಲ್ಲಿ ದೈವ ನರ್ತಕರು ಎಣ್ಣೆಬೂಳ್ಯ ಸ್ವೀಕರಿಸಿದ ಸಂದರ್ಭದಲ್ಲಿ, ನಟ ರಿಷಬ್‌ ಶೆಟ್ಟಿ ಮಡಿಲಲ್ಲಿ ಮಲಗಿ ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾದರು. ಆದರೆ ಈ ಘಟನೆ ತುಳುನಾಡ ದೈವಾರಾಧಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ದೈವಾರಾಧನೆಯ ಕಟ್ಟಲೆಗಳನ್ನು ಮೀರಿ ದೈವ ನರ್ತನ ನಿಯಮ ಉಲ್ಲಂಘನೆ ನಡೆದಿದೆ ಎಂಬ ಆಕ್ಷೇಪಗಳು ಕೇಳಿಬಂದಿವೆ.

ದೈವ ನರ್ತಕ ಮುಖೇಶ್‌ ವಿರುದ್ಧ ಆಕ್ಷೇಪ

ಕಾಂತಾರ ಹಾಗೂ ಕಾಂತಾರ 1 ಸಿನಿಮಾಗಳ ಚಿತ್ರೀಕರಣದ ವೇಳೆ ರಿಷಬ್‌ ಶೆಟ್ಟಿಗೆ ದೈವಾರಾಧನ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದ್ದ ದೈವ ನರ್ತಕ ಮುಖೇಶ್‌ ಈ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕಾಂತಾರ ಮೊದಲ ಸಿನಿಮಾಗೆ ಸೈಮಾ ಪ್ರಶಸ್ತಿ ಬಂದಾಗಲೂ ಪ್ರಶಸ್ತಿ ಸ್ವೀಕರಿಸಿದ್ದ ಮುಖೇಶ್‌, ಇತ್ತೀಚಿನ ಬಾರೆಬೈಲು ನೇಮೋತ್ಸವದಲ್ಲೂ ಪಂಜುರ್ಲಿ ದೈವದ ನರ್ತಕರಾಗಿದ್ದರು. ಇದೀಗ ಅವರ ನಡೆ ಕುರಿತು ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಸಾಮಾಜಿಕ ತಾಣಗಳಲ್ಲಿ ಪರ-ವಿರೋಧ ಚರ್ಚೆ

ದೈವ ನರ್ತಕರಾದ ಮುಖೇಶ್‌ ಅವರ ನಡೆ ಕುರಿತು ಸಾಮಾಜಿಕ ತಾಣಗಳಲ್ಲಿ ಭಾರೀ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಹಲವರು ದೈವಾರಾಧನೆಯ ಕಟ್ಟಲೆಗಳನ್ನು ಮೀರಿ ವರ್ತಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವರು ಮುಖೇಶ್‌ ಅವರ ಪರವಾಗಿ ಪೋಸ್ಟ್‌ ಮಾಡುತ್ತಿದ್ದಾರೆ. ತುಳುನಾಡಿನ ದೈವಾರಾಧನೆ ಸಂಪ್ರದಾಯದ ಗೌರವ ಕಾಪಾಡಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

Latest News