Apr 28, 2026 Languages : ಕನ್ನಡ | English

ಮುರುಗನ ಸನ್ನಿಧಿಯಲ್ಲಿ 'ದಳಪತಿ' ರಾಜಕೀಯ ರಣರಂಗದ ಗೆಲುವಿಗಾಗಿ ವಿಶೇಷ ಪ್ರಾರ್ಥನೆ!! ಮತದಾರರ ಮನಗೆಲ್ಲುತ್ತಾರಾ 'ಟಿವಿಕೆ' ನಾಯಕ?

ತಮಿಳುನಾಡು ರಾಜಕೀಯದ ಹೊಸ ಆಟಗಾರ ವಿಜಯ್ ಈಗ ಭಕ್ತಿ ಮಾರ್ಗ ಹಿಡಿದಿದ್ದಾರೆ. ಸಿನಿಮಾ ರಂಗದಲ್ಲಿ ಎದುರಾಳಿಗಳನ್ನು ಮಣ್ಣು ಮುಕ್ಕಿಸುತ್ತಿದ್ದ 'ದಳಪತಿ', ಈಗ ರಾಜಕೀಯ ರಣರಂಗದ ಅಂತಿಮ ಫಲಿತಾಂಶಕ್ಕಾಗಿ ದೇವರ ಮೊರೆ ಹೋಗಿರುವುದು ಇಡೀ ದಕ್ಷಿಣ ಭಾರತದ ಗಮನ ಸೆಳೆದಿದೆ.

ನಡುರಾತ್ರಿಯ ರಹಸ್ಯ ಪಯಣ

ವಿಜಯ್ ತಿರುಚೆಂದೂರು ಭೇಟಿ ವೈರಲ್ | Photo Credit: VijayFansTrends |
ವಿಜಯ್ ತಿರುಚೆಂದೂರು ಭೇಟಿ ವೈರಲ್ | Photo Credit: VijayFansTrends |

ಸಾಮಾನ್ಯವಾಗಿ ವಿಜಯ್ ಎಲ್ಲೇ ಹೋದರೂ ಅಲ್ಲಿ ಕ್ಯಾಮೆರಾಗಳ ಕಣ್ಣು ಇರುತ್ತದೆ. ಆದರೆ, ಏಪ್ರಿಲ್ 28ರ ರಾತ್ರಿ ನಡೆದಿದ್ದೇ ಬೇರೆ. ಅಬ್ಬರವಿಲ್ಲದೆ, ಪ್ರಚಾರದ ಹಂಗಿಲ್ಲದೆ ವಿಜಯ್ ಚೆನ್ನೈನಿಂದ ಮದುರೈಗೆ ಹಾರಿದ್ದರು. ಅಲ್ಲಿಂದ ಸುಮಾರು 4 ಗಂಟೆಗಳ ಕಾಲ ರಸ್ತೆಯ ಮೂಲಕ ಪ್ರಯಾಣಿಸಿ ಅವರು ತಲುಪಿದ್ದು ಪವಿತ್ರ ತಿರುಚೆಂದೂರು ಕ್ಷೇತ್ರಕ್ಕೆ. ಫಲಿತಾಂಶದ ಒತ್ತಡದ ನಡುವೆ ವಿಜಯ್ ಅವರು ಕಂಡುಕೊಂಡ ಈ ಶಾಂತಿಯುತ ಹಾದಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ದೇವಸ್ಥಾನದ ಆವರಣಕ್ಕೆ ಬಂದ ವಿಜಯ್ ಅವರನ್ನು ಕಂಡ ಭಕ್ತರಿಗೆ ತಮ್ಮ ಕಣ್ಣುಗಳನ್ನೇ ನಂಬಲಾಗಲಿಲ್ಲ. ಪಕ್ಕಾ ಸಾಂಪ್ರದಾಯಿಕ ಬಿಳಿ ಶರ್ಟ್ ಮತ್ತು ವೇಷ್ಟಿಯಲ್ಲಿ ವಿಜಯ್ ಕಂಗೊಳಿಸುತ್ತಿದ್ದರು. ದೇವಸ್ಥಾನದ ಪದ್ಧತಿಯಂತೆ ರೇಷ್ಮೆ ಧೋತಿಯನ್ನು ಉಟ್ಟುಕೊಂಡು, ಮುಂಜಾನೆಯ 'ವಿಶ್ವರೂಪ ದರ್ಶನ' ಪೂಜೆಯಲ್ಲಿ ಅವರು ತಲ್ಲೀನರಾಗಿದ್ದರು. ಅರ್ಚಕರು ಅವರಿಗೆ ಗೌರವಪೂರ್ವಕವಾಗಿ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು.

ಮುರುಗನ ಸನ್ನಿಧಿಯೇ ಯಾಕೆ?

"ಸೂರಸಂಹಾರ" ನಡೆದ ಪುಣ್ಯಭೂಮಿ ಈ ತಿರುಚೆಂದೂರು. ಅಧರ್ಮವನ್ನು ಅಳಿಸಿ ಧರ್ಮವನ್ನು ಗೆಲ್ಲಿಸಿದ ಮುರುಗಪ್ಪನ ಈ ಕ್ಷೇತ್ರವು ವಿಜಯ್ ಪಾಲಿಗೆ ವಿಶೇಷ ಎನ್ನಲಾಗಿದೆ. ಇದು ಕೇವಲ ದೇವಸ್ಥಾನದ ಭೇಟಿಯಲ್ಲ, ಕೆಟ್ಟ ರಾಜಕೀಯ ವ್ಯವಸ್ಥೆಯ ವಿರುದ್ಧ ಗೆಲುವು ಸಾಧಿಸಲು ಅವರು ಮಾಡಿಕೊಂಡಿರುವ ಸಂಕಲ್ಪ, ಎನ್ನುತ್ತಾರೆ ಅವರ ಕಟ್ಟಾ ಅಭಿಮಾನಿಗಳು.

ಮೇ 4: ಯಾರ ಪಾಲಿಗೆ 'ವೆಟ್ರಿ'?

ಸದ್ಯಕ್ಕೆ ತಮಿಳುನಾಡಿನಾದ್ಯಂತ ಟಿವಿಕೆ ಪಕ್ಷದ ಲೆಕ್ಕಾಚಾರಗಳು ಜೋರಾಗಿವೆ. ಎಲ್ಲಾ 234 ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ಮುಗಿಸಿರುವ ವಿಜಯ್ ತಂಡ, ಗೆಲುವಿನ ಬಗ್ಗೆ ಭಾರೀ ಭರವಸೆ ಇಟ್ಟುಕೊಂಡಿದೆ.

ಪಕ್ಷದ ವಿಶ್ವಾಸ: ವಿಜಯ್ ಅವರ ಈ ಭೇಟಿ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದೆ. ಇದನ್ನು 'ದೈವಿಕ ಆಶೀರ್ವಾದ' ಎಂದು ಅವರು ಸಂಭ್ರಮಿಸುತ್ತಿದ್ದಾರೆ.

ವಿಮರ್ಶಕರ ಮಾತು: ಚುನಾವಣೆಗೂ ಮುನ್ನ ದೇವಸ್ಥಾನಕ್ಕೆ ಹೋಗುವುದು ಮತದಾರರ ಸೆಳೆಯುವ ಹಳೆಯ ತಂತ್ರ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.

ತೆರೆಯ ಮೇಲಿನ 'ಮಾಸ್' ಹೀರೊ.. ಜನರ ಪಾಲಿನ 'ರಿಯಲ್' ಲೀಡರ್ ಆಗ್ತಾರಾ?

ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುವುದು ವಿಜಯ್ ಅವರಿಗೆ ನೀರು ಕುಡಿದಷ್ಟೇ ಸುಲಭ. ಆದರೆ, ರಾಜಕೀಯದ ಈ ಜಿದ್ದಾಜಿದ್ದಿನ ಕಣದಲ್ಲಿ ಜನರ ಮನಗೆಲ್ಲುವುದು ಅಷ್ಟು ಸುಲಭವಲ್ಲ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ವಿಜಯ್ ಅವರ ಹಣೆಬರಹ ಮೇ 4ರಂದು ನಿರ್ಧಾರವಾಗಲಿದೆ.

ತಿರುಚೆಂದೂರಿನ ಸಪ್ತ ಸಾಗರಗಳ ಅಲೆಗಳಂತೆ ವಿಜಯ್ ಅವರ ರಾಜಕೀಯ ಅಲೆಯೂ ರಾಜ್ಯಾದ್ಯಂತ ಹರಡಲಿದೆಯೇ? ಅಥವಾ ಸ್ಥಬ್ದವಾಗಲಿದೆಯೇ? ಉತ್ತರಕ್ಕಾಗಿ ಕೇವಲ ಕೆಲವು ದಿನಗಳಷ್ಟೇ ಬಾಕಿ.

Latest News