ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ವಿಜಯ್ ಅವರಿಗೆ ರಾಜಕೀಯ ಪ್ರವೇಶದ ನಡುವೆಯೇ ಕಾನೂನು ಹಿನ್ನಡೆ ಎದುರಾಗಿದೆ. ಹೌದು, ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪಿನಿಂದಾಗಿ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದಾಯ ತೆರಿಗೆ ಇಲಾಖೆ ವಿಧಿಸಿದ್ದ ₹1.5 ಕೋಟಿ ರೂಪಾಯಿ ದಂಡವನ್ನು ರದ್ದುಪಡಿಸುವಂತೆ ನಟ ವಿಜಯ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ ಎನ್ನಲಾಗುತ್ತಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೆಂಥಿಲ್ ಕುಮಾರ್ ರಾಮಮೂರ್ತಿ, ವಿಜಯ್ ಅರ್ಜಿಯಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಆದಾಯ ತೆರಿಗೆ ಇಲಾಖೆ ಹೊರಡಿಸಿದ್ದ ದಂಡ ನೋಟಿಸ್ ಕಾನೂನಿನ ಪ್ರಕಾರವೇ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದರಿಂದಾಗಿ ವಿಜಯ್ ಮೇಲೆ ವಿಧಿಸಲಾಗಿದ್ದ ದಂಡ ಪಾವತಿ ಹೊಣೆಗಾರಿಕೆ ಮುಂದುವರಿದಿದೆ.
ಈ ದಂಡವು 2015–16ರ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದೆ. ಆ ಅವಧಿಯಲ್ಲಿ ವಿಜಯ್ ತಮ್ಮ ಸಂಪೂರ್ಣ ಆದಾಯವನ್ನು ತೆರಿಗೆ ಇಲಾಖೆಗೆ ಸರಿಯಾಗಿ ಬಹಿರಂಗಪಡಿಸಿಲ್ಲ ಎಂಬ ಆರೋಪದ ಮೇಲೆ ದಂಡ ವಿಧಿಸಲಾಗಿತ್ತು. ಇಲಾಖೆ ಹೇಳುವಂತೆ, ವಿಜಯ್ ಗಳಿಸಿದ ಆದಾಯ ಮತ್ತು ಅವರು ಸಲ್ಲಿಸಿದ ತೆರಿಗೆ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ.
ನ್ಯಾಯಾಲಯದ ತೀರ್ಪಿನಿಂದಾಗಿ ವಿಜಯ್ಗೆ ತಕ್ಷಣದ ಹಿನ್ನಡೆ ಉಂಟಾಗಿದ್ದು, ಮುಂದಿನ ಹಂತದಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶ ಇನ್ನೂ ಉಳಿದಿದೆ. ಇತ್ತೀಚೆಗೆ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿರುವ ವಿಜಯ್ಗೆ ಈ ಬೆಳವಣಿಗೆ ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ. ಜೊತೆಗೆ, ತೆರಿಗೆ ವಿಚಾರದಲ್ಲಿ ಯಾರಿಗೂ ಸಡಿಲಿಕೆ ಇಲ್ಲ ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ ಎಂಬ ಮಾತು ಕೇಳಿಬರುತ್ತಿದೆ.