ದಕ್ಷಿಣ ಭಾರತದ 'ನ್ಯಾಚುರಲ್ ಬ್ಯೂಟಿ' ಸಾಯಿ ಪಲ್ಲವಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅವರ ನಟನೆ, ನೃತ್ಯ ಮತ್ತು ಅವರ ಸಿಂಪ್ಲಿಸಿಟಿಗೆ ಕೋಟ್ಯಂತರ ಫ್ಯಾನ್ಸ್ ಇದ್ದಾರೆ. ಈಗ ಈ ಬೆಡಗಿ ಬಾಲಿವುಡ್ಗೂ ಎಂಟ್ರಿ ಕೊಟ್ಟಿದ್ದಾರೆ. ಸಾಯಿ ಪಲ್ಲವಿ ಮತ್ತು ಆಮಿರ್ ಖಾನ್ ಮಗ ಜುನೈದ್ ಖಾನ್ ನಟನೆಯ ‘ಏಕ್ ದಿನ್’ ಸಿನಿಮಾ ಸದ್ಯದಲ್ಲೇ ರಿಲೀಸ್ ಆಗುತ್ತಿದೆ. ಆದರೆ ಸಿನಿಮಾ ರಿಲೀಸ್ಗೂ ಮುನ್ನ ಇವರಿಬ್ಬರ ನಡುವೆ ನಡೆದ ಒಂದು ಸಣ್ಣ ಘಟನೆ ಈಗ ಇಂಟರ್ನೆಟ್ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಈ ಸಿನಿಮಾದ ವಿಶೇಷ ಪ್ರದರ್ಶನ ಮತ್ತು ಸುದ್ದಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಫೋಟೋಗೆ ಫೋಸ್ ನೀಡುವಾಗ ಜುನೈದ್ ಖಾನ್ ಅವರು ಪಕ್ಕದಲ್ಲೇ ಇದ್ದ ಸಾಯಿ ಪಲ್ಲವಿ ಅವರ ಹೆಗಲ ಮೇಲೆ ಕೈ ಹಾಕಲು ಮುಂದಾದರು. ಆದರೆ, ಕೈ ಹಾಕುವ ಮೊದಲೇ ಏನೋ ನೆನಪಾದಂತೆ ಅಥವಾ ಮುಜುಗರವಾದಂತೆ ತಕ್ಷಣ ತಮ್ಮ ಕೈಯನ್ನು ಹಿಂದಕ್ಕೆ ಪಡೆದುಕೊಂಡರು.
ಈ ಪುಟ್ಟ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಜುನೈದ್ ಅವರ ನಡೆಯನ್ನು ಬಗೆಬಗೆಯಾಗಿ ವಿಶ್ಲೇಷಿಸುತ್ತಿದ್ದಾರೆ.
He tried to put his hands on her, but realized she is Sai Pallavi, not like other actresses. pic.twitter.com/qRLXjP7x2P
— Nand@n (@nandantwts) April 26, 2026
ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಸಾಯಿ ಪಲ್ಲವಿ ಅಂದ್ರೆ ರೆಸ್ಪೆಕ್ಟ್: "ಬಹುಶಃ ಜುನೈದ್ ಅವರಿಗೆ ಸಾಯಿ ಪಲ್ಲವಿ ಬೇರೆ ಹೀರೋಯಿನ್ಗಳ ತರಹ ಅಲ್ಲ, ಅವರಿಗೆ ತಮ್ಮದೇ ಆದ ಒಂದು ಘನತೆ ಇದೆ ಎಂಬುದು ನೆನಪಾಗಿರಬಹುದು. ಹಾಗಾಗಿ ಕೈ ಹಿಂದಕ್ಕೆ ತೆಗೆದುಕೊಂಡಿದ್ದಾರೆ" ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಜುನೈದ್ ಸಂಸ್ಕಾರಕ್ಕೆ ಫಿದಾ: ಇನ್ನು ಕೆಲವರು ಜುನೈದ್ ಪರವಾಗಿ ಬ್ಯಾಟ್ ಬೀಸಿದ್ದಾರೆ. "ಜುನೈದ್ ಅವರಿಗೆ ನಟಿಯರ ಜೊತೆ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವಿದೆ. ಒಬ್ಬರ ಖಾಸಗಿ ಜಾಗಕ್ಕೆ (Personal space) ಗೌರವ ನೀಡುವ ಅವರ ಗುಣ ಮೆಚ್ಚುವಂತದ್ದು" ಎಂದು ಹೊಗಳುತ್ತಿದ್ದಾರೆ.
ಒಟ್ಟಿನಲ್ಲಿ ಆಮಿರ್ ಖಾನ್ ಮಗನ ಈ ಜಾಗರೂಕ ನಡೆ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.
ಏನಿದು ‘ಏಕ್ ದಿನ್’ ಸಿನಿಮಾ?
ಸುನೀಲ್ ಪಾಂಡೆ ನಿರ್ದೇಶನದ ಈ ಚಿತ್ರವು ಥಾಯ್ ಭಾಷೆಯ ಸೂಪರ್ ಹಿಟ್ ಸಿನಿಮಾ ‘ಒನ್ ಡೇ’ ನ ರಿಮೇಕ್ ಆಗಿದೆ. ಈ ಚಿತ್ರವನ್ನು ಸ್ವತಃ ಆಮಿರ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷ ಶೋ ನೋಡಿದ ಬಳಿಕ ಆಮಿರ್ ಖಾನ್ ಅವರ ಕಣ್ಣಲ್ಲಿ ನೀರು ಬಂತು ಅಂದರೆ, ಸಿನಿಮಾ ಅದೆಷ್ಟು ಎಮೋಷನಲ್ ಆಗಿರಬಹುದು ಎಂದು ನೀವೇ ಊಹಿಸಿ.
ಈ ಸಿನಿಮಾ ಮೇ 1ಕ್ಕೆ ತೆರೆಗೆ ಬರುತ್ತಿದೆ. ಸಾಯಿ ಪಲ್ಲವಿ ಮತ್ತು ಜುನೈದ್ ಖಾನ್ ಕೆಮಿಸ್ಟ್ರಿ ಸ್ಕ್ರೀನ್ ಮೇಲೆ ಹೇಗೆ ವರ್ಕ್ ಆಗಲಿದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ದಕ್ಷಿಣದ ಸ್ಟಾರ್ ಈಗ ಬಾಲಿವುಡ್ಗೆ!
ಸಾಯಿ ಪಲ್ಲವಿ ಅವರಿಗೆ ದಕ್ಷಿಣ ಭಾರತದಲ್ಲಿ ದೊಡ್ಡ ಬೇಡಿಕೆ ಇದೆ. ಈಗ ಹಿಂದಿಯಲ್ಲೂ ಅವರಿಗೆ ಸಾಲು ಸಾಲು ಅವಕಾಶಗಳು ಬರುತ್ತಿವೆ. ಅಷ್ಟೇ ಅಲ್ಲ, ರಣಬೀರ್ ಕಪೂರ್ ಜೊತೆಗಿನ 'ರಾಮಾಯಣ' ಚಿತ್ರದಲ್ಲೂ ಸೀತಾ ಮಾತೆ ಪಾತ್ರದಲ್ಲಿ ಅವರು ಮಿಂಚುತ್ತಿದ್ದಾರೆ ಎನ್ನಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕವಾಗಿ ಅವರ ಗೌರವಕ್ಕೆ ಧಕ್ಕೆ ಬಾರದಂತೆ ಜುನೈದ್ ನಡೆದುಕೊಂಡಿದ್ದು ಎಲ್ಲರ ಗಮನ ಸೆಳೆದಿದೆ.