ಸ್ಯಾಂಡಲ್ವುಡ್ ನಟಿ ಹಾಗೂ ಮಾಜಿ ಬಿಗ್ಬಾಸ್ ಸ್ಪರ್ಧಿ ಕ್ರಿಷಿ ತಾಪಂಡ ಅವರ ಲೇಟೆಸ್ಟ್ ಇಂಟರ್ವ್ಯೂ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಕಹಿ ಘಟನೆಗಳನ್ನು ನೆನೆದು ನಟಿ ಕ್ರಿಷಿ ತಾಪಂಡ ಕಣ್ಣೀರು ಹಾಕಿದ್ದಾರೆ. 'ಇದೇ ನನ್ನ ಕೊನೆಯ ಸಂದರ್ಶನ, ಇನ್ಮುಂದೆ ನಾನು ಎಂದಿಗೂ ಕ್ಯಾಮೆರಾ ಮುಂದೆ ಬರುವುದಿಲ್ಲ' ಎಂದು ಹೇಳುವ ಮೂಲಕ ದೊಡ್ಡ ಶಾಕ್ ಕೊಟ್ಟಿದ್ದಾರೆ!
ಪ್ರೀತಿಯಲ್ಲಿ ಬಿರುಕು; ನಾಲ್ಕು ಗೋಡೆಯ ಮಧ್ಯದ ವಿಚಾರ ಬೀದಿಗೆ;
ಕಳೆದ ವರ್ಷ ನಟಿ ಕ್ರಿಷಿ ತಾಪಂಡ ಅವರ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಈ ಬಗ್ಗೆ ಮುಕ್ತವಾಗಿ ಮಾತನಾಡಿರುವ ಕ್ರಿಷಿ, ಉದ್ಯಮಿ ಅರವಿಂದ್ ರೆಡ್ಡಿ ಹಾಗೂ ತಮ್ಮ ನಡುವಿನ ಪ್ರೀತಿಯ ಬಾಂಧವ್ಯದ ಬಗ್ಗೆ ಹೇಳಿಕೊಂಡಿದ್ದಾರೆ. 'ಆರಂಭದಲ್ಲಿ ಆ ವ್ಯಕ್ತಿಯಿಂದ ನನಗೆ ತುಂಬಾನೇ ಪ್ರೀತಿ ಸಿಕ್ಕಿತ್ತು. ಆದರೆ ದಿನಕಳೆದಂತೆ ಅವರ ಬ್ಯುಸಿ ಶೆಡ್ಯೂಲ್ನಿಂದಾಗಿ ನನಗೆ ಸಮಯ ಕೊಡುತ್ತಿರಲಿಲ್ಲ. ಪ್ರೀತಿಯಲ್ಲಿ ನನಗೆ ಹಣ, ಗಿಫ್ಟ್ಗಳೆಲ್ಲಾ ಸಿಕ್ಕವು, ಆದರೆ ನಿಜವಾದ ಪ್ರೀತಿ ಮತ್ತು ಸಮಯ ಸಿಗಲಿಲ್ಲ. ಇದೇ ಕಾರಣಕ್ಕೆ ನಮ್ಮಿಬ್ಬರ ಮಧ್ಯೆ ಸಾಕಷ್ಟು ಗಲಾಟೆಗಳಾಗುತ್ತಿದ್ದವು' ಎಂದಿದ್ದಾರೆ!
ಮುಂದುವರಿದು ಮಾತನಾಡಿದ ಅವರು, 'ನಾಲ್ಕು ಗೋಡೆಗಳ ಮಧ್ಯೆ ನಡೆದ ಘಟನೆಗಳು ಇಂದು ಬೀದಿಪಾಲಾಗಿವೆ. ಇದರಿಂದ ನನ್ನ ಇಡೀ ಜೀವನಕ್ಕೆ ಕಳಂಕ ಬಂದಿದೆ' ಎಂದು ತೀವ್ರ ಬೇಸರ ಹೊರಹಾಕಿದ್ದಾರೆ.
ಕೆಲಸವೂ ಇಲ್ಲ, ಒಂದು ಹೊತ್ತಿನ ಊಟಕ್ಕೂ ಕಷ್ಟದ ಪರಿಸ್ಥಿತಿ!
'ಜನರು ನನ್ನ 35 ವರ್ಷಗಳ ಜೀವನದ ಜರ್ನಿಯನ್ನು ಮರೆತುಬಿಟ್ಟಿದ್ದಾರೆ. ಆದರೆ ಕಳೆದ ಎಂಟು ತಿಂಗಳಿಂದ ನಡೆದ ವಿವಾದವನ್ನೇ ಹಿಡಿದುಕೊಂಡು ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ಒಂದು ಕೆಟ್ಟ ಘಟನೆಯಿಂದಾಗಿ ನಾನು ಸಿನಿಮಾಗಳಲ್ಲಿ ಕೆಲಸ ಕಳೆದುಕೊಂಡಿದ್ದೇನೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಈಗ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಎದುರಾಗಿದೆ. ಕಳೆದ ಎರಡು ವರ್ಷಗಳಿಂದ ನಾನು ಸರಿಯಾಗಿ ಮನೆಯಿಂದ ಹೊರಗಡೆಯೇ ಬಂದಿಲ್ಲ' ಎಂದು ಕ್ರಿಷಿ ತಾಪಂಡ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಕಾರು, ಬಂಗ್ಲೋ ಏನೂ ಇಲ್ಲ - ಜ್ಯುವೆಲ್ಲರಿ ಎಲ್ಲಾ ರಿಟರ್ನ್ ಮಾಡಿದ್ದೀನಿ!
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವದಂತಿಗಳಿಗೂ ಬ್ರೇಕ್ ಹಾಕಿರುವ ಕ್ರಿಷಿ, "ಅರವಿಂದ್ ರೆಡ್ಡಿ ಅವರು ನನಗೆ ಹೆಸರಿಗೆ ಅಂತಾ ಒಂದು ಕಾರು ಕೊಡಿಸಿದ್ದರು. ಆದರೆ ಆ ಕಾರನ್ನು ನಾನು ಒಂದು ದಿನವೂ ಬಳಸಿಲ್ಲ. ಈಗಲೂ ನಾನು ಬಾಡಿಗೆ ಮನೆಯಲ್ಲೇ ವಾಸವಿದ್ದೇನೆ. ನನ್ನ ಹೆಸರಿನಲ್ಲಿ ಯಾವುದೇ ಬಂಗ್ಲೋ ಅಥವಾ ಆಸ್ತಿ ಇಲ್ಲ. ಅವರು ನನಗೆ ಕೊಟ್ಟಿದ್ದ ಜ್ಯುವೆಲ್ಲರಿಗಳನ್ನು (ಒಡವೆಗಳನ್ನು) ಕೂಡ ನಾನು ಅವರಿಗೇ ರಿಟರ್ನ್ ಮಾಡಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ.
'ಇಷ್ಟೆಲ್ಲಾ ಆದರೂ ಇಂದಿಗೂ ನಾನು ಆ ವ್ಯಕ್ತಿಯನ್ನು ಎಮೋಷನಲ್ ಆಗಿ ಪ್ರೀತಿಸುತ್ತೇನೆ. ನನ್ನ ಜೀವನ ಹೀಗಾಯ್ತಲ್ಲ ಅಂತಾ ನಾನು ಯಾರನ್ನೂ ದ್ವೇಷ ಮಾಡುವುದಿಲ್ಲ. ಆದರೆ ಮಾಧ್ಯಮಗಳಿಗೆ ಇದೇ ನನ್ನ ಕೊನೆಯ ಸಂದರ್ಶನ. ಇನ್ಮುಂದೆ ಯಾವ ಚಾನೆಲ್ ಕ್ಯಾಮೆರಾ ಮುಂದೆಯೂ ನಾನು ಬರುವುದಿಲ್ಲ, ನನ್ನ ಪಾಡಿಗೆ ನನ್ನನ್ನು ಬದುಕಲು ಬಿಡಿ' ಎಂದು ಕೈಮುಗಿದು ಕಣ್ಣೀರಿಟ್ಟಿದ್ದಾರೆ.