Feb 16, 2026 Languages : ಕನ್ನಡ | English

ದರ್ಶನ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದ - ಧನ್ವೀರ್ 'ಹಯಗ್ರೀವ' ಟೀಸರ್!!

ಸ್ಯಾಂಡಲ್‌ವುಡ್‌ನ 'ಬಜಾರ್' ಖ್ಯಾತಿಯ ನಟ ಧನ್ವೀರ್ ಗೌಡ ಅವರ ಬಹುನಿರೀಕ್ಷಿತ 'ಹಯಗ್ರೀವ' ಚಿತ್ರದ ಆಕ್ಷನ್ ಟೀಸರ್ ಬಿಡುಗಡೆಯಾಗಿದೆ. ವಿಶೇಷವೆಂದರೆ, ನಟ ದರ್ಶನ್ ಅವರ ಹುಟ್ಟುಹಬ್ಬದಂದೇ ಈ ಟೀಸರ್ ಅನ್ನು ಬಿಡುಗಡೆ ಮಾಡುವ ಮೂಲಕ ಧನ್ವೀರ್ ತಮ್ಮ ನೆಚ್ಚಿನ ನಟನಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ. ಟೀಸರ್‌ನ ಆರಂಭದಲ್ಲಿ ದರ್ಶನ್ ಅವರಿಗೆ ಸಲ್ಲಿಸಿರುವ ಭಾವನಾತ್ಮಕ ಸಂದೇಶ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಸಂಜನಾ ಆನಂದ್, ಸಾಧು ಕೋಕಿಲ, ಶರತ್ ಲೋಹಿತಾಶ್ವ ಸೇರಿದಂತೆ ತಾರಾಗಣದೊಂದಿಗೆ 'ಹಯಗ್ರೀವ' ಭಾರಿ ನಿರೀಕ್ಷೆ ಮೂಡಿಸಿದೆ.
ಸಂಜನಾ ಆನಂದ್, ಸಾಧು ಕೋಕಿಲ, ಶರತ್ ಲೋಹಿತಾಶ್ವ ಸೇರಿದಂತೆ ತಾರಾಗಣದೊಂದಿಗೆ 'ಹಯಗ್ರೀವ' ಭಾರಿ ನಿರೀಕ್ಷೆ ಮೂಡಿಸಿದೆ.

ದರ್ಶನ್ ಪರ ನಿಂತ ಧನ್ವೀರ್ - ಭಾವನಾತ್ಮಕ ನುಡಿನಮನ

ಸದ್ಯ ಕಠಿಣ ಪರಿಸ್ಥಿತಿಯಲ್ಲಿರುವ ದರ್ಶನ್ ಅವರಿಗೆ ಧನ್ವೀರ್ ಟೀಸರ್ ಮೂಲಕ ಧೈರ್ಯ ತುಂಬಿದ್ದಾರೆ. "ಕಬ್ಬಿಣದ ಬಾಗಿಲುಗಳು ನಿಮ್ಮನ್ನು ದೂರ ಮಾಡಿರಬಹುದು, ಆದರೆ ಜನರ ಹೃದಯದಲ್ಲಿ ನೀವು ಇಂದಿಗೂ ನಮ್ಮ ಹೆಮ್ಮೆಯಾಗಿ ಉಳಿದಿದ್ದೀರಿ. ಒಬ್ಬ ಮನುಷ್ಯನನ್ನು ಬಂಧಿಸಬಹುದು, ಆದರೆ ಆ ಹೆಸರಿನ ಪ್ರಭಾವವನ್ನಲ್ಲ. ಇದು ಅಂತ್ಯವಲ್ಲ, ಮಹಾ ಆರಂಭ" ಎನ್ನುವ ಶಕ್ತಿಯುತ ಸಾಲುಗಳೊಂದಿಗೆ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ದರ್ಶನ್ ಅಣ್ಣ ಎಂದರೆ ಕೇವಲ ಹೆಸರಲ್ಲ, ಅದೊಂದು ಸ್ಫೂರ್ತಿ ಎಂಬುದು ಧನ್ವೀರ್ ಅವರ ಅಚಲ ನಂಬಿಕೆ.

ಗಿಲ್ಲಿ ನಟನ ಡೈಲಾಗ್ ಮತ್ತು ಧನ್ವೀರ್ ಅಬ್ಬರ!!

ಟೀಸರ್‌ನಲ್ಲಿ ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ನಟ ಅವರ ಡೈಲಾಗ್ ಹೈಲೈಟ್ ಆಗಿದೆ. ಕಿಡಿಗೇಡಿಯೊಬ್ಬ ಧನ್ವೀರ್ ಅವರಿಗೆ ಎಚ್ಚರಿಕೆ ನೀಡುವಾಗ, "ಏಯ್, ಕರೆಕ್ಟ್ ಆಗಿ ನೋಡೋ ಈ ಕಟೌಟ್‌ನ.. ಕಿಟ್ ತರ ಕಾಣಿಸ್ತಾನಾ ನಿನ್ನ ಕಣ್ಣಿಗೆ?" ಎಂದು ಗಿಲ್ಲಿ ಹೊಡೆಯುವ ಬಿಲ್ಡಪ್ ಡೈಲಾಗ್ ಕಿಕ್ ನೀಡುತ್ತದೆ. ಇದರ ಬೆನ್ನಲ್ಲೇ ಧನ್ವೀರ್ ತಮ್ಮ ಸಿಕ್ಸ್‌ಪ್ಯಾಕ್ ಪ್ರದರ್ಶಿಸುತ್ತಾ ಶರ್ಟ್‌ಲೆಸ್ ಆಗಿ ಫೈಟ್ ಮಾಡುವ ಝಲಕ್ ಕಾಣಬಹುದು. "ನನಗೆ ತಾಳ್ಮೆ ಸ್ವಲ್ಪ ಕಮ್ಮಿ.. ಯಾಕಂದ್ರೆ ಚಾಮುಂಡೇಶ್ವರಿ ತಾಯಿ ನಮ್ಮ ಮಮ್ಮಿ" ಎನ್ನುವ ಖಡಕ್ ಡೈಲಾಗ್ ಅಭಿಮಾನಿಗಳ ಶಿಳ್ಳೆ ಗಿಟ್ಟಿಸುವಂತಿದೆ.

ತಾಂತ್ರಿಕ ವರ್ಗ ಮತ್ತು ತಾರಾಗಣ

ನಿರ್ದೇಶನ: ರಘು ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ತಾರಾಗಣ: ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದು, ಸಾಧು ಕೋಕಿಲ, ಶರತ್ ಲೋಹಿತಾಶ್ವ, ರಮೇಶ್ ಭಟ್, ಶೋಭರಾಜ್ ಮತ್ತು ಸಂಗೀತಾ ಅವರಂತಹ ಅನುಭವಿ ಕಲಾವಿದರ ತಂಡವೇ ಇಲ್ಲಿದೆ.

ಸಂಗೀತ & ಛಾಯಾಗ್ರಹಣ: ಜುಡಾ ಸ್ಯಾಂಡಿ ಅವರ ಸಂಗೀತ ಮತ್ತು ಗಿರೀಶ್ ಆರ್ ಗೌಡ ಅವರ ಕ್ಯಾಮೆರಾ ವರ್ಕ್ ಟೀಸರ್‌ನ ಮೆರುಗು ಹೆಚ್ಚಿಸಿದೆ.

ಸಾಹಸ: ರವಿವರ್ಮಾ, ಡಿಫರೆಂಟ್ ಡ್ಯಾನಿ ಮತ್ತು ಅರ್ಜುನ್ ವರ್ಮಾ ಅವರು ಹೈ-ವೋಲ್ಟೇಜ್ ಸ್ಟಂಟ್‌ಗಳನ್ನು ಕಂಪೋಸ್ ಮಾಡಿದ್ದಾರೆ.

'ಹಯಗ್ರೀವ' ಚಿತ್ರವು ಕೆವಿಸಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ಮೂಡಿಬಂದಿದ್ದು, ಟೀಸರ್ ಮೂಲಕವೇ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಮೂಡಿಸಿದೆ. ಧನ್ವೀರ್ ಅವರ ಮಾಸ್ ಲುಕ್ ಮತ್ತು ದರ್ಶನ್ ಅವರ ಮೇಲಿರುವ ಅಭಿಮಾನದ ನಡೆ ಸದ್ಯ ಗಾಂಧಿನಗರದಲ್ಲಿ ಚರ್ಚೆಯ ವಿಷಯವಾಗಿದೆ.