ಇಂಡಿಯಾ ದಕ್ಷಿಣ ಆಫ್ರಿಕಾದ ವಿರುದ್ಧ ಗುವಾಹಟಿಯಲ್ಲಿ ಅನುಭವಿಸಿದ 408 ರನ್ಗಳ ಹೀನಾಯ ಸೋಲು ನಿಜಕ್ಕೂ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ಸೋಲು ಎಂದು ಹೇಳಬಹುದು. ಭಾರತೀಯ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಮ್ಯಾಚ್ ಸೋಲಿನ ಬಳಿಕ ಮಾತನಾಡಿದ್ದು, ಕೆಲವೊಂದಿಷ್ಟು ವಿಷಯಗಳ ಚರ್ಚೆ ಕೂಡ ನಡೆಯಿತು. ಏನಾದ್ರು ಗಂಭೀರ್ ಅವರು ಕೋಚ್ ಹುದ್ದೆಯಿಂದ ಕೆಳಗೆ ಇಳಿಯುತ್ತಾರಾ ಎನ್ನುವ ಪ್ರಶ್ನೆಗೆ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ 2-0 ಸರಣಿ ವೈಟ್ವಾಶ್ ನಂತರ ಮಾತನಾಡಿದ ಗಂಭೀರ್ ಅವರು ವಿಮರ್ಶಕರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯ ಹಾಗೂ ಇಂಗ್ಲೆಂಡ್ ವಿರುದ್ಧದ 2-2 ಡ್ರಾ ನೆನಪಿಸಿದರು.
ಸರಣಿ ಸೋಲಿನ ನಂತರ ಬುಧವಾರ ಗೌತಮ್ ಗಂಭೀರ್ ಅವರಿಗೆ ಸೋಲಿನ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರ ಕೊಡುವಾಗ ಮೊದಲು ಗಂಭೀರ್ ನಾನು ಮುಖ್ಯವಲ್ಲ ಭಾರತೀಯ ಕ್ರಿಕೆಟ್ (Indian Cricket) ಮಾತ್ರ ಮುಖ್ಯ ಎಂದು ಹೇಳಿದರು. ನಂತರ ಪತ್ರಕರ್ತರ ಪ್ರಶ್ನೆ ಹೀಗಿತ್ತು. ಟೆಸ್ಟ್ ಕ್ರಿಕೆಟ್ನಲ್ಲಿ ಈ ಹುದ್ದೆಗೆ ನೀವು ಸರಿಯಾದ ವ್ಯಕ್ತಿ ಅಂತ ಭಾವಿಸ್ತೀರಾ? ನನ್ನ ಭವಿಷ್ಯ ನಿರ್ಧರಿಸುವುದು ಬಿಸಿಸಿಐಗೆ ಬಿಟ್ಟಿದ್ದು ಎಂದು ಹೇಳಿದರು "ನನ್ನ ಭವಿಷ್ಯವನ್ನು ನಿರ್ಧರಿಸುವುದು ಬಿಸಿಸಿಐ ಕೆಲಸ. ಆದರೆ ನಾನು ಇಂಗ್ಲೆಂಡ್ನಲ್ಲಿ ಫಲಿತಾಂಶ ತಂದುಕೊಟ್ಟವನು, ಚಾಂಪಿಯನ್ಸ್ ಟ್ರೋಫಿ ಗೆದ್ದ ಕೋಚ್ ಕೂಡ ನಾನು. ಮಾತು ಮುಂದುವರೆಸಿದ ಗಂಭೀರ್ ಅವರು ದೋಷ ಎಲ್ಲರಲ್ಲಿದೆ, ಆದರೆ ಅದು ನನ್ನಿಂದಲೇ ಆರಂಭವಾಗುತ್ತದೆ.
ಗಂಭೀರ ಇನ್ನಷ್ಟು ಹೇಳಿದರು: "ನಾವು ಉತ್ತಮವಾಗಿ ಆಡಬೇಕು. 95/1ರಿಂದ 122/7ಕ್ಕೆ ಕುಸಿಯುವುದು ಅಸ್ವೀಕಾರಾರ್ಹ. ಯಾವುದೇ ವ್ಯಕ್ತಿಯನ್ನೂ ಅಥವಾ ಒಂದು ಶಾಟ್ನನ್ನೂ ದೋಷಾರೋಪಣೆ ಮಾಡಬಾರದು. ದೋಷ ಎಲ್ಲರಲ್ಲಿದೆ. ನಾನು ಎಂದಿಗೂ ವ್ಯಕ್ತಿಗಳನ್ನು ದೋಷಾರೋಪಣೆ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ." ಗಂಭೀರ್ ಅವರ ಕೋಚ್ ಅವಧಿಯಲ್ಲಿ ಭಾರತವು 18 ಟೆಸ್ಟ್ಗಳಲ್ಲಿ 10 ಸೋಲು ಅನುಭವಿಸಿದೆ, ಇದರಲ್ಲಿ ಕಳೆದ ವರ್ಷ ನ್ಯೂಜಿಲ್ಯಾಂಡ್ ವಿರುದ್ಧ ಹಾಗೂ ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ವೈಟ್ವಾಶ್ಗಳು (ಎರಡೂ ಭಾರತದಲ್ಲೇ) ಸೇರಿವೆ. ಗುವಾಹಟಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ಭಾರತಕ್ಕೆ ರನ್ಗಳ ಅಂತರದಲ್ಲಿ ಅತಿ ದೊಡ್ಡ ಸೋಲು ಆಗಿದೆ. ಇತ್ತೀಚೆಗೆ ಗೌತಮ್ ಅವರು ಮಾಡಿದ ತಂಡದಲ್ಲಿಯ ಅತಿಯಾದ ಬದಲಾವಣೆಗಳು ಹಾಗೂ ಆಲ್ರೌಂಡರ್ಗಳ ಮೇಲೆ ಹೆಚ್ಚು ಒತ್ತು ನೀಡಿರುವುದಕ್ಕಾಗಿ ಟೀಕೆಗೆ ಗುರಿಯಾಗಿದ್ದಾರೆ.
ಅವರು ಕೊನೆಗೆ ಹೇಳಿದರು: "ಟೆಸ್ಟ್ ಕ್ರಿಕೆಟ್ ಆಡಲು ಅತ್ಯಂತ ಆಕರ್ಷಕ ಹಾಗೂ ಪ್ರತಿಭಾವಂತ ಆಟಗಾರರ ಅಗತ್ಯವಿಲ್ಲ. ನಮಗೆ ಬೇಕಾಗಿರುವುದು ಸೀಮಿತ ಕೌಶಲ್ಯ ಹೊಂದಿರುವ ಕಠಿಣ ವ್ಯಕ್ತಿತ್ವದ ಆಟಗಾರರು. ಅವರು ಉತ್ತಮ ಟೆಸ್ಟ್ ಕ್ರಿಕೆಟಿಗರಾಗುತ್ತಾರೆ." ಎಂದು ಕೊನೆಯಲ್ಲಿ ಹೇಳಿದ್ದಾರೆ.